ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ; 2024ರಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ: ಎಂಕೆ ಸ್ಟಾಲಿನ್

|

Updated on: Jun 14, 2023 | 3:28 PM

ತಮ್ಮ ಸಚಿವರು ಅಧಿಕಾರಿಗಳಿಗೆ ಸಹಕಾರ ನೀಡುತ್ತಿರುವಾಗ ಇಷ್ಟು ಸುದೀರ್ಘ ತನಿಖೆಯ ಅಗತ್ಯ ಏನಿತ್ತು ಎಂದ ಸ್ಟಾಲಿನ್, ಇಡಿ ಅಧಿಕಾರಿಗಳ ಇಂತಹ ಅಮಾನವೀಯ ಕ್ರಮದ ಅಗತ್ಯವೇನಿತ್ತು  ಎಂದು ಪ್ರಶ್ನಿಸಿದ್ದಾರೆ. ಯಾವುದೇ ಪ್ರಕರಣವಿದ್ದರೂ ಸೆಂಥಿಲ್ ಬಾಲಾಜಿ ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತಾರೆ

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ; 2024ರಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ: ಎಂಕೆ ಸ್ಟಾಲಿನ್
ಎಂಕೆ ಸ್ಟಾಲಿನ್
Follow us on

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರು ಜಾರಿ ನಿರ್ದೇಶನಾಲಯದ ವಿಚಾರಣೆ ವೇಳೆ ಅಸ್ವಸ್ಥಗೊಂಡಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ (Senthil Balaji) ಅವರನ್ನು ಚೆನ್ನೈನ ಓಮಂಡೂರರ್ ಸರ್ಕಾರಿ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು, 2024ರ ಚುನಾವಣೆಯಲ್ಲಿ ಜನರು ಬಿಜೆಪಿಗೆ(BJP) ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ. ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಸೆಂಥಿಲ್ ಬಾಲಾಜಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಸೆಂಥಿಲ್ ಬಾಲಾಜಿ ತನಿಖಾ ಅಧಿಕಾರಿಗಳಿಗೆ ಸಹಕರಿಸುತ್ತಿದ್ದರು, ಆದರೂ ಎದೆನೋವು ಅನುಭವಿಸುವಷ್ಟು ಒತ್ತಡಕ್ಕೆ ಒಳಗಾಗಿದ್ದರು ಎಂದು ಸ್ಟಾಲಿನ್ ಹೇಳಿದ್ದಾರೆ.

ತಮ್ಮ ಸಚಿವರು ಅಧಿಕಾರಿಗಳಿಗೆ ಸಹಕರಿಸುತ್ತಿರುವಾಗ ಇಷ್ಟು ಸುದೀರ್ಘ ವಿಚಾರಣೆಯ ಅಗತ್ಯ ಏನಿತ್ತು ಎಂದ ಸ್ಟಾಲಿನ್, ಇಡಿ ಅಧಿಕಾರಿಗಳ ಇಂತಹ ಅಮಾನವೀಯ ಕ್ರಮದ ಅಗತ್ಯವೇನಿತ್ತು  ಎಂದು ಪ್ರಶ್ನಿಸಿದ್ದಾರೆ. ಯಾವುದೇ ಪ್ರಕರಣವಿದ್ದರೂ ಸೆಂಥಿಲ್ ಬಾಲಾಜಿ ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತಾರೆ. ನಾವು ನಮ್ಮ ರಾಜಕೀಯ ನಿಲುವನ್ನು ದೃಢವಾಗಿ ಮುಂದುವರಿಸುತ್ತೇವೆ. ಡಿಎಂಕೆ ಈ ಪ್ರಕರಣವನ್ನು ಸಂಕಲ್ಪದಿಂದ ಕಾನೂನಾತ್ಮಕವಾಗಿ ಎದುರಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯ ಬೆದರಿಕೆಗೆ ಡಿಎಂಕೆ ಹೆದರುವುದಿಲ್ಲ, ಜನರು ಇಂತಹ ದಬ್ಬಾಳಿಕೆಯನ್ನು ನೋಡುತ್ತಿದ್ದಾರೆ.2024 ರ ಲೋಕಸಭೆ ಚುನಾವಣೆಯಲ್ಲಿ ಜನರು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದಿದ್ದಾರೆ ಸ್ಟಾಲಿನ್.


ಸೆಂಥಿಲ್ ಬಾಲಾಜಿ ಅವರ ಪತ್ನಿ ಎಸ್ ಮೇಗಾಲಾ ಅವರು ಬುಧವಾರ ಮದ್ರಾಸ್ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಸೆಂಥಿಲ್ ಬಂಧನದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ಮೈತ್ರಿ ಮಾಡಿಕೊಳ್ಳುವಲ್ಲಿ ಎಂಕೆ ಸ್ಟಾಲಿನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿ ಮಾಡಿದ್ದು, ಜೂನ್ 23 ರಂದು ಪಾಟ್ನಾದಲ್ಲಿ ವಿರೋಧ ಪಕ್ಷದ ನಾಯಕರ ಮೆಗಾ ಸಭೆ ನಡೆಯಲಿದೆ.

ಸೆಂಥಿಲ್ ಬಾಲಾಜಿ ಬಂಧನ ಖಂಡಿಸಿದ ವಿಪಕ್ಷ ನಾಯಕರು

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಗಂಟೆಗಳ ವಿಚಾರಣೆಯ ನಂತರ ಇಡಿ ಬುಧವಾರ ಬೆಳಗ್ಗೆ ಬಂಧಿಸಿದೆ. ಬಂಧನದ ನಂತರ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ಆಸ್ಪತ್ರೆಯಲ್ಲಿ ಸಚಿವರು ಬಿಕ್ಕಿ ಬಿತ್ತಿ ಅತ್ತಿದ್ದಾರೆ. ಸೆಂಥಿಲ್ ಬಾಲಾಜಿ ಮೇಲೆದು ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದರೆ, ಬಿಜೆಪಿ ನಾಯಕರು ಅವರು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ ಚೆನ್ನೈ ಆಸ್ಪತ್ರೆ, ಏಮ್ಸ್‌ಗೆ ಕರೆದೊಯ್ಯುವಂತೆ ಬಿಜೆಪಿ ಒತ್ತಾಯ

ಡಿಎಂಕೆಯ ಮೈತ್ರಿಕೂಟದ ಪಾಲುದಾರ ಕಾಂಗ್ರೆಸ್, ಸೆಂಥಿಲ್ ಬಾಲಾಜಿಯ ತಡರಾತ್ರಿಯ ಬಂಧನವನ್ನು ಖಂಡಿಸಿದೆ. ಮೋದಿ ಸರ್ಕಾರವು ಅದನ್ನು ವಿರೋಧಿಸುವವರ ವಿರುದ್ಧ ರಾಜಕೀಯ ಕಿರುಕುಳ ಮತ್ತು ಸೇಡು ತೀರಿಸಿಕೊಂಡಿದೆ. ಇಂತಹ ನಿರ್ಲಜ್ಜ ನಡೆಗೆ ವಿರೋಧ ಪಕ್ಷದವರು ಯಾರೂ ಹೆದರುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Wed, 14 June 23