
ಮುಂಬೈ, ಸೆಪ್ಟೆಂಬರ್ 09: ಮಹಾರಾಷ್ಟ್ರದಲ್ಲಿ ಮುಂಬರುವ ನವರಾತ್ರಿ ಹಬ್ಬದ ಗರ್ಬಾ ಮತ್ತು ದಾಂಡಿಯಾ ಆಚರಣೆಗಳಿಂದ ಮುಸ್ಲಿಮರನ್ನು ಸಂಪೂರ್ಣವಾಗಿ ಹೊರಗಿಡಬೇಕೆಂಬ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕರೆ ಭಾರಿ ಸಾರ್ವಜನಿಕ ಮತ್ತು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ನಾಯಕ ನಿತೇಶ್ ರಾಣೆ ಈ ನಿರ್ಬಂಧವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಹಾಗೂ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಅವರು, “ಹಬ್ಬಗಳು ಎಲ್ಲರನ್ನೂ ಒಳಗೊಳ್ಳುವಂತಿರಬೇಕು, ಸಂಭ್ರಮಿಸಲು ಬರುವವರಲ್ಲಿ ತಾರತಮ್ಯ ಸಲ್ಲದು” ಎಂದು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೃತಾ ಫಡ್ನವೀಸ್ ಸೌಹಾರ್ದದ ಮಾತು: “ಹಬ್ಬಗಳು ಪ್ರತಿಯೊಬ್ಬರನ್ನೂ ಬೆಸೆಯುವಂಥವು. ಒಬ್ಬ ಮುಸ್ಲಿಂ ವ್ಯಕ್ತಿ ಅಲ್ಲಿಗೆ ಬಂದು ಹಬ್ಬದ ಸಂಭ್ರಮದಲ್ಲಿ ನಿಯಮಬದ್ಧವಾಗಿ ಪಾಲ್ಗೊಂಡರೆ ಅದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಹೇಳುವ ಮೂಲಕ ಅಮೃತಾ ಫಡ್ನವೀಸ್ ಅವರು ಮುಕ್ತ ವಾತಾವರಣಕ್ಕೆ ಬೆಂಬಲ ಸೂಚಿಸಿದರು.
ನಟ ಶ್ರೇಯಸ್ ತಲ್ಪಡೆ ಸಹಮತ: “ನಾವು ಮೊದಲಿನಿಂದಲೂ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸಿಕೊಂಡು ಬಂದಿದ್ದೇವೆ. ಪ್ರತಿಯೊಂದು ಹಬ್ಬವನ್ನೂ ಸಂಪೂರ್ಣವಾಗಿ ಆನಂದಿಸುವುದನ್ನು ನಾನು ಮುಂದುವರಿಸುತ್ತೇನೆ” ಎಂದು ನಟ ಶ್ರೇಯಸ್ ತಲ್ಪಡೆ ಹೇಳಿದ್ದಾರೆ.
ನಿತೇಶ್ ರಾಣೆ ಕಠಿಣ ನಿಲುವು: ವಿಎಚ್ಪಿ ಕರೆಯನ್ನು ಬೆಂಬಲಿಸಿದ ಬಿಜೆಪಿ ನಾಯಕ ನಿತೇಶ್ ರಾಣೆ, ಮೂರ್ತಿ ಪೂಜೆ ವಿರೋಧಿಸುವವರು ಹಿಂದೂ ಹಬ್ಬಗಳಲ್ಲಿ ಭಾಗವಹಿಸಬಾರದು. ಗರ್ಭಾ ಆವರಣ ಪ್ರವೇಶಿಸುವ ಮುನ್ನ ಗುರುತಿನ ಚೀಟಿ ತೋರಿಸಿ ಹನುಮಾನ್ ಚಾಲೀಸಾ ಪಠಿಸಬೇಕು. ಹಬ್ಬದ ನೆಪದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುವುದನ್ನು ತಡೆಯಲು ಈ ಕ್ರಮ ಅಗತ್ಯ ಎಂದು ಪ್ರತಿಪಾದಿಸಿದರು.
ಮತ್ತಷ್ಟು ಓದಿ: ಮಹಾರಾಷ್ಟ್ರ: ನವರಾತ್ರಿ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲ, ಹಣೆಯಲ್ಲಿ ತಿಲಕ ಕಡ್ಡಾಯ
ವಿಎಚ್ಪಿಯ ಆಧಾರ್ ಮತ್ತು ತಿಲಕ ರೂಲ್ಸ್: ನವರಾತ್ರಿ ಕೇವಲ ನೃತ್ಯವಲ್ಲ, ಬದಲಿಗೆ ದುರ್ಗಾದೇವಿಯ ಆರಾಧನೆ. ಹೀಗಾಗಿ ಸಂಘಟಕರು ಭಾಗವಹಿಸುವವರ ಆಧಾರ್ ಕಾರ್ಡ್ ಪರಿಶೀಲಿಸಬೇಕು ಮತ್ತು ಹಣೆಗೆ ತಿಲಕ ಇಟ್ಟು ಪ್ರವೇಶ ನೀಡಬೇಕು ಎಂದು ವಿಎಚ್ಪಿ ಜಂಟಿ ಕಾರ್ಯದರ್ಶಿ ಶ್ರೀರಾಜ್ ನಾಯರ್ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಪೋಸ್ಟ್
#WATCH | Nagpur, Maharashtra | On VHP’s call to bar Muslims from Navratri event, Film Actor Shreyas Talpade says, “We have been enjoying all festivals together for so many years… I have always enjoyed every festival to the fullest, and I will continue to do so.”
On demands to… pic.twitter.com/pQb0GvxaFc
— ANI (@ANI) September 9, 2026
ಡಿಜೆ ಬಳಕೆಯಲ್ಲೂ ಸಮಾನ ನಿಯಮಕ್ಕೆ ಆಗ್ರಹ: ಗಣೇಶೋತ್ಸವದ ಮೆರವಣಿಗೆಗಳಲ್ಲಿ ಧ್ವನಿವರ್ಧಕ ಹಾಗೂ ಡಿಜೆ ಬಳಕೆಗೆ ಇರುವ ನಿರ್ಬಂಧಗಳನ್ನು ಈದ್ ಮೆರವಣಿಗೆಗಳಿಗೂ ಕಟ್ಟುನಿಟ್ಟಾಗಿ ಅನ್ವಯಿಸಬೇಕು ಎಂದು ನಿತೇಶ್ ರಾಣೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮತಾಂತರ ತಡೆ ಹಾಗೂ ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿಎಚ್ಪಿ ಸಮರ್ಥಿಸಿಕೊಂಡಿದ್ದರೆ, ಸಾರ್ವಜನಿಕ ಆಚರಣೆಗಳಲ್ಲಿ ಇಂತಹ ಧಾರ್ಮಿಕ ಪರಿಶೀಲನೆಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತವೆ ಎಂದು ನಾಗರಿಕ ಸಮಾಜ ಹಾಗೂ ವಿರೋಧ ಪಕ್ಷಗಳು ಎಚ್ಚರಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ