
ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಅವರು ಇಂದು ನಮ್ಮ ಜೊತೆ ಇಲ್ಲ. ಕ್ಯಾನ್ಸರ್ ಕಾರಣದಿಂದ ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳೋಕೆ ಅನೇಕರಿಂದ ಸಾಧ್ಯವಾಗುತ್ತಿಲ್ಲ.

ಅಪರ್ಣಾ ಇಲ್ಲದಿದ್ದರೂ ಮತ್ತೊಮ್ಮೆ ಅವರನ್ನು ತೆರೆಮೇಲೆ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಇದೆ. ಇದಕ್ಕೆ ಕಾರಣ ಆಗಿರೋದು ‘ಗ್ರಾಮಾಯಣ’ ಸಿನಿಮಾ. ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ತಾಯಿ ಪಾತ್ರ ಮಾಡಿದ್ದಾರೆ.

ದೇವನೂರು ಚಂದ್ರು ಅವರು ‘ಗ್ರಾಮಾಯಣ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಪರ್ಣಾ ಪಾತ್ರದ ಶೂಟಿಂಗ್ ಪೂರ್ಣಗೊಂಡಿಲ್ಲ ಎನ್ನುವ ಮಾತಿತ್ತು. ಆದರೆ, ಇದು ನಿಜವಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.

ಈಗಾಗಲೇ ‘ಗ್ರಾಮಾಯಣ’ ಸಿನಿಮಾದಲ್ಲಿ ಅಪರ್ಣಾ ಪಾಲಿನ ಶೂಟಿಂಗ್ ಪೂರ್ಣಗೊಂಡಿದೆ. ಈ ಸಿನಿಮಾದಲ್ಲಿ ಅವರದ್ದೇ ಧ್ವನಿ ಉಳಿಸಿಕೊಳ್ಳೋ ಚಾಲೆಂಜ್ ನಿರ್ದೇಶಕರಿಗೆ ಇದೆ.

ಅಪರ್ಣಾ ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ‘ಗ್ರಾಮಾಯಣ’ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಪೂರ್ಣ ಸಿನಿಮಾ ಕೆಲಸ ಮುಗಿಸಿ ತೆರೆಮೇಲೆ ಚಿತ್ರವನ್ನು ತರುವ ಆಲೋಚನೆ ತಂಡಕ್ಕೆ ಇದೆ.