AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಸ್ಕೂಟಿ ಓಡಿಸುತ್ತಿದ್ದ ಆಕೆ ಕಾರಿನಡಿ ಸಿಲುಕಿದ್ದು ಗೊತ್ತಾದರೂ ಕಾರು ನಿಲ್ಲಿಸಲಿಲ್ಲ; ಕರಾಳ ರಾತ್ರಿಯ ಘಟನೆ ಬಿಚ್ಚಿಟ್ಟ ದೆಹಲಿ ಯುವತಿಯ ಗೆಳತಿ

ಕಾರು ನಮಗೆ ಡಿಕ್ಕಿ ಹೊಡೆದಾಗ ನಾನು ಎಡಕ್ಕೆ ಬಿದ್ದೆ. ನನ್ನ ಸ್ನೇಹಿತೆ ಕಾರಿನಡಿ ಸಿಲುಕಿಕೊಂಡಳು. ಆಕೆ ತಮ್ಮ ಕಾರಿನಡಿ ಸಿಲುಕಿಕೊಂಡಿದ್ದಾಳೆ ಎಂದು ತಿಳಿದಿದ್ದರೂ ಅವರು ಉದ್ದೇಶಪೂರ್ವಕವಾಗಿ ಅವಳನ್ನು ಎಳೆದುಕೊಂಡು ಹೋದರು ಎಂದು ನಿಧಿ ಹೇಳಿದ್ದಾಳೆ.

ಕುಡಿದು ಸ್ಕೂಟಿ ಓಡಿಸುತ್ತಿದ್ದ ಆಕೆ ಕಾರಿನಡಿ ಸಿಲುಕಿದ್ದು ಗೊತ್ತಾದರೂ ಕಾರು ನಿಲ್ಲಿಸಲಿಲ್ಲ; ಕರಾಳ ರಾತ್ರಿಯ ಘಟನೆ ಬಿಚ್ಚಿಟ್ಟ ದೆಹಲಿ ಯುವತಿಯ ಗೆಳತಿ
ದೆಹಲಿಯಲ್ಲಿ ಯುವತಿಗೆ ಅಪಘಾತ ಮಾಡಿದ ಕಾರುImage Credit source: NDTV
TV9 Web
| Edited By: |

Updated on:Jan 04, 2023 | 9:54 AM

Share

ನವದೆಹಲಿ: ಜನವರಿ 1ರಂದು ರಾತ್ರಿ ದೆಹಲಿಯ ಕಾಂಜ್ವಾಲಾ (Kanjhawala) ಪ್ರದೇಶದಲ್ಲಿ ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು ಕಿ.ಮೀ.ಗಟ್ಟಲೆ ದೂರಕ್ಕೆ ಎಳೆದುಕೊಂಡು ಹೋಗಿತ್ತು. ಇದಾದ ಬಳಿಕ ಆಕೆ ಸಾವನ್ನಪ್ಪಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ಹಲವು ಹೊಸ ವಿಚಾರಗಳು ಬಯಲಾಗುತ್ತಿವೆ. ಅಪಘಾತ (Delhi Accident) ಸಂಭವಿಸುವ ಸಂದರ್ಭದಲ್ಲಿ ಮೃತ ಯುವತಿ ಮಾತ್ರವಲ್ಲದೆ ಆಕೆಯ ಜೊತೆಗೆ ನಿಧಿ ಎಂಬ ಸ್ನೇಹಿತೆಯೂ ಇದ್ದಳು. ಕಾರು ಡಿಕ್ಕಿ ಹೊಡೆದು, ಯುವತಿಯನ್ನು ಎಳೆದುಕೊಂಡು ಹೋದ ಕೂಡಲೆ ಭಯದಿಂದ ನಿಧಿ ಅಲ್ಲಿಂದ ಓಡಿಹೋಗಿದ್ದಳು.

ಇದೀಗ ನಿಧಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಆಕೆ ಕುತೂಹಲಕಾರಿ ವಿಷಯವನ್ನು ತೆರೆದಿಟ್ಟಿದ್ದಾಳೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಈವೆಂಟ್ ಮ್ಯಾನೇಜ್​ಮೆಂಟ್ ಇದ್ದುದರಿಂದ ನಾವಿಬ್ಬರೂ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದೆವು. ಆಗ ಸ್ಕೂಟಿ ಓಡಿಸುತ್ತಿದ್ದ ನನ್ನ ಗೆಳತಿ ಕೂಡ ಕುಡಿದಿದ್ದಳು. ಅಷ್ಟರಲ್ಲಿ ಹಿಂದಿನಿಂದ ವೇಗವಾಗಿ ಬಂದ ಕಾರು ನಮ್ಮ ಸ್ಕೂಟಿಗೆ ಡಿಕ್ಕಿ ಹೊಡೆಯಿತು. ಈ ವೇಳೆ ಆಕೆಯ ಬಟ್ಟೆ ಕಾರಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ಆಕೆ ರಸ್ತೆಗೆ ಬಿದ್ದಳು. ನಾವು ಕೂಗಿ ಕರೆದರೂ ಕಾರಿನವರು ಕಾರು ನಿಲ್ಲಿಸಲಿಲ್ಲ. ನನ್ನ ಕಣ್ಣೆದುರಲ್ಲೇ ಕಾರಿನಡಿ ಸಿಲುಕಿದ ಗೆಳತಿಯನ್ನು ಕಾರು ಎಳೆದುಕೊಂಡು ಹೋಯಿತು ಎಂದು ನಿಧಿ ಆ ದಿನ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ.

“ಕಾರು ನಮಗೆ ಡಿಕ್ಕಿ ಹೊಡೆದ ನಂತರ ನಾನು ಎಡಕ್ಕೆ ಬಿದ್ದೆ. ನನ್ನ ಸ್ನೇಹಿತೆ ಕಾರಿನಡಿ ಸಿಲುಕಿಕೊಂಡಳು. ಆಕೆ ತಮ್ಮ ಕಾರಿನ ಕೆಳಗೆ ಸಿಲುಕಿಕೊಂಡಿದ್ದಾಳೆ ಎಂದು ತಿಳಿದಿದ್ದರೂ ಅವರು ಉದ್ದೇಶಪೂರ್ವಕವಾಗಿ ಅವಳನ್ನು ಎಳೆದುಕೊಂಡು ಹೋದರು. ನಾನು ಭಯದಿಂದ ಅಲ್ಲಿಂದ ಮನೆಗೆ ಹೋದೆ. ಮನೆಯಲ್ಲೂ ಯಾರಿಗೂ ಏನೂ ಹೇಳಲಿಲ್ಲ” ಎಂದು ನಿಧಿ ಹೇಳಿದ್ದಾಳೆ.

ಇದನ್ನೂ ಓದಿ: ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ; ದೆಹಲಿ ಯುವತಿಯ ಸಾವಿನ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಬೇಸರ

ನನ್ನ ಗೆಳತಿ ಕುಡಿದ ಮತ್ತಿನಲ್ಲಿ ಸ್ಕೂಟಿ ಚಲಾಯಿಸಿದ್ದೇ ತಪ್ಪು. ನಾನು ಅವಳಿಗೆ ಸ್ಕೂಟಿ ಓಡಿಸಬೇಡ, ನನಗೆ ಓಡಿಸಲು ಕೊಡು ಎಂದು ತುಂಬಾ ಒತ್ತಾಯಿಸಿದ್ದೆ. ಅವಳು ಕೇಳಲಿಲ್ಲ ಎಂದು ನಿಧಿ ಹೇಳಿದ್ದಾಳೆ.

ಏನಿದು ಘಟನೆ?: ಭಾನುವಾರ ನಸುಕಿನ ಜಾವ 20 ವರ್ಷದ ದೆಹಲಿಯ ಯುವತಿಯ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದು 20 ಕಿ.ಮೀ ದೂರಕ್ಕೆ ಆಕೆಯನ್ನು ಎಳೆದುಕೊಂಡು ಹೋಗಿತ್ತು. ಇದರಿಂದ ಆ ಯುವತಿ ಸಾವನ್ನಪ್ಪಿದ್ದಳು. ಭಾನುವಾರ ಮುಂಜಾನೆ ಸಾವನ್ನಪ್ಪಿದ 20 ವರ್ಷದ ಯುವತಿ ಆರೋಪಿಯ ಕಾರಿನ ಕೆಳಗೆ ಸಿಲುಕಿಕೊಂಡಿದ್ದು, ಆಕೆಯನ್ನು ರಸ್ತೆಯಲ್ಲಿ ಎಳೆದೊಯ್ಯಲಾಗಿತ್ತು. ಬಟ್ಟೆಯೆಲ್ಲ ಹರಿದುಹೋಗಿ, ಮೈಕೈ ಎಲ್ಲ ಗಾಯಗೊಂಡು ಬೆತ್ತಲಾಗಿ ರಸ್ತೆಯಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಭಾನುವಾರ ಮುಂಜಾನೆ 3.30ರ ಸುಮಾರಿಗೆ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ, ಕುಡಿದು ವಾಹನ ಚಲಾಯಿಸುತ್ತಿದ್ದ ಐವರ ಕಾರು ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆ ವೇಳೆ ಆಕೆಯ ಬಟ್ಟೆ ಕಾರಿಗೆ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಆ ಕಾರು ಆಕೆಯನ್ನು 20 ಕಿ.ಮೀವರೆಗೂ ಎಳೆದುಕೊಂಡು ಹೋಗಿತ್ತು. ಕಂಠಪೂರ್ತಿ ಕುಡಿದಿದ್ದರಿಂದ ಆಕೆ ತಮ್ಮ ಕಾರಿನಡಿ ಸಿಲುಕಿಕೊಂಡಿದ್ದು ಆ ಐವರಿಗೆ ತಿಳಿದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ದೆಹಲಿಯ ಯುವತಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು; ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲು

ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ಮಿಠಾಯಿ ಅಂಗಡಿಯನ್ನು ನಡೆಸುತ್ತಿದ್ದು, ಅವರು ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದರು. ಆರೋಪಿಗಳು ಯು-ಟರ್ನ್ ತೆಗೆದುಕೊಳ್ಳುವ ಮೂಲಕ ಸುಮಾರು 4ರಿಂದ 5 ಕಿಲೋಮೀಟರ್ ಒಂದೇ ರಸ್ತೆಯಲ್ಲಿ ಪದೇ ಪದೇ ವಾಹನ ಚಲಾಯಿಸುತ್ತಿದ್ದರು. ಹೀಗಾಗಿ, ಇದು ಕೇವಲ ಅಪಘಾತವಲ್ಲ. ಆಕೆ ಕಾರಿನಡಿ ಸಿಲುಕಿದ್ದು ತಿಳಿದೇ ಅವರು ಆಕೆಯನ್ನು ಎಳೆದುಕೊಂಡು ಹೋಗಿದ್ದರು ಎಂದು ದಹಿಯಾ ಹೇಳಿದ್ದರು.

ನನ್ನ ಅಂಗಡಿ ಮುಂದೆಯೇ ಹಲವು ರೌಂಡ್ ತಿರುಗಿದ ಅವರನ್ನು ತಡೆಯಲು ನಾನು ಹಲವು ಬಾರಿ ಯತ್ನಿಸಿದರೂ ವಾಹನ ನಿಲ್ಲಿಸದೆ ಸುಮಾರು ಒಂದೂವರೆ ಗಂಟೆಗಳ ಕಾಲ ಯುವತಿಯ ಶವವನ್ನು ಸುಮಾರು 20 ಕಿ.ಮೀ ಹೊತ್ತು ಸಾಗಿಸಿದರು ಎಂದು ಪ್ರತ್ಯಕ್ಷದರ್ಶಿ ದಹಿಯಾ ಹೇಳಿದ್ದಾರೆ. ಅವರು ತನ್ನ ಬೈಕ್​ನಲ್ಲಿ ಕಾರನ್ನು ಹಿಂಬಾಲಿಸಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದರು. ಸುಮಾರು ಒಂದೂವರೆ ಗಂಟೆಗಳ ನಂತರ ಆ ಯುವತಿಯ ಶವವು ಕಾಂಜ್ವಾಲಾ ರಸ್ತೆಯ ಜ್ಯೋತಿ ಗ್ರಾಮದ ಬಳಿ ಕಾರಿನಿಂದ ಹೊರಗೆ ಬಿದ್ದಿತು. ನಂತರ ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದರು. ಆರೋಪಿಗಳು ಈ ಅಪಘಾತದ ವೇಳೆ ಕಾರಿನ ಗ್ಲಾಸ್ ಹಾಕಿಕೊಂಡಿದ್ದರು. ಅಲ್ಲದೆ, ಕಾರಿನೊಳಗೆ ಜೋರಾಗಿ ಸಂಗೀತ ಹಾಕಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:53 am, Wed, 4 January 23