
ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಪ್ರಸಿದ್ಧ ನಿಮಿಷಾಂಬ ದೇಗುಲಕ್ಕೂ ಮಳೆ ಅಬ್ಬರದ ಬಿಸಿ ತಟ್ಟಿದೆ. ಕಾವೇರಿ ನದಿ ಬೋರ್ಗರೆತಕ್ಕೆ ಈಗಾಗಲೇ ದೇಗುಲದ ಸ್ನಾನಘಟ್ಟ ಮುಳುಗಿ ಹೋಗಿದೆ. ಮುಂಜಾಗೃತ ಕ್ರಮವಾಗಿ ಭಕ್ತರು ನದಿಗೆ ಇಳಿಯದಂತೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ಜಲ ದಿಗ್ಬಂದನವಾಗಿದೆ. ಇಲ್ಲಿರುವ ಅರಣ್ಯ ಇಲಾಖೆ ಕಚೇರಿ ಕೂಡ ಜಲಾವೃತವಾಗಿದೆ. ಸದ್ಯ ಪ್ರವಾಸಿಗರ ಭೇಟಿ ಮತ್ತೆ ಬೋಟಿಂಗ್ ಎರಡಕ್ಕೂ ನಿರ್ಬಂಧ ವಿಧಿಸಲಾಗಿದೆ.

ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು 50,000 ರಿಂದ 80,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಈ ಪ್ರಮಾಣವು ಹೆಚ್ಚಾಗುವ ಸಂಭವವಿರುತ್ತದೆ ಎಂದು ಕಾವೇರಿ ನೀರು ನಿಗಮ ತಿಳಿಸಿದೆ.

ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಕೋರಲಾಗಿದೆ ಎಂದು ಕಾವೇರಿ ನೀರು ನಿಗಮ ಮನವಿ ಮಾಡಿದೆ.

ಕೆಆರ್ಎಸ್, ಕಬಿನಿ ಡ್ಯಾಂಗಳಿಂದ ಹೊರಹರಿವು ಹೆಚ್ಚಳವಾಗಿದ್ದು, ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ 9 ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. 2 ಡ್ಯಾಂಗಳಿಂದ 1.10 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಹಳೇ ಹಂಪಾಪುರ, ಮುಳ್ಳೂರು, ಹಳೇ ಅಣಗಳ್ಳಿ ದಾಸನಪುರ ಸೇರಿ 9 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ಪಾತ್ರದ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ. ಭತ್ತ, ಕಬ್ಬಿನ ಗದ್ದೆ, ಬಾಳೆ ತೋಟಗಳಿಗೆ ನುಗ್ಗಿದ ನೀರು ನುಗ್ಗಿದೆ.