
ಬೆಟಗೇರಿಯ ಛೋಟಾ ಭೀಮ, ಬಿಡಬ್ಯಾಡ ಹಾಕು ಎನ್ನುತ್ತಿರುವ ಪ್ರೇಕ್ಷಕರ ಕೂಗಾಟ, ವಜ್ರಮುನಿ ಡಿಚ್ಚಿಗೆ ಅಖಾಡದಿಂದ ಕಾಲ್ಕಿತ್ತ ಎದುರಾಳಿ. ಹೌದು ಈ ಎಲ್ಲ ದೃಶ್ಯಗಳು ಕಂಡಿದ್ದು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ.

ಕಟ್ಟುಮಸ್ತಾಗಿ ಕಲರ್ ಫುಲ್ ಆಗಿರುವ ಟಗರುಗಳು. ಕಾಳಗದ ಅಖಾಡದಲ್ಲಿ ಟಗರುಗಳ ಗುದ್ದಾಟ ಮೈಜುಮ್ ಎನ್ನುವಂತಿತ್ತು. ಟಗರುಗಳ ರಣರೋಚಕ ಕಾಳಗ ನೋಡಿದ ಜನರು ಕೇಕೆ, ಸಿಳ್ಳೆ, ಚಪ್ಪಾಳೆ ಹಾಕಿ ಫುಲ್ ಎಂಜಾಯ್ ಮಾಡಿದ್ರು.

ಡೋಣಿ ಗ್ರಾಮಸ್ಥರು ಗ್ರಾಮೀಣ ಭಾಗದಲ್ಲಿ ಜಾನಪದ ಕ್ರೀಡೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಟಗರಿನ ಕಾಳಗ ಆಯೋಜಿಸಲಾಗಿತ್ತು. ಈ ಟಗರಿನ ಕಾಳದಲ್ಲಿ ಬಾಗಲಕೋಟೆ, ಹಾವೇರಿ, ಕೊಪ್ಪಳ, ಧಾರವಾಡ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಬಿಳಿ, ಕೆಂದ, ಕಪ್ಪು, ಬಣ್ಣದ ಟಗರುಗಳನ್ನ ತಗೆದುಕೊಂಡು ಅವುಗಳ ಮಾಲೀಕರು ಸ್ಪರ್ಧೆಗೆ ಬಂದಿದ್ರು.

ಕಾಳಗದಲ್ಲಿ ಹತ್ತು ಹಲ್ಲು, ಎಂಟು ಹಲ್ಲು ಹಾಗೂ ಆರು ಹಲ್ಲಿನ ಟಗರುಗಳು ಭಾಗಿಯಾಗಿದ್ದವು. ನಿನ್ನೆ (ಮಾ.24) ರಾತ್ರಿ 8 ಗಂಟೆಗೆ ಆರಂಭವಾದ ಕಾಳಗ ಇಂದು (ಮಾ.25) ಬೆಳಗಿನ ಜಾವದವರೆಗೂ ನಡೆಯಿತು.

ಅಖಾಡದಲ್ಲಿ ವಜ್ರಮುನಿ, ಛೋಟಾ ಭೀಮ, ರಾಮ, ಕ್ರಾಂತಿ ಕಿಡಿ ಸೇರಿದಂತೆ ವಿವಿಧ ಹೆಸರುಗಳು ಇಟ್ಟು ಅಖಾಡಕ್ಕೆ ಇಳಿಸುತ್ತಾರೆ. ಇನ್ನು ಈ ಕಾಳಗದಲ್ಲಿ ಗೆದ್ದ ಮಾಲೀಕರಿಗೆ ಕಾಳಗ ಆಯೋಜಿಸಿದ ಆಯೋಜಕರು ಪ್ರಥಮ, ದ್ವಿತೀಯ, ತೃತೀಯ ಅಂತಾ ಮೂರು ಹಂತಗಳಲ್ಲಿ ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತೆ.

ಟಗರುಗಳ ಹಲ್ಲುಗಳ ಆಧಾರದ ಮೇಲೆ ನಡೆದ ಕಾಳಗದಲ್ಲಿ ಗೆದ್ದ ಟಗರುಗಳಿಗೆ ಪ್ರಥಮ ಬಹುಮಾನವಾಗಿ 25 ಸಾವಿರ. ದ್ವೀತಿಯ ಸ್ಥಾನ 12,500 ಸಾವಿರ, ಹಾಗೂ ತೃತೀಯ ಸ್ಥಾನ ಪಡೆದ ಟಗರುಗಳ ಮಾಲೀಕರಿಗೆ 5000 ಸಾವಿರ ಬಹುಮಾನ ನೀಡಲಾಗುತ್ತೆ.

ಒಟ್ಟಿನಲ್ಲಿ ಕಬಡ್ಡಿ, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಮುಂತಾದ ಕ್ರೀಡೆಗಳತ್ತ ಸಾಗಿರುವ ನಮ್ಮ ಯುವ ಸಮೂಹದ ನಡುವೆ ಇಲ್ಲೊಂದು ಯುವ ತಂಡ ಪಕ್ಕಾ ಹಳ್ಳಿ ಸೊಗಡಿನ ಜಾನಪದ ಟಗರಿನ ಕಾಳಗ ಏರ್ಪಡಿಸಿ ಇಂದಿನ ಜನರಿಗೆ ವಿಭಿನ್ನ ಶೈಲಿಯ ಆಟದ ರುಚಿ ತೋರಿಸಿದ್ದು ಮಾತ್ರ ಸಂತಸದ ಸಂಗತಿ.