
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 9 ರಿಂದ ಹತ್ತು ದಿನಗಳ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಆಡಳಿತ ಯಂತ್ರವೇ ನಾಳೆ ಬೆಳಗಾವಿಗೆ ಸ್ಥಳಾಂತರಗೊಳ್ಳಲಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 5 ವರ್ಷ ಸತತ ಅಧಿವೇಶನ ನಡೆಸಿದ್ದರು. ಈಗ ಎರಡನೇ ಅವಧಿಯ ಎರಡನೇ ಅಧಿವೇಶನ ಸಿದ್ದರಾಮಯ್ಯನವರದ್ದು ಇದಾಗಿದೆ. ಹೀಗಾಗಿ ಈ ಬಾರಿಯೂ ಅಚ್ಚುಕಟ್ಟಾಗಿ ಬೆಳಗಾವಿ ಅಧಿವೇಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಧಿವೇಶನಕ್ಕೆ ಕೊನೆ ಹಂತದ ಸಿದ್ಧತೆಯನ್ನು ಡಿಸಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಪರಿಶೀಲನೆ ನಡೆಸಿತು. ಸುವರ್ಣ ವಿಧಾನ ಸೌಧದಲ್ಲಿ ಉಭಯ ಕಲಾಪಗಳ ಸಿದ್ಧತೆ, ಸಿಎಂ, ಸ್ಪೀಕರ್, ಸಚಿವರು, ಶಾಸಕರು, ಸಚಿವಾಲಯ ಮಟ್ಟದ ಅಧಿಕಾರಿಗಳು ಸೇರಿ ಒಟ್ಟು 12000 ಸಿಬ್ಬಂದಿಗಳಿಗೆ ಅಗತ್ಯವಿರೋ ಊಟ, ವಸತಿ ಮತ್ತು ವಾಹನದ ವ್ಯವಸ್ಥೆಯನ್ನ ಒದಗಿಸಲಾಗಿದೆ. ಅದರಲ್ಲೂ ಪ್ರತಿಭಟನೆ, ಹೋರಾಟಗಳಿಗೆ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ಅತ್ತ ಭದ್ರತೆಗೆ ಆಗಮಿಸೋ ಪೊಲೀಸರಿಗಾಗಿ ಟೌನ್ ಶಿಫ್ ನಿರ್ಮಿಸಲಾಗಿದೆ.

ಸ್ವಯಂ ಡಿಸಿ ಮೊಹಮ್ಮದ್ ರೋಷನ್ ಅವರೇ ಬೆಡ್ ಮೇಲೆ ಮಲಗಿ ಪರಿಶೀಲನೆ ನಡೆಸಿದರು. ಅಧಿವೇಶನದ ಸಿದ್ಧತೆ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಡಿಸಿಯಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಬೆಳಗಾವಿ ಅಧಿವೇಶನ ಅಂದರೆ, ಸಾಲು ಸಾಲು ಪ್ರತಿಭಟನೆಗಳು ಸದ್ದು ಮಾಡುತ್ತವೆ. ಅದರಲ್ಲೂ ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ ಪರ್ಯಾಯವಾಗಿ ನಾಡದ್ರೋಹಿ ಎಂಇಎಸ್ ಮಹಾಮೇಳಕ್ಕೆ ಮುಂದಾಗಿದೆ. ಈ ಬಾರಿಯೂ ಎಂಇಎಸ್ ಮಹಾಮೇಳಕ್ಕೆ ಅವಕಾಶವಿಲ್ಲ. ಮಹಾಮೇಳ ಬ್ರೇಕ್ ಹಾಕಲು ಪೊಲೀಸ್ ಕಮೀಷನರ್ ನಿಷೇಧಾಜ್ಞೆ ಜಾರಿಗೆ ನಿರ್ಧಾರ ಮಾಡಿದ್ದಾರೆ. ಮತ್ತೊಂದೆಡೆಗೆ ಜಿಲ್ಲಾಡಳಿತ ಮಹಾರಾಷ್ಟ್ರ ನಾಯಕರ ಬೆಳಗಾವಿ ಪ್ರವೇಶವನ್ನು ನಿರ್ಬಂಧಿಸಲು ಮುಂದಾಗಿದೆ.

ಈ ಮಧ್ಯೆ, ಹತ್ತು ದಿನಗಳ ಅಧಿವೇಶನ ಸಂದರ್ಭದಲ್ಲಿ ಬರೊಬ್ಬರಿ 60 ಕ್ಕೂ ಅಧಿಕ ಸಂಘಟನೆಗಳು ಹೋರಾಟಕ್ಕೆ ಅನುಮತಿ ಪಡೆದುಕೊಂಡಿವೆ. ಈ ಇವೆಲ್ಲವೂಗಳ ಮಧ್ಯೆ ಹತ್ತು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಆರು ಸಾವಿರ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಬೇರೆ ಬೇರೆ ಜಿಲ್ಲೆಯಿಂದ ಅಧಿಕಾರಿಗಳಿಂದ ಹಿಡಿದು ಪೊಲೀಸ್ ಸಿಬ್ಬಂದಿ ಈಗಾಗಲೇ ಬೆಳಗಾವಿಯತ್ತ ಮುಖ ಮಾಡುತ್ತಿದ್ದಾರೆ. ಆರು ಜನ ಎಸ್ಪಿ, ಹತ್ತು ಜನ ಹೆಚ್ಚುವರಿ ಎಸ್ಪಿ ಸೇರಿ 35ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಪ್ರತಿಭಟನೆ ಸ್ಥಳ ಸೇರಿ ನಗರದ ಸೂಕ್ಷ್ಮ ಪ್ರದೇಶದಲ್ಲಿ ಒಟ್ಟು 450ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಕೂಡ ಅಳವಡಿಕೆ ಮಾಡಲಾಗಿದೆ.

ಒಟ್ಟಿನಲ್ಲಿ ಹತ್ತು ದಿನಗಳ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಎಲ್ಲ ರೀತಿಯಲ್ಲಿ ಸಜ್ಜಾಗಿದೆ. ಜಿಲ್ಲಾಡಳಿತ ಈ ಬಾರಿಯೂ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಕಷ್ಟು ಪ್ಲಾನ್ ಮಾಡಿಕೊಂಡಿದೆ. ಕಳೆದ ಬಾರಿ 18 ಕೋಟಿ ಖರ್ಚಾಗಿದ್ದರೆ ಈ ಬಾರಿ 19 ಕೋಟಿ ಖರ್ಚಾಗಲಿದೆ ಅಂತಾ ಜಿಲ್ಲಾಡಳಿತ ಹೇಳಿದೆ. ನಾಳೆಯಿಂದ ಕುಂದಾನಗರಿಯಲ್ಲಿ ವಿಐಪಿಗಳ ಗೂಟದ ಕಾರುಗಳ ಶಬ್ಧ ಸದ್ದು ಮಾಡಲಿದ್ದು, ಈ ಬಾರಿಯಾದರೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಚರ್ಚೆ ಆಗಲಿ ಎಂಬುದು ಈ ಭಾಗದ ಜನರ ಆಶಯ.