ಸಚಿನ್ ವಾಜೆ ಅಮಾನತು ಪ್ರಕರಣ: ಸರ್ಕಾರಕ್ಕೆ ಮುಜುಗರ ತಪ್ಪಿಸಲು ಶರದ್ ಪವಾರ್-ಉದ್ಧವ್ ಠಾಕ್ರೆ ಮಾತುಕತೆ

ಸಹಾಯಕ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದ್ದರಿಂದ ಮಹಾವಿಕಾಸ್ ಅಘಡಿ ಸರ್ಕಾರಕ್ಕೆ ಹಿನ್ನಡೆ ಉಂಟಾಗಿತ್ತು. ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿರುವ ಬಿಜೆಪಿ, ಸಚಿನ್ ವಾಜ್​ಗೆ ಠಾಕ್ರೆ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ಆರೋಪಿಸಿತ್ತು.

ಸಚಿನ್ ವಾಜೆ ಅಮಾನತು ಪ್ರಕರಣ: ಸರ್ಕಾರಕ್ಕೆ ಮುಜುಗರ ತಪ್ಪಿಸಲು ಶರದ್ ಪವಾರ್-ಉದ್ಧವ್ ಠಾಕ್ರೆ ಮಾತುಕತೆ
ಶರದ್ ಪವಾರ್ (ಸಂಗ್ರಹ ಚಿತ್ರ)
Edited By:

Updated on: Apr 06, 2022 | 7:06 PM

ಮುಂಬೈ: ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣ ಹಾಗೂ ಕಾರ್ ಮಾಲೀಕ ಉದ್ಯಮಿ ಮನ್​ಸುಖ್ ಹಿರೇನ್ ಸಾವು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಚಿನ್ ವಾಜೆ ಪರ ವಹಿಸಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರಕ್ಕೆ ಅಸಮಾಧಾನ ಹೊರಹಾಕಿರುವ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು (ಮಾರ್ಚ್ 15) ಮಧ್ಯಾಹ್ನ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಕೂಡ ಪ್ರಕರಣದ ಕುರಿತು ಬಿಕ್ಕಟ್ಟು ಶಮನ ಮಾಡಲು ಠಾಕ್ರೆಯನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಉಂಟಾಗಿರುವ ವಿವಾದಕ್ಕೆ ಮಹಾವಿಕಾಸ್ ಅಘಾಡಿ (MVA) ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಸಹಾಯಕ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದ್ದರಿಂದ ಮಹಾವಿಕಾಸ್ ಅಘಾಡಿ ಸರ್ಕಾರಕ್ಕೆ ಹಿನ್ನಡೆ ಉಂಟಾಗಿತ್ತು. ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿರುವ ಬಿಜೆಪಿ, ಸಚಿನ್ ವಾಜೆ​ಗೆ ಠಾಕ್ರೆ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ಆರೋಪಿಸಿತ್ತು.

ಮೂಲಗಳ ಮಾಹಿತಿ ಪ್ರಕಾರ, ಶರದ್ ಪವಾರ್ ಹಾಗೂ ಠಾಕ್ರೆ ಬಿಕ್ಕಟ್ಟು ಶಮನಕ್ಕೆ ಇರುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಚಿನ್ ವಾಜೆ ವಿಚಾರವನ್ನು ಮಹಾವಿಕಾಸ್ ಅಘಡಿ ಸರ್ಕಾರ ನಡೆಸಿಕೊಂಡಿರುವ ರೀತಿ, ಪ್ರಕರಣವನ್ನು ಮುಚ್ಚಿಹಾಕಲು ಮಹಾರಾಷ್ಟ್ರ ಸರ್ಕಾರ ವರ್ತಿಸಿದ ರೀತಿ ಸರಿಯಿಲ್ಲ ಎಂದು ಪವಾರ್ ಬೇಸರ ವ್ಯಕ್ತಡಿಸಿರುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ.

ಶಿವಸೇನೆಯ ಪ್ರಮುಖ ನಾಯಕರಾದ ಅನಿಲ್ ಪರಾಬ್ ಮತ್ತು ಏಕ್​ನಾಥ್ ಶಿಂಧೆ ಕೂಡ ಹಾಜರಿದ್ದ ಈ ಸಭೆಯಲ್ಲಿ ಇಡೀ ಘಟನೆಯಿಂದ ದೂರವಾಗಲು ರಾಜ್ಯ ಸರ್ಕಾರ ಮನಮಾಡಿದೆ ಎಂದೂ ಮಾಹಿತಿ ಲಭಿಸಿದೆ. ಈ ಸಂಬಂಧ ಶೀಘ್ರವೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶರದ್ ಪವಾರ್ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಪತ್ತೆ ಪ್ರಕರಣ ; ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಸ್ಪೆಂಡ್

ಇದನ್ನೂ ಓದಿ: ಅಂಬಾನಿ ಮನೆ ಮುಂದೆ ಕಾರಿನಲ್ಲಿ ಜಿಲೆಟಿನ್ ಪತ್ತೆ ಪ್ರಕರಣ: ಉದ್ಯಮಿ ಮನ್​ಸುಖ್ ಹಿರೇನ್ ಸಾವಿಗೆ ಪೊಲೀಸ್ ಅಧಿಕಾರಿ ಸಚಿನ್ ವಾಜ್ ನಂಟು?

Published On - 9:07 pm, Mon, 15 March 21

Web contact

TV9 Kannada

Read More
Follow Us