
ನವದೆಹಲಿ, ಮೇ 22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ (Pahalgam Terror Attack) ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಉಗ್ರರ ದಾಳಿಗೆ ಜಗತ್ತಿನಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಕೈವಾಡ ಈ ದಾಳಿಯ ಹಿಂದೆ ಇತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.
2025ರ ಏಪ್ರಿಲ್ 22ರಂದು ಮಧ್ಯಾಹ್ನ ಸುಮಾರು 2.23ಕ್ಕೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಬೈಸರನ್ ವ್ಯಾಲಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒಟ್ಟು 26 ಜನ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ 25 ಪ್ರವಾಸಿಗರು ಮತ್ತು ಒಬ್ಬರು ಸ್ಥಳೀಯ ಮುಸ್ಲಿಂ ಕುದುರೆ ರೈಡರ್ ಕೂಡ ಸೇರಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮೃತರ ಪೈಕಿ ಕರ್ನಾಟಕದ ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಎಂಬ ಇಬ್ಬರು ಪ್ರವಾಸಿಗರು ಕೂಡ ಸೇರಿದ್ದರು.
ಪಾಕಿಸ್ತಾನದ ಲಾಹೋರ್ನಲ್ಲಿದ್ದುಕೊಂಡು ದಾಳಿಯನ್ನು ನಿಯಂತ್ರಿಸಿದ ಟಿಆರ್ಎಫ್ ಕಮಾಂಡರ್ ಸಾಜಿದ್ ಜಾಟ್ ಉರ್ಫ್ ಲಂಗ್ಡಾ ಈ ದಾಳಿಯ ಮಾಸ್ಟರ್ಮೈಂಡ್ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
2025ರ ಪಹಲ್ಗಾಮ್ ದಾಳಿಯ ಪ್ರಮುಖ ವಿವರಗಳು:
ಏಪ್ರಿಲ್ 15ರಿಂದ 21:
ಏಪ್ರಿಲ್ 21ರಂದು ಫೈಸಲ್ ಜಾಟ್ ಉರ್ಫ್ ಸುಲೈಮಾನ್ ಶಾ, ಹಬೀಬ್ ತಾಹಿರ್ ಉರ್ಫ್ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂಬ ಮೂವರು ಸಶಸ್ತ್ರ ಪಾಕಿಸ್ತಾನಿ ಉಗ್ರರು ಸುದೀರ್ಘ ಪ್ರಯಾಣದ ನಂತರ ತೀವ್ರ ದಣಿವು ಮತ್ತು ಬಾರಿಕೆಯಿಂದ ಸ್ಥಳೀಯ ನಿವಾಸಿ ಪರ್ವೈಜ್ ಅಹ್ಮದ್ ಎಂಬುವವರ ಗುಡಿಸಿಲಿಗೆ ಬಂದು ಆಶ್ರಯ ಪಡೆದರು.
ಇದನ್ನೂ ಓದಿ: 16 ವರ್ಷಗಳಿಂದ ಭಾರತದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಪಾಕಿಸ್ತಾನದ ಎಲ್ಇಟಿ ಉಗ್ರ ಸೆರೆ
ಏಪ್ರಿಲ್ 22ರ ದಾಳಿಯ ದಿನ:
ಬೈಸರನ್ ವ್ಯಾಲಿಯ ಪಾರ್ಕ್ ಒಳಗೆ ನುಗ್ಗುವ ಮುನ್ನ ಉಗ್ರರು ಮೈದಾನದಲ್ಲಿದ್ದ ಮರವೊಂದರ ಕೆಳಗೆ ಕುಳಿತು ಮಧ್ಯಾಹ್ನದ ಊಟ ಮಾಡಿದರು. ನಂತರ ತಮ್ಮ ಆಯುಧಗಳು ಯಾರಿಗೂ ಕಾಣದಂತೆ ಬಚ್ಚಿಡಲು ತಮ್ಮ ಬ್ಯಾಗ್ಗಳಲ್ಲಿದ್ದ ಕಂಬಳಿಗಳನ್ನು ಮೈಮೇಲೆ ಹೊದ್ದುಕೊಂಡರು. ಬಳಿಕ ಇಬ್ಬರು ಉಗ್ರರು ಹತ್ತಿರದ ತೊರೆಯ ಬಳಿ ನಡೆದುಕೊಂಡು ಹೋಗಿ ಪ್ರವಾಸಿಗರ ಚಲನವಲನಗಳನ್ನು ಗಮನಿಸಿ, ಇಡೀ ಮೈದಾನದ ನಕ್ಷೆಯನ್ನು ಸಿದ್ಧಪಡಿಸಿಕೊಂಡರು. ಬಳಿಕ ದಕ್ಷಿಣದ ಜಿಪ್ಲೈನ್ ಮತ್ತು ಉತ್ತರದ ಪ್ರಮುಖ ಗೇಟ್ ಕಡೆಯಿಂದ ಏಕಕಾಲಕ್ಕೆ ದಾಳಿ ನಡೆಸಿ ಇಡೀ ಮೈದಾನದಲ್ಲಿ ಹೆಣಗಳು ಬೀಳುವಂತೆ ಮಾಡಿದರು.
ಧರ್ಮ ಕೇಳಿ ಹತ್ಯೆ:
ಪ್ರವಾಸಿಗರ ಧರ್ಮವನ್ನು ಕೇಳಿ, ಮುಸ್ಲಿಮೇತರರನ್ನು ಗುರಿಯಾಗಿಸಿಕೊಂಡು ಗುಂಡಿಕ್ಕಿ ಕೊಲ್ಲಲಾಯಿತು. ಸ್ಥಳೀಯ ಮುಸ್ಲಿಂ ಸಮುದಾಯದ ಕುದುರೆ ಸವಾರ ಉಗ್ರನನ್ನು ತಡೆಯಲು ಹೋಗಿ ಪ್ರಾಣ ಕಳೆದುಕೊಂಡರು. ಮೊದಲ ಬುಲೆಟ್ ಅನ್ನು ಎಂ-4 ಕಾರ್ಬೈನ್ ರೈಫಲ್ನಿಂದ ಹಾರಿಸಲಾಯಿತು. ಉಳಿದ ಇಬ್ಬರು ಉಗ್ರರು ಅಲ್ಲಿನ ಡಾಬಾಗಳು ಮತ್ತು ಇಳಿಜಾರು ಗುಡ್ಡದ ಬಳಿ ಎಕೆ-47 ರೈಫಲ್ಗಳಿಂದ ಮನಬಂದಂತೆ ಗುಂಡಿನ ಮಳೆಗರೆದರು. ಗಾಬರಿಗೊಂಡ ಜನರನ್ನು ಒಂದು ಕಡೆ ಸೇರಿಸಿದ ಉಗ್ರರು, ಇಸ್ಲಾಮಿಕ್ ‘ಕಲ್ಮಾ’ ಹೇಳಲು ಸೂಚಿಸಿದರು. ಕಲ್ಮಾ ಪಠಿಸಲು ಸಾಧ್ಯವಾಗದವರನ್ನು ಗುರುತಿಸಿ ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಕೊಂದರು.
ಹತ್ಯೆಯ ಲೈವ್ ರೆಕಾರ್ಡ್:
ತಮ್ಮ ಮುಖ್ಯ ಬ್ಯಾಗ್ಗಳನ್ನು ಒಂದು ಕಡೆ ಇಟ್ಟು ಬಂದ ಉಗ್ರರು, ಪಾರ್ಕ್ನ ಬೇಲಿಯನ್ನು ದಾಟಿ ಒಳಗೆ ನುಗ್ಗಿದರು. ಈ ಹತ್ಯಾಕಾಂಡವನ್ನು ಲೈವ್ ಆಗಿ ರೆಕಾರ್ಡ್ ಮಾಡಲು ಒಬ್ಬ ಉಗ್ರನು ತನ್ನ ಹೆಲ್ಮೆಟ್ಗೆ ‘ಗೋಪ್ರೊ’ (GoPro) ಆಕ್ಷನ್ ಕ್ಯಾಮೆರಾವನ್ನು ಅಳವಡಿಸಿಕೊಂಡಿದ್ದನು. ಇಬ್ಬರು ಉಗ್ರರು ಸಾರ್ವಜನಿಕ ಶೌಚಾಲಯಗಳ ಬಳಿ ಇದ್ದ ಪ್ರಮುಖ ಪ್ರವೇಶ ದ್ವಾರದತ್ತ ನುಗ್ಗಿದರೆ ಮೂರನೇ ಉಗ್ರನು ಪ್ರವಾಸಿಗರ ಜಿಪ್ಲೈನ್ ಕೊನೆಗೊಳ್ಳುವ ಜಾಗದಲ್ಲಿ ನಿಂತುಕೊಂಡನು. ಪ್ರವಾಸಿಗರು ಎಲ್ಲಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಇಡೀ ಮೈದಾನವನ್ನು ಒಂದು ‘ಸಾವಿನ ವಲಯ’ (Kill Zone)ವನ್ನಾಗಿ ಮಾರ್ಪಡಿಸಲು ಅವರು ಈ ರೀತಿ ತಂತ್ರ ರೂಪಿಸಿದ್ದರು.
ಉಗ್ರರ ಸಂಭ್ರಮಾಚರಣೆ:
ಕಾಡಿನ ಕಡೆಗೆ ಓಡಿಹೋಗುವಾಗ ಮರಗಳ ಹಿಂದೆ ಅಡಗಿದ್ದ ಮೂವರು ನಾಗರಿಕರನ್ನು ಬಹಳ ಹತ್ತಿರದಿಂದ ಶೂಟ್ ಮಾಡಲಾಯಿತು. ಪಾರ್ಕ್ನಿಂದ ಹೊರಹೋಗುವಾಗ ಯಾವುದೇ ಪಶ್ಚಾತ್ತಾಪವಿಲ್ಲದೆ ಉಗ್ರರು ಸಂಭ್ರಮದಿಂದ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದರು.
ಭಾರತದ ಪ್ರತಿಕ್ರಿಯೆ:
ಈ ದಾಳಿಯನ್ನು ಖಂಡಿಸಿ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಂಡಿತು. ಪಾಕಿಸ್ತಾನದ ರಾಯಭಾರಿಗಳನ್ನು ದೇಶದಿಂದ ಉಚ್ಚಾಟಿಸಲಾಯಿತು. ಅಟ್ಟಾರಿ ಗಡಿಯನ್ನು ಮುಚ್ಚಲಾಯಿತು. ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು.
ಮೇ 7ರಿಂದ 10ರವರೆಗೆ ಆಪರೇಷನ್ ಸಿಂಧೂರ್:
ಪಹಲ್ಗಾಮ್ನ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಮತ್ತು ಸೇನೆ ಪಾಕಿಸ್ತಾನದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಅಡಿಯಲ್ಲಿ ಕ್ಷಿಪಣಿ ಮತ್ತು ವೈಮಾನಿಕ ದಾಳಿಗಳನ್ನು ನಡೆಸಿತು. ಇದು ಉಭಯ ದೇಶಗಳ ನಡುವೆ 4 ದಿನಗಳ ಸೈನಿಕ ಸಂಘರ್ಷಕ್ಕೆ ಕಾರಣವಾಯಿತು. ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.
ಇದನ್ನೂ ಓದಿ: ಆಪರೇಷನ್ ಸಿಂಧೂರ್ಗೆ ಒಂದು ವರ್ಷ; ಉಗ್ರರ ವಿರುದ್ಧದ ಕಾರ್ಯಾಚರಣೆ ಪರಿಣಾಮಕಾರಿಯಾಗಿದ್ದು ಹೇಗೆ?
ಜುಲೈ 28ಕ್ಕೆ ಆಪರೇಷನ್ ಮಹಾದೇವ್:
ಭಾರತೀಯ ಭದ್ರತಾ ಪಡೆಗಳು ದಾಳಿ ನಡೆಸಿದ ಉಗ್ರರನ್ನು ಪತ್ತೆಹಚ್ಚಲು ‘ಆಪರೇಷನ್ ಮಹಾದೇವ್’ ಆರಂಭಿಸಿದವು. ಜುಲೈ 28ರಂದು ದಚಿ ಗಾಮ್ ಅರಣ್ಯ ಪ್ರದೇಶದಲ್ಲಿ ನಡೆದ ಭೀಕರ ಎನ್ಕೌಂಟರ್ನಲ್ಲಿ ಪಹಲ್ಗಾಮ್ ದಾಳಿ ನಡೆಸಿದ್ದ ಮೂವರು ಪ್ರಮುಖ ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಲಾಯಿತು.
ಚಾರ್ಜ್ಶೀಟ್ ಸಲ್ಲಿಕೆ:
ಮೇ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ 7,500ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ಸಲ್ಲಿಸಿತು. ಉಗ್ರರು ಬಳಸಿದ ಫೋನ್ಗಳು ಪಾಕಿಸ್ತಾನದಲ್ಲಿ ಖರೀದಿಯಾಗಿದ್ದವು. ಈ ದಾಳಿಯ ಹೊಣೆ ಹೊತ್ತ ಗುಂಪಿನ ಸಾಮಾಜಿಕ ಜಾಲತಾಣಗಳ ಐಪಿ ವಿಳಾಸ (IP Address) ಪಾಕಿಸ್ತಾನದ್ದು ಎಂದು ತಾಂತ್ರಿಕ ಸಾಕ್ಷ್ಯಗಳ ಸಮೇತ ಸಾಬೀತುಪಡಿಸಿತು.
ಎನ್ಐಎ ತನಿಖೆಯ ಪ್ರಕಾರ, ಉಗ್ರರು ದಾಳಿ ಮಾಡುವಾಗ ಪ್ರವಾಸಿಗರಿಗೆ “ಮೋದಿಗೆ ಹೋಗಿ ಹೇಳಿ” ಎಂದು ಕೂಗುತ್ತಿದ್ದರು. ಇದು ಕೇವಲ ಪ್ರವಾಸಿಗರ ಹತ್ಯೆಯಷ್ಟೇ ಅಲ್ಲದೆ ಭಾರತ ಸರ್ಕಾರದ ವಿರುದ್ಧ ಜಿಹಾದಿ ಸಿದ್ಧಾಂತವನ್ನು ಪ್ರದರ್ಶಿಸುವ ಉದ್ದೇಶ ಹೊಂದಿತ್ತು ಎಂಬುದು ಸಾಬೀತಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ