ಅಂಬಾನಿ ಮನೆ ಮುಂದೆ ಕಾರಿನಲ್ಲಿ ಜಿಲೆಟಿನ್ ಪತ್ತೆ ಪ್ರಕರಣ: ಉದ್ಯಮಿ ಮನ್​ಸುಖ್ ಹಿರೇನ್ ಸಾವಿಗೆ ಪೊಲೀಸ್ ಅಧಿಕಾರಿ ಸಚಿನ್ ವಾಜ್ ನಂಟು?

ಮನ್​ಸುಖ್ ಹಿರೇನ್ ಪತ್ನಿ ನಾಲ್ಕು ತಿಂಗಳ ಅವಧಿಗೆ ಅಂದರೆ ಫೆಬ್ರವರಿ 5ರ ವರೆಗೆ ಕಾರ್​ನ್ನು ಪೊಲೀಸರಿಗೆ ನೀಡಿರುವುದಾಗಿ ತಿಳಿಸಿದ್ದರು. ಕೆಲ ದಿನಗಳ ಬಳಿಕ ಕಾರ್ ಕಳವಾಗಿತ್ತು. ಮನ್​ಸುಖ್ ಹಿರೇನ್ ಮೃತಪಟ್ಟಿರುವ ಪ್ರಕರಣದಲ್ಲಿ ಸಚಿನ್ ವಾಜೆ ಪಾತ್ರ ಇದೆ ಎಂದು ಪತ್ನಿ ಆರೋಪಿಸಿದ್ದರು.

ಅಂಬಾನಿ ಮನೆ ಮುಂದೆ ಕಾರಿನಲ್ಲಿ ಜಿಲೆಟಿನ್ ಪತ್ತೆ ಪ್ರಕರಣ: ಉದ್ಯಮಿ ಮನ್​ಸುಖ್ ಹಿರೇನ್ ಸಾವಿಗೆ ಪೊಲೀಸ್ ಅಧಿಕಾರಿ ಸಚಿನ್ ವಾಜ್ ನಂಟು?
ಸಚಿನ್ ವಾಜೆ
Follow us
| Updated By: ganapathi bhat

Updated on:Apr 06, 2022 | 7:11 PM

ಮುಂಬೈ: ಉದ್ಯಮಿ ಮನ್​ಸುಖ್ ಹಿರೇನ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ, ತನಿಖಾ ಏಜೆನ್ಸಿಗಳ ಪರಿಧಿಯಲ್ಲಿ ಸಿಲುಕಿರುವ ಮಹಾರಾಷ್ಟ್ರದ ಸಹಾಯಕ ಪೊಲೀಸ್ ಅಧಿಕಾರಿ ಸಚಿನ್ ವಾಜ್ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಮಾರ್ಚ್ 19ರ ದಿನಾಂಕ ನೀಡಿ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.

ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳನ್ನು ಇರಿಸಿದ ಮಹೇಂದ್ರಾ ಸ್ಕಾರ್ಪಿಯೋ ಕಾರನ್ನು ನಿರ್ವಹಿಸುತ್ತಿದ್ದ ಮನ್​ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು. ಮುಂಬೈ ಪೊಲೀಸರು ಮನ್​ಸುಖ್ ಹಿರೇನ್ ಅವರ ಮೃತದೇಹವನ್ನು ಪತ್ತೆಹಚ್ಚಿದ್ದರು. ಕೆಲ ದಿನಗಳಿಂದ ಮನ್​ಸುಖ್ ಹಿರೇನ್ ನಾಪತ್ತೆಯಾಗಿದ್ದರು ಎಂದು ಅವರ ಸಂಬಂಧಿಕರೋರ್ವರು ಪ್ರಕರಣ ದಾಖಲಿಸಿದ್ದರು. ಸ್ಫೋಟಕ ತುಂಬಿದ್ದ ಕಾರು ಮಾಲೀಕ ಶವವಾಗಿ ಪತ್ತೆ ಹಿನ್ನೆಲೆ ಪ್ರಕರಣದ ತನಿಖೆ ಎನ್‌ಐಎಗೆ ವಹಿಸಲು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಆಗ್ರಹಿಸಿದ್ದರು.

ಕಾರಿನ ನೈಜ ಮಾಲೀಕ ಸ್ಯಾಮ್ ಮ್ಯೂಟನ್ , ಮನಸುಖ್ ಹಿರೇನ್ ಅವರಿಗೆ ನಿರ್ವಹಣೆಗಾಗಿ ಕಾರನ್ನು ನೀಡಿದ್ದರು. ಆದರೆ ಸ್ಯಾಮ್ ಮ್ಯೂಟನ್, ನೀಡಬೇಕಿದ್ದ ಹಣವನ್ನು ಪಾವತಿಸದಿದ್ದ ಕಾರಣ ಮನ್​ಸುಖ್ ಹಿರೇನ್ ಅವರೇ ಕಾರನ್ನು ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.

ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳ ಜತೆ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರಿಗೆ ಬೆದರಿಕೆಯೊಡ್ಡಿರುವ ಪತ್ರವೊಂದು ಲಭಿಸಿತ್ತು. ಈ ಕಾರಿನಲ್ಲಿ ಸ್ಫೋಟಕವನ್ನು ಅಸೆಂಬಲ್ ಮಾಡಿಲ್ಲ, ಮುಂದಿನ ಬಾರಿ ಇದೇ ರೀತಿಯಲ್ಲಿರುವುದಿಲ್ಲ ಎಂದು ಪತ್ರದಲ್ಲಿ ಬರೆದಿತ್ತು. ಈ ಪತ್ರ ಹಿಂದಿಯಿಂದ ಇಂಗ್ಲಿಷಿಗೆ ತರ್ಜುಮೆ ಮಾಡಿ ಬರೆದದ್ದಾಗಿದ್ದು, ಹಲವಾರು ಅಕ್ಷರ ದೋಷಗಳಿದ್ದವು. ಪತ್ರವನ್ನು ನೋಡಿದರೆ ಪತ್ರ ಬರೆದ ವ್ಯಕ್ತಿಗೆ ಸರಿಯಾಗಿ ಬರೆಯಲು ಬರುವುದಿಲ್ಲ ಅಥವಾ ಬರೆಯಲು ಗೊತ್ತಿಲ್ಲ ಎಂಬಂತೆ ನಟಿಸಿದ್ದಾಗಿರಬಹುದು ಎಂದು ಮುಂಬೈ ಪೊಲೀಸರು ಹೇಳಿರುವುದಾಗಿ ವರದಿಯಾಗಿತ್ತು.

ಆದರೆ, ಮನ್​ಸುಖ್ ಹಿರೇನ್ ಪತ್ನಿ ನಾಲ್ಕು ತಿಂಗಳ ಅವಧಿಗೆ ಅಂದರೆ ಫೆಬ್ರವರಿ 5ರ ವರೆಗೆ ಕಾರ್​ನ್ನು ಪೊಲೀಸರಿಗೆ ನೀಡಿರುವುದಾಗಿ ತಿಳಿಸಿದ್ದರು. ಕೆಲ ದಿನಗಳ ಬಳಿಕ ಕಾರ್ ಕಳವಾಗಿತ್ತು. ಮನ್​ಸುಖ್ ಹಿರೇನ್ ಮೃತಪಟ್ಟಿರುವ ಪ್ರಕರಣದಲ್ಲಿ ಸಚಿನ್ ವಾಜ್ ಪಾತ್ರ ಇದೆ ಎಂದು ಪತ್ನಿ ಆರೋಪಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ಹಾಗೂ ಭಯೋತ್ಪಾದಕ ವಿರೋಧಿ ದಳ (ATS) ತನಿಖೆಯಲ್ಲಿ ತೊಡಗಿದೆ. ಸಚಿನ್ ವಾಜ್ ಬಂಧನಕ್ಕೂ ಮೊದಲು ಥಾಣೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣಕ್ಕೆ ತಿಹಾರ್ ಜೈಲಿನ ಲಿಂಕ್!

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇರಿಸಿದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ

Published On - 5:12 pm, Sat, 13 March 21