ಅಲ್ಲಿ ಪಶುಗಳ ಲೋಕವೇ ನಿರ್ಮಾಣವಾಗಿತ್ತು. ರೈತರ ಜೀವನಾಡಿ ಎಂದೇ ಪರಿಗಣಿಸಲಾಗುವ ಹತ್ತಾರು ಜಾತಿಯ ಪಶು, ಕುರಿ, ಕುದುರೆ ಒಂದೇ ಕಡೆ ನೋಡಬಹುದಾಗಿತ್ತು. ಒಂದಕ್ಕಿಂತ ಒಂದು ಭಿನ್ನವಾಗಿದ್ದ ಪಶುಗಳಲ್ಲಿ ಕೆಲವೊಂದು ಆಕಾರದಲ್ಲಿ ಅಜಾನುಬಾಹು ಲೆಕ್ಕದಲ್ಲಿದ್ದರೆ ಮತ್ತೆ ಕೆಲವು ಕಣ್ಣು ಕುಕ್ಕುವಂತಹ ಬಿಳಿಬಣ್ದದ ಜಾನುವಾರುಗಳಿದ್ದವು. ನಾನಾ ಜಾತಿಯ ಪಶುಗಳನ್ನ ನೋಡಲು ಜನ ಮುಗಿ ಬಿದ್ದಿದ್ದರು.
ಹೌದು..ಕರ್ನಾಟಕದ ಕಿರಿಟ ಗಡೀ ತಾಲೂಕು ಔರಾದ್ನಲ್ಲಿ ಸುಪ್ರಸಿದ್ಧ ಅಮರೇಶ್ವರ ಉದ್ಭವ ಲಿಂಗ ಜಾತ್ರೆಯ ನಿಮಿತ್ಯವಾಗಿ ಉತ್ತಮ ತಳಿಯ ಜಾನುವಾರ ಪ್ರದರ್ಶನವನ್ನ ಹಮ್ಮಿಕೊಳ್ಳಲಾಗಿತ್ತು. ನಗರದ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ದೇವಣಿ ತಳಿಯ ಜಾನುವಾರು ಜಾತ್ರೆ ಎಲ್ಲರ ಗಮನ ಸೆಳೆಯಿತು.
ಜಾತ್ರೆಯಲ್ಲಿ ಜರ್ಸಿ, ದೇವಣಿ, ಎಚ್.ಎಫ್. ತಳಿ, ಖಿಲಾರೆ, ಜವಾರಿ ಎಮ್ಮೆ, ಗೌಳೇರ ಎಮ್ಮೆ, ಜಾನುವಾರು ಹೆಚ್ಚಾಗಿ ಕಂಡು ಬಂದವು. ಜೊತೆಗೆ ಕುದುರೆಗಳು ಕೂಡ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಕುದುರೆಯ ಡ್ಯಾನ್ಸ್ ನೋಡಲು ಜನರು ಮುಗಿಬಿದ್ದರು. ಇನ್ನೂ ಜಾಣುವಾರು ಪ್ರದರ್ಶನದಲ್ಲಿ ಸುಮಾರು ಹತ್ತಾರು ತಳಿಗಳು ಇನ್ನೂರಕ್ಕೂ ಹೆಚ್ಚು ಜಾನುವಾರು ಪ್ರದರ್ಶನದಲ್ಲಿ ಭಾಗವಹಿಸಿ ಗಮನ ಸೆಳೆದವು.
ನೆರೆಯ ರಾಜ್ಯಗಳಾದ ಮಹರಾಷ್ಟ್ರ, ತೆಲಂಗಾಣ ಸೇರಿದಂತೆ ಜಿಲ್ಲೆಮತ್ತು ಹೊರ ಜಿಲ್ಲೆಯಿಂದ ವಿವಿಧ ಊರುಗಳಿಂದ ರಾಸುಗಳು ಬಂದು ಸೇರಿದ್ದವು. ರಾಸುಗಳ ಮೈ ತೊಳೆದು ವಿವಿಧ ಅಲಂಕಾರಿ ಗೊಂಡೆಗಳನ್ನು ಹಾಕಿ ರೈತರು ತಮ್ಮ ಪಶುಗಳನ್ನ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇದರ ಜೊತೆಗೆ ಉತ್ತಮ ರೀತಿಯಲ್ಲಿಪೋಷಣೆ ಮಾಡಿದ ರಾಸುಗಳಿಗೆ ಬಹುಮಾನವನ್ನ ನೀಡಲಿದ್ದು ಜಾನುವಾರು ಸಾಕಾಣಿಕೆಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಪ್ರತಿ ವರ್ಷ ಜಾನುವಾರು ಪ್ರದರ್ಶನವನ್ನ ಮಾಡಲಾಗುತ್ತದೆ ಎಂದು ರೈತ ಖಂಡು ಮಾನೆ ಹೇಳಿದ್ದಾರೆ.
ರೈತ ಸಮೂಹವನ್ನು ಹೈನುಗಾರಿಕೆಯತ್ತ ಸೆಳೆಯುವ ಉದ್ದೇಶದಿಂದ ಆಯೋಜಿಸಲಾಗಿದ್ದ ಜಾತ್ರೆಯಲ್ಲಿ ಹತ್ತಾರು ಬಗೆಯ ತಳಿಗಳ ಜಾನುವಾರು ಪ್ರದರ್ಶನ ಮಾಡಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಬೀದರ್ ಹಾಗೂ ಬೀದರ್ ಪಕ್ಕದಲ್ಲಿರುವ ದೇವಣಿಯಲ್ಲಿ ಕಂಡು ಬರುವ ದೇವನಿ ತಳಿಗಳಿ ಈ ಜಾನುವಾರು ಪ್ರದರ್ಶನದಲ್ಲಿ ಹೆಚ್ಚಾಗಿ ಕಂಡು ಬಂದವು. ದೈತ್ಯವಾದ ದೇಹ ಸುಂದರವಾದ ಆಕಾರ ಹಾಗು ಹಾಲು ಕೊಡಲು ರೈತರ ಹೊಲದಲ್ಲಿ ಉಳುಮೆ ಮಾಡಲು ಸಹ ಹೇಳಿ ಮಾಡಿಸಿದ ಈ ದೇವಣಿ ತಳು ಈ ಜಾನುವಾರು ಪ್ರದರ್ಶನದಲ್ಲಿ ಎಲ್ಲರ ಗಮನ ಸೇಳೆಯಿತು.
ರೈತರನ್ನ ಹೈನುಗಾರಿಕೆಗೆ ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಕೂಡ ಅಮರೇಶ್ವರ ಜಾತ್ರೆಯಲ್ಲಿ ಜಾನುವಾರು ಪ್ರದರ್ಶಣವನ್ನ ಹಮ್ಮಿಕೊಳ್ಳಲಾಗುತ್ತದೆ. ಈ ಪ್ರದರ್ಶನದಲ್ಲಿ ರಾಜ್ಯ ಸೇರದಂತೆ ನೇರೆ ರಾಜ್ಯದ ಅಕ್ಕಪಕ್ಕದ ಗ್ರಾಮದಿಂದ ರೈತರು ತಮ್ಮ ತಮ್ಮ ಹಸು, ಎಮ್ಮೆ, ಆಡುಗಳನ್ನ ತಂದು ಈ ಪ್ರದರ್ಶನದಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಾರೆ.
Published On - 4:53 pm, Mon, 3 March 25