ತೆಲಂಗಾಣದಲ್ಲಿ ಸುರಂಗ ಕುಸಿತ; 7 ಕಾರ್ಮಿಕರು ಸಿಲುಕಿರುವ ಶಂಕೆ

ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಎಸ್‌ಎಲ್‌ಬಿಸಿ ಸುರಂಗದ ಒಂದು ಭಾಗ ಕುಸಿದುಬಿದ್ದಿದ್ದು, ಇದರಡಿ 7 ಜನರು ಸಿಲುಕಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ದೋಮಲಪೆಂಟಾ ಬಳಿ ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಸುರಂಗದ ಒಂದು ಭಾಗ ಇಂದು ಬೆಳಿಗ್ಗೆ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈ ಘಟನೆಯ ಸಮಯದಲ್ಲಿ ಸ್ಥಳದಲ್ಲಿ 50 ಕಾರ್ಮಿಕರು ಇದ್ದರು. ಅವರಲ್ಲಿ ಸುಮಾರು 43 ಜನರು ಸುರಕ್ಷಿತವಾಗಿ ಹೊರಬಂದಿದ್ದಾರೆ.

ತೆಲಂಗಾಣದಲ್ಲಿ ಸುರಂಗ ಕುಸಿತ; 7 ಕಾರ್ಮಿಕರು ಸಿಲುಕಿರುವ ಶಂಕೆ
Telangana Tunnel

Updated on: Feb 22, 2025 | 4:57 PM

ಶ್ರೀಶೈಲಂ: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ನಿರ್ಮಾಣ ಹಂತದಲ್ಲಿದ್ದ ಛಾವಣಿಯ ಒಂದು ಭಾಗ ಕುಸಿದು 7 ಕಾರ್ಮಿಕರು ನೀರಿನ ಅಡಿ ಸಿಲುಕಿರುವ ದುರಂತ ಘಟನೆ ಇಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಶೈಲಂ ಜಲಾಶಯದ ಬಳಿ ಕಾರ್ಮಿಕರು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸುತ್ತಿದ್ದಾಗ ಸುರಂಗದ ಛಾವಣಿಯ ಸುಮಾರು 3 ಮೀಟರ್ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರಂಗ ಮಾರ್ಗದ ಕೆಲಸ 4 ದಿನಗಳ ಹಿಂದಷ್ಟೇ ಪ್ರಾರಂಭವಾಗಿತ್ತು. “ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟೆಯ ಹಿಂದೆ ಇರುವ ಎಸ್‌ಎಲ್‌ಬಿಸಿ ಸುರಂಗದ ಒಂದು ಭಾಗ ಇಂದು ಕುಸಿದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, 14ನೇ ಕಿ.ಮೀ ಪಾಯಿಂಟ್‌ನಲ್ಲಿ ಎಡಭಾಗದ ಸುರಂಗದ ಮೇಲ್ಛಾವಣಿ 3 ಮೀಟರ್‌ಗಳಷ್ಟು ಕುಸಿದಿದೆ. ನೌಕರರು ಸ್ಥಳದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ” ಎಂದು ನಾಗರ್ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಗಾಯಕ್ವಾಡ್ ಹೇಳಿದ್ದಾರೆ.


ಇದನ್ನೂ ಓದಿ: ತೆಲಂಗಾಣ: ಚಿಕಿತ್ಸೆಗೆ ಹಣವಿಲ್ಲವೆಂದು ಅನಾರೋಗ್ಯ ಪೀಡಿತ ಪತಿಯನ್ನು ಕೊಂದ ಪತ್ನಿ

ನೀರಾವರಿ ಯೋಜನೆಯನ್ನು ನಿರ್ವಹಿಸುವ ಕಂಪನಿಯ 2 ರಕ್ಷಣಾ ತಂಡಗಳು ಪರಿಸ್ಥಿತಿಯನ್ನು ನಿರ್ವಹಿಸಲು ಸುರಂಗದೊಳಗೆ ಪ್ರವೇಶಿಸಿವೆ ಎಂದು ಪೊಲೀಸರು ಹೇಳಿದ್ದಾರೆ. “ನಮಗೆ ಇನ್ನೂ ಖಚಿತವಾದ ವಿವರಗಳು ಸಿಕ್ಕಿಲ್ಲ. “ಈ ಸ್ಥಳವು ಸುರಂಗದ ಒಳಗೆ ಸುಮಾರು 14 ಕಿ.ಮೀ ದೂರದಲ್ಲಿದೆ. ರಕ್ಷಣಾ ತಂಡಗಳು ಹಿಂತಿರುಗಿದ ನಂತರವೇ ಪರಿಸ್ಥಿತಿಯನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯ” ಎಂದು ತಿಳಿಸಿದ್ದಾರೆ.


ಈ ಘಟನೆಯ ಸಮಯದಲ್ಲಿ ಸ್ಥಳದಲ್ಲಿ 50 ಕಾರ್ಮಿಕರು ಇದ್ದರು. ಅವರಲ್ಲಿ ಸುಮಾರು 43 ಜನರು ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸುರಂಗ ಕುಸಿತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣ: 8 ವರ್ಷದ ಬಾಲಕಿ ಮೇಲೆ ಇಬ್ಬರಿಂದ ಲೈಂಗಿಕ ದೌರ್ಜನ್ಯ, ಆರೋಪಿ ಹಿಡಿದು ಥಳಿಸಿದ ಜನ

ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಕಟ್ಟಡ ಕುಸಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದ್ದಾರೆ. ಸುರಂಗ ಕುಸಿತ ಮತ್ತು ಹಲವಾರು ಗಾಯಗಳ ಬಗ್ಗೆ ಮಾಹಿತಿ ಪಡೆದ ನಂತರ, ಮುಖ್ಯಮಂತ್ರಿಗಳು ತಕ್ಷಣವೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ, ಎಸ್‌ಪಿ, ಅಗ್ನಿಶಾಮಕ ಇಲಾಖೆ, ಹೈಡ್ರಾ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತಲುಪಿ ಪರಿಹಾರ ಕ್ರಮಗಳನ್ನು ಒದಗಿಸುವಂತೆ ಅವರು ಆದೇಶಿಸಿದರು

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ