Gyanvapi Mosque case ಜ್ಞಾನವಾಪಿ ಮಸೀದಿ ಪ್ರಕರಣ ವಿಚಾರಣೆ ಅಕ್ಟೋಬರ್​​ಗೆ ಮುಂದೂಡಿಕೆ

ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್ ಮತ್ತು ನೆಲದೊಳಗೆ ರಡಾರ್ ಸರ್ವೇ ನಡೆಸಬೇಕು ಎಂದು ಏಳು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನೂ ಸುಪ್ರೀಂ ವಜಾ ಮಾಡಿದೆ. ಈ ಅರ್ಜಿಯನ್ನು ವಕೀಲರು ಹಿಂಪಡೆದುಕೊಂಡಿದ್ದಾರೆ.

Gyanvapi Mosque case ಜ್ಞಾನವಾಪಿ ಮಸೀದಿ ಪ್ರಕರಣ ವಿಚಾರಣೆ ಅಕ್ಟೋಬರ್​​ಗೆ ಮುಂದೂಡಿಕೆ
ಸುಪ್ರೀಂಕೋರ್ಟ್
Updated By: ರಶ್ಮಿ ಕಲ್ಲಕಟ್ಟ

Updated on: Jul 21, 2022 | 9:58 PM

ದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ(Gyanvapi mosque) ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ಸುಪ್ರೀಂಕೋರ್ಟ್ (Supreme Court), ವಿಚಾರಣೆಯನ್ನು ಅಕ್ಟೋಬರ್ ಮೊದಲ ವಾರಕ್ಕೆ ಮುಂದೂಡಿದೆ. ಹಿಂದೂ ಮಹಿಳೆಯೊಬ್ಬರು ಸಲ್ಲಿಸಿದ ಮೊಕದ್ದಮೆಯ ನಿರ್ವಹಣೆ ಪ್ರಶ್ನಿಸಿದ ಸಮಿತಿಯ ಅರ್ಜಿ ಬಗ್ಗೆ ವಾರಣಾಸಿ ನ್ಯಾಯಾಲಯದ ತೀರ್ಪುಗಾಗಿ ನಾವು ಕಾಯುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್ ಹೇಳಿದ್ದಾರೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್,ಸೂರ್ಯಕಾಂತ್ ಮತ್ತು ಪಿಎಸ್ ನರಸಿಂಹ ಅವರ ನ್ಯಾಯಪೀಠವು ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಕೋರಿ ಸಲ್ಲಿಸಿರುವ ಹೊಸ ಅರ್ಜಿಯನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಮೊಕದ್ದಮೆ ನ್ಯಾಯಾಲಯದಲ್ಲಿರುವಾಗ ಈ ರೀತಿಯ ಕೋರಿಕೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಶ್ರಾವಣ ಮಾಸದಲ್ಲಿ ಹಿಂದೂಗಳಿಗೆ ಶಿವಲಿಂಗಕ್ಕೆ ಪೂಜೆ ಮಾಡಲು ಅನುಮತಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ.

ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್ ಮತ್ತು ನೆಲದೊಳಗೆ ರಡಾರ್ ಸರ್ವೇ ನಡೆಸಬೇಕು ಎಂದು ಏಳು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನೂ ಸುಪ್ರೀಂ ವಜಾ ಮಾಡಿದೆ. ಈ ಅರ್ಜಿಯನ್ನು ವಕೀಲರು ಹಿಂಪಡೆದುಕೊಂಡಿದ್ದಾರೆ.

ವಿಚಾರಣೆ ವೇಳೆ ಹಿರಿಯ ವಕೀಲ ಹುಜೇಫಾ ಅಹ್ಮದಿ ಮಸೀದಿ ನಿರ್ವಹಣೆ ಸಮಿತಿ ಪರ ಹಾಜರಾಗಿದ್ದು, ಮಸೀದಿ ಆವರಣದ ಸಮೀಕ್ಷೆಗೆ ಆಯುಕ್ತರನ್ನು ನಿಯೋಜಿಸುವ ಆದೇಶವು ವಿಷದ ಹಣ್ಣಿರುವ ವಿಷ ಮರದಂತೆ ಎಂದು ಹೇಳಿದ್ದಾರೆ. ಈ ವರದಿಯು ಶತಮಾನಗಳಿಂದ ಇದ್ದ ಮಸೀದಿಯ ಸ್ಥಿತಿಗತಿಯನ್ನು ಬದಲಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ. ಮೇ 20ರಂದು ಸುಪ್ರೀಂಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಆರಾಧನೆಗೆ ಸಂಬಂಧಿಸಿದ ಪ್ರಕರಣವನ್ನು ವಾರಣಾಸಿಯ ಸಿವಿಲ್ ನ್ಯಾಯಮೂರ್ತಿಗಳಿಂದ ಜಿಲ್ಲಾ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಿತ್ತು.