ಚಂದ್ರಬಾಬು ನಾಯ್ಡು ವಿರುದ್ಧದ ಎಫ್ಐಆರ್ ರದ್ದು ಕೋರಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ನಿರಾಕರಣೆ

|

Updated on: Sep 25, 2023 | 4:36 PM

Chandrababu Naidu: ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠವು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಸಲ್ಲಿಕೆ ಮಾಡಿದ ನಂತರ ತುರ್ತು ವಿಚಾರಣೆಯ ಮನವಿಯನ್ನು ಪರಿಗಣಿಸಲು ನಿರಾಕರಿಸಿತು. ಮಂಗಳವಾರ ಮತ್ತೊಮ್ಮೆ ಇದನ್ನು ಪ್ರಸ್ತಾಪಿಸುವಂತೆ ಸಿಜೆಐ ಡಿವೈ ಚಂದ್ರಚೂಡ್ ಅವರು ವಕೀಲ ಲೂತ್ರಾ ಅವರಲ್ಲಿ ಹೇಳಿದ್ದಾರೆ

ಚಂದ್ರಬಾಬು ನಾಯ್ಡು ವಿರುದ್ಧದ ಎಫ್ಐಆರ್ ರದ್ದು ಕೋರಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ನಿರಾಕರಣೆ
ಚಂದ್ರಬಾಬು ನಾಯ್ಡು
Follow us on

ದೆಹಲಿ ಸೆಪ್ಟೆಂಬರ್ 25:ಕೌಶಲ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆಂಧ್ರ ಪ್ರದೇಶದ ಅಪರಾಧ ತನಿಖಾ ಇಲಾಖೆ (CID) ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಚಂದ್ರಬಾಬು ನಾಯ್ಡು (Chandrababu Naidu) ಸಲ್ಲಿಸಿರುವ ಅರ್ಜಿಯನ್ನು  ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ (Supreme Court) ಸೋಮವಾರ ನಿರಾಕರಿಸಿದೆ. ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ವಿಭಾಗೀಯ ಪೀಠವು ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು ಸಲ್ಲಿಕೆ ಮಾಡಿದ ನಂತರ ತುರ್ತು ವಿಚಾರಣೆಯ ಮನವಿಯನ್ನು ಪರಿಗಣಿಸಲು ನಿರಾಕರಿಸಿತು.

ಮಂಗಳವಾರ ಮತ್ತೊಮ್ಮೆ ಇದನ್ನು ಪ್ರಸ್ತಾಪಿಸುವಂತೆ ಸಿಜೆಐ ಡಿವೈ ಚಂದ್ರಚೂಡ್ ಅವರು ವಕೀಲ ಲೂತ್ರಾ ಅವರಲ್ಲಿ ಹೇಳಿದ್ದಾರೆ. ಟಿಡಿಪಿ ನಾಯಕನಿಗೆ ಕಾನೂನು ಹಿನ್ನಡೆಗಳ ಬೆನ್ನಲ್ಲೇ ಆಂಧ್ರಪ್ರದೇಶ ಹೈಕೋರ್ಟ್, ಪ್ರಕರಣ ರದ್ದು ಮಾಡಲು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. ವಿಜಯವಾಡದ ಎಸಿಬಿ ನ್ಯಾಯಾಲಯವು ಅವರ ಕಸ್ಟಡಿಯನ್ನು ಅಕ್ಟೋಬರ್ 5 ರವರೆಗೆ ವಿಸ್ತರಿಸಿದೆ.

ಸೋಮವಾರ ಎಸಿಬಿ ನ್ಯಾಯಾಲಯದಲ್ಲಿ ಚಂದ್ರಬಾಬು ಜಾಮೀನು ಅರ್ಜಿ ವಿಚಾರಣೆ ನಡೆದು ಸಿಐಡಿಯಿಂದ ಪ್ರತಿಕ್ರಿಯೆ ದಾಖಲಿಸಲಾಗಿತ್ತು. ತನಿಖಾ ಸಂಸ್ಥೆಯು ಕಸ್ಟಡಿ ವಿಚಾರಣೆಯ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಸಿಐಡಿ ಚಂದ್ರಬಾಬು ನಾಯ್ಡು ಅವರನ್ನು ಇನ್ನೂ 5 ದಿನಗಳ ಕಾಲ ಕಸ್ಟಡಿಗೆ ಕೇಳಿದೆ ಮತ್ತು ಅದಕ್ಕಾಗಿ ವಿಸ್ತರಣೆ ಮೆಮೊ ಸಲ್ಲಿಸಿದೆ. ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣ ಮತ್ತು ಎಪಿ ಫೈಬರ್ ನೆಟ್ ಪ್ರಕರಣದಲ್ಲಿ ಸಿಐಡಿ ನ್ಯಾಯಾಲಯಕ್ಕೆ ಪಿಟಿ ವಾರಂಟ್ ಅರ್ಜಿಗಳನ್ನು ಸಲ್ಲಿಸಿದೆ.

ಇದನ್ನೂ ಓದಿ: Chandra Babu Naidu: ಎ1 ಆಗಿ ಚಂದ್ರಬಾಬು ನಾಯ್ಡುಗೆ ಕಾಡುತ್ತಿರುವ ಮತ್ತೊಂದು ಪ್ರಕರಣ! ಅದರ ವಿವರ ಇಲ್ಲಿದೆ

ನಾಯ್ಡು ವಿರುದ್ಧದ ಪ್ರಕರಣ

ಎನ್ ಚಂದ್ರಬಾಬು ನಾಯ್ಡು ಅವರು 2015 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸೆಪ್ಟೆಂಬರ್ 9 ರಂದು ಬಂಧಿಸಲಾಯಿತು, ಇದರ ಪರಿಣಾಮವಾಗಿ ರಾಜ್ಯದ ಬೊಕ್ಕಸಕ್ಕೆ 300 ಕೋಟಿಗೂ ಹೆಚ್ಚು ನಷ್ಟವಾಯಿತು. ಅವರ ಬಂಧನದ ನಂತರ, ನಾಯ್ಡು ಅವರನ್ನು 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಪೊಲೀಸ್ ಕಸ್ಟಡಿಗೆ ನೀಡುವ ಮೊದಲು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯವು ಸೆಪ್ಟೆಂಬರ್ 24 ರವರೆಗೆ ಎರಡು ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ