
ಭೀಮಾನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಕಾರಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಾನಾಂತರದಲ್ಲಿರುವ 8 ಬಾಂದಾರ್ ಕಂ ಬ್ಯಾರೇಜ್ಗಳು ಮುಳುಗಡೆಯಾಗಿವೆ. ಕರ್ನಾಟಕದ ಗೋವಿಂದಪುರ-ಭಂಡಾರಕವಟೆ, ಉಮರಾಣಿ-ಲವಗಿ, ಚಣೆಗಾಂವ-ಬರೂರ, ಹಿಂಗಣಿ-ಆಳಗಿ ಬ್ಯಾರೇಜ್ ಗಳು ಜಲಾವೃತಗೊಂಟಿವೆ.

ಮಹಾರಾಷ್ಟ್ರದ ಹಿಳ್ಳಿ-ಗುಬ್ಬೇವಾಡ, ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಖಾನಾಪುರ-ಪಡನೂರ ಬ್ಯಾರೇಜ್ಗಳು ಜಲಾವೃತಗೊಂಡಿವೆ.

ಬ್ಯಾರೇಜ್ಗಳ ಮೇಲೆ ಎರಡು ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲ ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ಎರಡೂ ಬದಿಗೆ ತೆರಳಲು ಸುತ್ತು ಹಾಕಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.

ನದಿಯಲ್ಲಿ ನೀರು ಏರಿಕೆಯಾದ ಕಾರಣ, ರೈತರ ಜಮೀನಿಗೆ ನೀರೆತ್ತುವ ಪಂಪ್ ಸೆಟ್ಗಳು ನೀರಲ್ಲಿ ಮುಳಗಿವೆ. ಕೆಲ ಪಂಪ್ ಸೆಟ್ಗಳು ಕೊಚ್ಚಿಕೊಂಡು ಹೋಗಿವೆ.

ಮತ್ತಷ್ಟು ನೀರು ಏರಿಕೆಯಾದರೆ ರೈತರ ಜಮೀನಿಗೆ ಭೀಮಾ ನದಿ ಪ್ರವಾಹ ನುಗ್ಗಲಿದೆ. ಕೆಲ ಗ್ರಾಮಗಳಿಗೂ ನೀರು ನುಗ್ಗಿ ಪ್ರವಾಹ ಉಂಟಾಗುವ ಸಾದ್ಯತೆ ಇದೆ. ಜನರು ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.