ಶನಿವಾರ (ಸೆ.7) ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅತ್ತ ವಿದೇಶದಲ್ಲಿರುವ ಹಿಂದೂಗಳು ಕೂಡ ಸಂಭ್ರಮ ಸಡಗರದಿಂದಲೇ ಚೌತಿ ಹಬ್ಬವನ್ನು ಆಚರಿಸಿದ್ದರು. ಇನ್ನು ಬಾಂಗ್ಲಾದೇಶ್ ಕ್ರಿಕೆಟಿಗ ಲಿಟ್ಟನ್ ದಾಸ್ ಕೂಡ ತಮ್ಮ ಮನೆಯಲ್ಲಿಯೇ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಣೇಶ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಹಿಂದೂ ಧರ್ಮೀಯನಾಗಿರುವ ಲಿಟ್ಟನ್ ದಾಸ್ ಮನೆಯಲ್ಲಿಯೇ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿಕೊಂಡರು. ಕುಟುಂಬದವರೊಂದಿಗೆ ವಿಘ್ನನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಿದ ಫೋಟೋಗಳನ್ನು ದಾಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಬಾಂಗ್ಲಾ ಕ್ರಿಕೆಟಿಗನ ಗಣೇಶ ಹಬ್ಬದ ಫೋಟೋಗಳು ವೈರಲ್ ಆಗಿವೆ.
ಸದ್ಯ ತವರಿನಲ್ಲಿರುವ ಲಿಟ್ಟನ್ ದಾಸ್ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ. ಸೆಪ್ಪೆಂಬರ್ 19 ರಿಂದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿ ಶುರುವಾಗಲಿದ್ದು, ಈ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಲಿಟ್ಟನ್ ದಾಸ್ ಬಾಂಗ್ಲಾ ಪರ ಕಣಕ್ಕಿಳಿಯಲಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಪಾಕಿಸ್ತಾನ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಲಿಟ್ಟನ್ ದಾಸ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ 2ನೇ ಟೆಸ್ಟ್ ಪಂದ್ಯದಲ್ಲಿ 138 ರನ್ಗಳನ್ನು ಬಾರಿಸುವ ಮೂಲಕ ಬಾಂಗ್ಲಾದೇಶ್ ತಂಡವು ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಲಿಟ್ಟನ್ ದಾಸ್ ಭಾರತದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತ ಮತ್ತು ಬಾಂಗ್ಲಾದೇಶ್ ನಡುವೆ ಒಟ್ಟು 2 ಟೆಸ್ಟ್ ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯವು ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಶುರುವಾದರೆ, ಎರಡನೇ ಪಂದ್ಯವು ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ನಡೆಯಲಿದೆ. ಇದಾದ ಬಳಿಕ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ.