ಅಪರಾಧಿ ಎಂದು ತೀರ್ಪು ಬಂದಕೂಡಲೆ ಕೋರ್ಟ್​ನಿಂದ ಪರಾರಿಯಾದ ಉತ್ತರ ಪ್ರದೇಶದ ಸಚಿವ

1991ರಲ್ಲಿ ಪೊಲೀಸರು ರಾಕೇಶ್ ಸಚನ್‌ ಅವರಿಂದ ಅಕ್ರಮ ಬಂದೂಕನ್ನು ವಶಪಡಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ರಾಕೇಶ್ ಸಚನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಅಪರಾಧಿ ಎಂದು ತೀರ್ಪು ಬಂದಕೂಡಲೆ ಕೋರ್ಟ್​ನಿಂದ ಪರಾರಿಯಾದ ಉತ್ತರ ಪ್ರದೇಶದ ಸಚಿವ
ರಾಕೇಶ್ ಸಚನ್
Image Credit source: India Today
Updated By: ಸುಷ್ಮಾ ಚಕ್ರೆ

Updated on: Aug 08, 2022 | 8:27 AM

ನವದೆಹಲಿ: ಉತ್ತರ ಪ್ರದೇಶದ ಸಚಿವ ರಾಕೇಶ್ ಸಚನ್ (Rakesh Sachan) ಅವರಿಗೆ 1991ರ ಶಸ್ತ್ರಾಸ್ತ್ರ ಕಾಯ್ದೆ (Arms Act) ಪ್ರಕರಣದಲ್ಲಿ ಶಿಕ್ಷೆ ಘೋಷಿಸಲಾಗಿದೆ. ತಮ್ಮನ್ನು ಅಪರಾಧಿ ಎಂದು ಘೋಷಿಸಿ, ಶಿಕ್ಷೆ ಪ್ರಕಟಿಸಿದ ನಂತರ ಅವರು ಕಾನ್ಪುರದ ನ್ಯಾಯಾಲಯದಿಂದ ಓಡಿ ಹೋಗಿದ್ದಾರೆ. 3 ದಶಕಗಳಷ್ಟು ಹಳೆಯದಾದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಶನಿವಾರ ನ್ಯಾಯಾಲಯವು ಸಚಿವ ರಾಕೇಶ್ ಸಚನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತು. ಇದಾದ ನಂತರ ಅವರು ಜಾಮೀನು ಬಾಂಡ್​ಗಳನ್ನು ಒದಗಿಸದೆ ನ್ಯಾಯಾಲಯದಿಂದ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳು ಅವರಿಗೆ ಕರೆ ಮಾಡಿದಾಗ ತಾವು ನಾಪತ್ತೆಯಾಗಿರುವ ಆರೋಪವನ್ನು ನಿರಾಕರಿಸಿದ ಅವರು, ತಮ್ಮ ಪ್ರಕರಣವನ್ನು ಅಂತಿಮ ತೀರ್ಪಿಗೆ ಪಟ್ಟಿ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.

ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸ್ ದೂರಿನಲ್ಲಿ ಸಚಿವರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸಹಾಯಕ ಪೊಲೀಸ್ ಆಯುಕ್ತ ಕೊತ್ವಾಲಿ ಅಶೋಕ್ ಕುಮಾರ್ ಸಿಂಗ್ ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನಾಯಕರ ಒಡೆತನದ ಆಸ್ತಿ ಮೇಲೆ ಐಟಿ ದಾಳಿ

ಜಾಮೀನು ಪಡೆಯಲು ಸಚಿವರು ಇಂದು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಸಚಿವ ರಾಕೇಶ್ ಸಚನ್, ಶನಿವಾರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ -3 ನ್ಯಾಯಾಲಯವು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ತಮ್ಮನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಏನೇ ಆದರೂ ನ್ಯಾಯಾಲಯದ ತೀರ್ಪನ್ನು ಗೌರವಿಸುವುದಾಗಿ ಸಚಿವ ರಾಕೇಶ್ ಹೇಳಿದ್ದಾರೆ. ಸಚಿವ ರಾಕೇಶ್ ಸಚನ್‌ಗೆ ಸಂಬಂಧಿಸಿದ ನ್ಯಾಯಾಲಯದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದ ಕಡತ ಅವರ ವಕೀಲರ ಬಳಿ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರು ಆರ್ಡರ್ ಶೀಟ್ ಮತ್ತು ಶಿಕ್ಷೆಯ ಆದೇಶ ಸೇರಿದಂತೆ ಕೆಲವು ದಾಖಲೆಗಳನ್ನು ತೆಗೆದುಕೊಂಡು ಇದ್ದಕ್ಕಿದ್ದಂತೆ ನ್ಯಾಯಾಲಯದಿಂದ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Rape: 3 ವರ್ಷದ ಬಳಿಕ ಉತ್ತರ ಪ್ರದೇಶದ ಬಿಎಸ್​ಪಿ ಸಂಸದ ಅತುಲ್ ರೈ ಅತ್ಯಾಚಾರ ಆರೋಪದಿಂದ ಖುಲಾಸೆ

1991ರಲ್ಲಿ ಪೊಲೀಸರು ರಾಕೇಶ್ ಸಚನ್‌ ಅವರಿಂದ ಅಕ್ರಮ ಬಂದೂಕನ್ನು ವಶಪಡಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನವೇ ರಾಕೇಶ್ ಸಚನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 90ರ ದಶಕದ ಆರಂಭದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡು ಅವರು ರಾಜಕೀಯ ಪ್ರವೇಶಿಸಿದ್ದರು. 2009ರಲ್ಲಿ ಫತೇಪುರ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿನ ಚುನಾವಣೆಯಲ್ಲಿ ಗೆಲ್ಲುವ ಮೊದಲು ಘಟಂಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ