ಮಜಾ ಮಾಡಲು ಹೋಗಿ ಹೆಣವಾಗಿ ಮರಳಿದ ಪ್ರವಾಸಿಗ; 10 ಅಡಿ ಎತ್ತರದಿಂದ ಸ್ವಿಮ್ಮಿಂಗ್ ಪೂಲ್‌ಗೆ ಜಂಪ್ ಮಾಡಿದ ಯುವಕ ಸ್ಥಳದಲ್ಲೇ ಸಾವು

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಣ್ ರೆಸಾರ್ಟ್‌ನ ಈಜುಕೊಳದಲ್ಲಿ ಯುವಕನ ದುರಂತ ಸಾವು ಸಂಭವಿಸಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ 25 ವರ್ಷದ ಶ್ರೇಣಿಕ್ ಮಿಲಿಂದ್, ಎತ್ತರದಿಂದ ಈಜುಕೊಳದ ಆಳವಿಲ್ಲದ ಭಾಗಕ್ಕೆ ತಲೆಕೆಳಗಾಗಿ ದುಮುಕಿದಾಗ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದ್ದು, ಪ್ರವಾಸಿಗರಿಗೆ ಇಂತಹ ಸಾಹಸಗಳಿಂದ ದೂರವಿರಲು ಎಚ್ಚರಿಕೆ ನೀಡಿದ್ದಾರೆ.

ಮಜಾ ಮಾಡಲು ಹೋಗಿ ಹೆಣವಾಗಿ ಮರಳಿದ ಪ್ರವಾಸಿಗ; 10 ಅಡಿ ಎತ್ತರದಿಂದ ಸ್ವಿಮ್ಮಿಂಗ್ ಪೂಲ್‌ಗೆ ಜಂಪ್ ಮಾಡಿದ ಯುವಕ ಸ್ಥಳದಲ್ಲೇ ಸಾವು
ಈಜುಕೊಳ ಸಾವುದಲ್ಲಿ ಸಾವನ್ನಪ್ಪಿದ ಯುವಕ
Image Credit source: social Media

Updated on: Jun 29, 2026 | 8:20 AM

ಮುಖ್ಯಾಂಶಗಳು

  • ರೆಸಾರ್ಟ್ ಒಂದರಲ್ಲಿ ಮಜಾ ಮಾಡುತ್ತಿದ್ದ 25 ವರ್ಷದ ಯುವಕ
  • ಹತ್ತು ಅಡಿ ಎತ್ತರದಿಂದ ತಲೆಕೆಳಗಾಗಿ ದುಮುಕಿದ ಪರಿಣಾಮ ಸ್ಥಳದಲ್ಲೇ ಸಾವು
  • ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಣ್‌ನ ವಾಯರಿದಲ್ಲಿ ಘಟನೆ

ಸಿಂಧುದುರ್ಗ, ಜೂ.29: ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದು ರೆಸಾರ್ಟ್ ಒಂದರಲ್ಲಿ ಮಜಾ ಮಾಡುತ್ತಿದ್ದ 25 ವರ್ಷದ ಯುವಕನೊಬ್ಬ, ಈಜುಕೊಳದ ಆಳ ತಿಳಿಯದೆ ಎಂಟರಿಂದ ಹತ್ತು ಅಡಿ ಎತ್ತರದಿಂದ ತಲೆಕೆಳಗಾಗಿ ದುಮುಕಿದ (Dive) ಪರಿಣಾಮ ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಣ್‌ನ ವಾಯರಿ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೊಲ್ಲಾಪುರ ಜಿಲ್ಲೆಯ ಮೂಲದ ಶ್ರೇಣಿಕ್ ಮಿಲಿಂದ್ ಟಾಕಳೆ (25) ಮೃತಪಟ್ಟ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.

ಮೃತ ಶ್ರೇಣಿಕ್ ಮಿಲಿಂದ್ ತನ್ನ ಒಂಬತ್ತು ಜನ ಸ್ನೇಹಿತರ ತಂಡದೊಂದಿಗೆ ಮಾಲ್ವಣ್‌ನ ವಾಯರಿ ವ್ಯಾಪ್ತಿಯ ರೆಸಾರ್ಟ್‌ಗೆ ಜೂನ್ 20 ರಂದು ಪ್ರವಾಸಕ್ಕೆ ಬಂದಿದ್ದನು. ದುರಂತ ಸಂಭವಿಸುವ ಕೆಲವೇ ಕ್ಷಣಗಳ ಮುನ್ನ ಇಡೀ ಸ್ನೇಹಿತರ ಬಳಗ ಈಜುಕೊಳದ ಪಕ್ಕದಲ್ಲಿ ಅತ್ಯಂತ ಸಡಗರದಿಂದ ಡ್ಯಾನ್ಸ್ ಮಾಡುತ್ತಿದ್ದರು. ಈ ದೃಶ್ಯವನ್ನು ಆತನ ಸ್ನೇಹಿತರೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್​ ಮಾಡುತ್ತಿದ್ದರು. ಈ ವೇಳೆ ಶ್ರೇಣಿಕ್ ಸುಮಾರು 8 ರಿಂದ 10 ಅಡಿ ಎತ್ತರದ ಗೋಡೆಯನ್ನು ಹತ್ತಿ, ಅಲ್ಲಿಂದ ನೇರವಾಗಿ ಈಜುಕೊಳಕ್ಕೆ ತಲೆಕೆಳಗಾಗಿ ಡೈವ್ ಮಾಡಿದ್ದಾನೆ.

ಇಲ್ಲಿದೆ ನೋಡಿ ವಿಡಿಯೋ:

ಶ್ರೇಣಿಕ್ ಡೈವ್ ಮಾಡಿದ ಈಜುಕೊಳದ ಆ ಭಾಗ ಕೇವಲ 4 ಅಡಿ ಮಾತ್ರ ಆಳವಿತ್ತು ಹಾಗೂ ಅದನ್ನು ಮಕ್ಕಳಿಗಾಗಿ ಮೀಸಲಿಡಲಾಗಿತ್ತು. ಅತಿಯಾದ ಎತ್ತರ ಮತ್ತು ತೀವ್ರ ವೇಗದಿಂದ ದುಮುಕಿದ ಕಾರಣ ಶ್ರೇಣಿಕ್‌ನ ತಲೆ ನೇರವಾಗಿ ಈಜುಕೊಳದ ತಳಭಾಗದ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿದೆ. ತಲೆಯ ಮುಂಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಶ್ರೇಣಿಕ್ ಈಜುಕೊಳದ ನೀರಿನಲ್ಲೇ ಪ್ರಾಣಬಿಟ್ಟಿದ್ದಾನೆ. ತಕ್ಷಣವೇ ಆತನನ್ನು ನೀರಿನಿಂದ ಹೊರತೆಗೆದ ಸ್ನೇಹಿತರು ಮಾಲ್ವಣ್ ಗ್ರಾಮೀಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು: ಮುಂಬೈನಲ್ಲಿ 15 ಸಾವಿರ ಜನರನ್ನು ಮುಗಿಸಲು ಇಲಿ ವಿಷದಿಂದಲೇ ಮಾತ್ರೆ ತಯಾರಿಸಿದ್ದ ಸೈಕೋ

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಮಾಲ್ವಣ್ ಪೊಲೀಸರು ಅಸ್ವಾಭಾವಿಕ ಮರಣಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಪರೀಕ್ಷೆಯ ಪ್ರಕ್ರಿಯೆ ಮುಗಿದ ಬಳಿಕ ಯುವಕನ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಣೇಶ್ ಮಾನೆ ಅವರ ನೇತೃತ್ವದಲ್ಲಿ ಈ ಘಟನೆಯ ಮುಂದಿನ ತನಿಖೆ ನಡೆಯುತ್ತಿದ್ದು, ಪ್ರವಾಸಿಗರು ರೆಸಾರ್ಟ್‌ಗಳಲ್ಲಿ ಇಂತಹ ಸಾಹಸಗಳಿಗೆ ಕೈಹಾಕದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Follow Us