ಕೇದಾರನಾಥ ದೇಗುಲದಲ್ಲಿನ ಚಿನ್ನದ ಲೇಪನ ಹಗರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಉತ್ತರಾಖಂಡ ಸರ್ಕಾರ

ಕೆಲಸ ಪೂರ್ಣಗೊಂಡ ನಂತರ, ಅದರ ಬಿಲ್ ಮತ್ತು ಇತರ ಪೇಪರ್‌ಗಳನ್ನು ದಾನಿಯು ದೇವಾಲಯದ ಸಮಿತಿಗೆ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳು ಈ ವಿಷಯಕ್ಕೆ ಅನಗತ್ಯವಾದ ಮಹತ್ವ ನೀಡುವ ಮೂಲಕ ಚಾರ್‌ಧಾಮ್ ಯಾತ್ರೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿವೆ ಎಂದು ಸತ್ಪಾಲ್ ಆರೋಪಿಸಿದ್ದಾರೆ.

ಕೇದಾರನಾಥ ದೇಗುಲದಲ್ಲಿನ ಚಿನ್ನದ ಲೇಪನ ಹಗರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಿದ ಉತ್ತರಾಖಂಡ ಸರ್ಕಾರ
ಕೇದಾರನಾಥ ದೇಗುಲ
ರಶ್ಮಿ ಕಲ್ಲಕಟ್ಟ

Updated on: Jun 24, 2023 | 1:31 PM

ಡೆಹ್ರಾಡೂನ್: ಕೇದಾರನಾಥ ದೇಗುಲದ (Kedarnath Temple) ಗರ್ಭಗುಡಿಗೆ ಚಿನ್ನದ ಲೇಪನ ಮಾಡಿದ್ದರಲ್ಲಿ ₹ 1.25 ಕೋಟಿ ಹಗರಣ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಉತ್ತರಾಖಂಡ (Uttarakhand) ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ರಾಜ್ಯದ ಪ್ರವಾಸೋದ್ಯಮ, ಧರ್ಮ ಮತ್ತು ಸಂಸ್ಕೃತಿ ಸಚಿವ ಸತ್ಪಾಲ್ ಮಹಾರಾಜ್ (Satpal Maharaj), ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲು ಗರ್ವಾಲ್ ಕಮಿಷನರ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸುವಂತೆ ಸಂಸ್ಕೃತಿ ಮತ್ತು ಧಾರ್ಮಿಕ ವ್ಯವಹಾರಗಳ ಕಾರ್ಯದರ್ಶಿ ಹರಿಚಂದ್ರ ಸೆಮ್ವಾಲ್​​ಗೆ  ಶುಕ್ರವಾರ ಸೂಚನೆ ನೀಡಿದ್ದಾರೆ. ತನಿಖಾ ಸಮಿತಿಯಲ್ಲಿ ತಾಂತ್ರಿಕ ತಜ್ಞರು ಹಾಗೂ ಅಕ್ಕಸಾಲಿಗರನ್ನು ಸೇರಿಸಿಕೊಳ್ಳುವಂತೆ ಸೆಮ್ವಾಲ್‌ಗೆ ಸೂಚಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ‘ಅತ್ಯಂತ ಸೂಕ್ಷ್ಮ’ವಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸತ್ಪಾಲ್ ಮಹಾರಾಜ್ ಹೇಳಿದ್ದಾರೆ.

ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯಿದೆ, 1939 ರ ನಿಬಂಧನೆಗಳ ಪ್ರಕಾರ, ದೇಣಿಗೆಯನ್ನು ಸ್ವೀಕರಿಸಲಾಗಿದ್ದು, ಕೇದಾರನಾಥ ದೇವಾಲಯದ ಗರ್ಭಗುಡಿಗೆ ಚಿನ್ನದ ಲೇಪನ ಮಾಡಲು ರಾಜ್ಯ ಸರ್ಕಾರದಿಂದ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ತಜ್ಞರ ಮೇಲ್ವಿಚಾರಣೆಯಲ್ಲಿ ಚಿನ್ನದ ಲೇಪನವನ್ನು ಮಾಡಲಾಗಿದೆ. ದಾನಿಯೊಬ್ಬರು ಚಿನ್ನವನ್ನು ಖರೀದಿಸಿ ಗರ್ಭಗುಡಿಯ ಗೋಡೆಗಳ ಮೇಲೆ ಹೊದಿಸಿದ್ದಾರೆ. ದೇವಾಲಯದ ಸಮಿತಿಗೆ ಇದರಲ್ಲಿ ನೇರ ಪಾತ್ರವಿಲ್ಲ ಎಂದು ಸಚಿವರು ಹೇಳಿದ್ದಾರೆ.

ಕೆಲಸ ಪೂರ್ಣಗೊಂಡ ನಂತರ, ಅದರ ಬಿಲ್ ಮತ್ತು ಇತರ ಪೇಪರ್‌ಗಳನ್ನು ದಾನಿಯು ದೇವಾಲಯದ ಸಮಿತಿಗೆ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳು ಈ ವಿಷಯಕ್ಕೆ ಅನಗತ್ಯವಾದ ಮಹತ್ವ ನೀಡುವ ಮೂಲಕ ಚಾರ್‌ಧಾಮ್ ಯಾತ್ರೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿವೆ ಎಂದು ಸತ್ಪಾಲ್ ಆರೋಪಿಸಿದ್ದಾರೆ.

ಇದನ್ನೂ ಓದಿ: Tamil Nadu: ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ 6,500 ಕ್ಕೂ ಹೆಚ್ಚು ಜೀವಂತ ಆಮೆಗಳು ವಶ, ಇಬ್ಬರ ಬಂಧನ

ದೇವಾಲಯದ ಗರ್ಭಗುಡಿಯಲ್ಲಿ 23,777.800 ಗ್ರಾಂ ಚಿನ್ನವನ್ನು ಬಳಸಲಾಗಿದೆ ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯು ಈ ಹಿಂದೆ ಹೇಳಿಕೆಯಲ್ಲಿ ತಿಳಿಸಿತ್ತು. ಇದರ ಪ್ರಸ್ತುತ ಮೌಲ್ಯ ಸುಮಾರು ₹ 14.38 ಕೋಟಿಯಷ್ಟಿದೆ. ಅದೇ ವೇಳೆ ಸ್ವರ್ಣ ಲೇಪಿತ ಕಾಮಗಾರಿಗೆ ಬಳಸಲಾದ ತಾಮ್ರದ ಫಲಕಗಳ ಒಟ್ಟು ತೂಕ 1,001.300 ಕೆ.ಜಿ ಆಗಿದ್ದು ಒಟ್ಟು ಮೌಲ್ಯ ₹ 29 ಲಕ್ಷ.

ಇತ್ತೀಚೆಗೆ ಕೇದಾರನಾಥ ದೇಗುಲದ ತೀರ್ಥ ಪುರೋಹಿತ್ ಮತ್ತುಚಾರ್‌ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಸಂತೋಷ್ ತ್ರಿವೇದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದರಲ್ಲಿ ಬಿಡುಗಡೆ ಮಾಡಿ ಗರ್ಭಗುಡಿಯ ಗೋಡೆಗಳಿಗೆ ಚಿನ್ನದ ಲೇಪನದ ಬದಲು ಹಿತ್ತಾಳೆ ಬಳಿದು ₹ 1.25 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Sat, 24 June 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us