
‘ಕನ್ನಡ ಚಲನಚಿತ್ರ ಕಪ್’ ಟೂರ್ನಿ ಆರಂಭ ಆಗಿದೆ. ಕನ್ನಡ ಸಿನಿಮಾ ಸೆಲೆಬ್ರಿಟಿಗಳು ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದಾರೆ. ಕೆಸಿಸಿ ಮೂರನೇ ಆವೃತ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಫೆ.24) ಉದ್ಘಾಟನೆ ಮಾಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಕೆಸಿಸಿ’ ಪಂದ್ಯಗಳು ನಡೆಯುತ್ತಿವೆ. ಕರುನಾಡ ಧ್ವಜ ಹಾರಿಸುವ ಮೂಲಕ ಉದ್ಘಾಟನೆ ಮಾಡಲಾಗಿದೆ. ‘ಕ್ರೇಜಿ ಸ್ಟಾರ್’ ರವಿಚಂದ್ರನ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕೂಡ ಈ ವೇಳೆ ಹಾಜರಿದ್ದರು.

ಕಿಚ್ಚ ಸುದೀಪ್, ಡಾಲಿ ಧನಂಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಮುಂತಾದ ಸ್ಟಾರ್ ನಟರು ಕೆಸಿಸಿ ಪಂದ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಎಲ್ಲರ ಉತ್ಸಾಹದಿಂದಾಗಿ ಟೂರ್ನಿಯ ಮೆರುಗು ಹೆಚ್ಚಿದೆ. ಒಟ್ಟು ಆರು ತಂಡಗಳು ಪರಸ್ಪರ ಹಣಾಹಣಿ ನಡೆಸುತ್ತಿವೆ.

ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟರ್ಗಳು ಕೂಡ ‘ಕರ್ನಾಟಕ ಚಲನಚಿತ್ರ ಕಪ್’ನಲ್ಲಿ ಆಡುತ್ತಿದ್ದಾರೆ. ಇದರಿಂದಾಗಿ ಕ್ರೀಡಾಭಿಮಾನಿಗಳನ್ನು ಈ ಟೂರ್ನಿ ಆಕರ್ಷಿಸುತ್ತಿದೆ. ಫೆ.24 ಮತ್ತು ಫೆ.25ರಂದು ಎರಡು ದಿನಗಳ ಕಾಲ ಪಂದ್ಯಗಳು ನಡೆಯಲಿವೆ.

ಕೆಸಿಸಿ ಉದ್ಘಾಟವೆ ವೇಳೆ 80 ಅಡಿ ಉದ್ದ, 140 ಅಡಿ ಅಗಲದ ಕನ್ನಡ ಬಾವುಟವನ್ನು ಅನಾವರಣ ಮಾಡಲಾಯಿತು. ಇದು ಕನ್ನಡಿಗರ ಪಾಲಿನ ಹೆಮ್ಮೆಯ ಸಂಗತಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ನೆಚ್ಚಿನ ತಾರೆಯರು ಬ್ಯಾಟ್ ಬೀಸುವುದನ್ನು ನೋಡಲು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಿದ್ದಾರೆ.
Published On - 7:40 pm, Fri, 24 February 23