ವೀರಪ್ಪನ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯ್ ಕೇಂದ್ರದ ಹುದ್ದೆಗೆ ರಾಜೀನಾಮೆ

ನರಹಂತಕ, ದಂತಕೋರ ವೀರಪನ್ ಹತ್ಯೆ ಕಾರ್ಯಚರಣೆಯಲ್ಲಿ ನೇತೃತ್ವ ವಹಿಸಿದ್ದ ದಕ್ಷ ಐಎಎಸ್ ಅಧಿಕಾರಿ ಕೇಂದ್ರದ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ವೀರಪ್ಪನ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಜಯ್ ಕೇಂದ್ರದ ಹುದ್ದೆಗೆ ರಾಜೀನಾಮೆ
K Vijay Kumar
Updated By: ರಮೇಶ್ ಬಿ. ಜವಳಗೇರಾ

Updated on: Oct 15, 2022 | 10:58 PM

ನವದೆಹಲಿ: ಕಾಡುಗಳ್ಳ ವೀರಪ್ಪನ್ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೊಲೀಸ್‌ ಅಧಿಕಾರಿ ಕೆ.ವಿಜಯ್ ಕುಮಾರ್ (K Vijay Kumar) ಅವರು ಗೃಹ ಸಚಿವಾಲಯದ (ಎಂಎಚ್‌ಎ) ಹಿರಿಯ ಭದ್ರತಾ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ, ಈಗ ಚೆನ್ನೈನಲ್ಲಿ ನೆಲೆಸಿದ್ದೇನೆ ಎಂದು ವಿಜಯ್ ಕುಮಾರ್ ಅವರು ಇಂದು(ಅಕ್ಟೋಬರ್ 15) ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಸೇವಾವಧಿಯಲ್ಲಿ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಧನ್ಯವಾದ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ, ರಾಜೀನಾಮೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ತಮಿಳುನಾಡಿನಲ್ಲಿ ಕಾಡುಗಳ್ಳ ವೀರಪ್ಪನ್‌ ನಿಗ್ರಹಕ್ಕಾಗಿ ರಚಿಸಲಾದ ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ಕೆ.ವಿಜಯ್ ಕುಮಾರ್ ಅವರ ಚಾಣಾಕ್ಷ ನಡೆಯಿಂದಾಗಿ 2004ರಲ್ಲಿ ವೀರಪ್ಪನ್‌ ಹತನಾಗಿದ್ದ. ಚೆನ್ನೈ ಪೊಲೀಸ್‌ ಆಯುಕ್ತ ಹಾಗೂ ಬಿಎಸ್‌ಎಫ್‌ನ ಮಹಾನಿರೀಕ್ಷಕರಾಗಿಯೂ ಅವರು ಕರ್ತವ್ಯ ನಿಭಾಯಿಸಿದ್ದರು.

1975ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ವಿಜಯ್‌, 2012 ರಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಮಹಾನಿರ್ದೇಶಕರಾಗಿ ಸೇವೆಯಿಂದ ನಿವೃತ್ತರಾದ ನಂತರ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಿಗೆ ಸಲಹೆಗಾರರಾಗಿದ್ದರು. ಬಳಿಕ 2019ರಲ್ಲಿ ಅವರು ಗೃಹ ಸಚಿವಾಲಯದ ಸಲಹೆಗಾರರಾಗಿ ನಿಯುಕ್ತರಾಗಿದ್ದರು.