ಉತ್ತರ ಪ್ರದೇಶ: ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಕ್ಷೌರಿಕ ಎನ್​ಕೌಂಟರ್​ನಲ್ಲಿ ಸಾವು

ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಸಾಜಿದ್ ಎಂಬ ವ್ಯಕ್ತಿಯನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶ: ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ಕ್ಷೌರಿಕ ಎನ್​ಕೌಂಟರ್​ನಲ್ಲಿ ಸಾವು
Image Credit source: India TV

Updated on: Mar 20, 2024 | 8:10 AM

ಪಕ್ಕದ ಮನೆಯ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಹತ್ಯೆ ಮಾಡಿದ್ದ ಕ್ಷೌರಿಕನನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ. ಉತ್ತರ ಪ್ರದೇಶದ ಬದೌನ್​ನಲ್ಲಿ ಕ್ಷೌರಿಕನೊಬ್ಬ ಪಕ್ಕದ ಮನೆಯಲ್ಲಿದ್ದ 11 ಹಾಗೂ 6 ವರ್ಷದ ಮಕ್ಕಳನ್ನು ಹತ್ಯೆ ಮಾಡಿ, ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದ. ಮಂಡಿ ಸಮಿತಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಆರೋಪಿಯನ್ನು ಸಾಜಿದ್ (22) ಎಂದು ಗುರುತಿಸಲಾಗಿದ್ದು, ಇಬ್ಬರು ಮಕ್ಕಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ತಮ್ಮ ಕಾರ್ಯಾಚರಣೆ ತಕ್ಷಣವೇ ಆರಂಭಿಸಿದ್ದರು, ಬಳಿಕ ಎನ್​ಕೌಂಟರ್​ ಮಾಡಿ ಆತನನ್ನು ಹತ್ಯೆ ಮಾಡಿದ್ದಾರೆ.
ಸ್ಥಳೀಯರ ಪ್ರಕಾರ, ಆರೋಪಿಯು ತನ್ನ ನೆರೆಯ ವಿನೋದ್ ಕುಮಾರ್ ಕುಟುಂಬದೊಂದಿಗೆ ಆಗಾಗ ಜಗಳವಾಡುತ್ತಿದ್ದು, ಆತ ಸಲೂನ್ ಒಂದನ್ನು ನಡೆಸುತ್ತಿದ್ದ ಎಂಬುದು ತಿಳಿದುಬಂದಿದೆ.

ವಿನೋದ್​ ಕೂಡ ಪಾರ್ಲರ್​ ನಡೆಸುತ್ತಿದ್ದಾರೆ, ಸಾಜಿದ್ ಮನೆ ಪ್ರವೇಶಿಸಿದಾಗ ಪಾರ್ಲರ್ ನಡೆಸುತ್ತಿರುವ ವಿನೋದ್ ಕುಮಾರ್ ಅವರ ಪತ್ನಿ ಮೂವರು ಮಕ್ಕಳೊಂದಿಗೆ ಮನೆಯಲ್ಲಿ ಒಬ್ಬರೇ ಇದ್ದರು. ಆರೋಪಿಯು ವಿನೋದ್ ಮನೆಗೆ ಬಂದು ಅವರ ಮಕ್ಕಳಾದ ಆಯುಷ್, ಪಿಯೂಷ್ ಮತ್ತು ಹನಿ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದ.

ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲಿ ಎನ್​ಕೌಂಟರ್​, ಪೊಲೀಸರಿಂದ ನಾಲ್ವರು ನಕ್ಸಲರ ಹತ್ಯೆ

ಮೃತದೇಹಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಆಂಬ್ಯುಲೆನ್ಸ್ ಅನ್ನು ಸಂಬಂಧಿಕರು ವಾಪಸ್ ಕಳುಹಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಆಕ್ರೋಶಗೊಂಡ ಸ್ಥಳೀಯರು ಶವಗಳನ್ನು ತೆಗೆದುಕೊಳ್ಳಲು ಬಿಡಲಿಲ್ಲ.

ಬಳಿಕ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ. ಶಾಂತಿ ಕಾಪಾಡುವಂತೆ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ