ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಭಾರತೀಯ ಕ್ರಿಕೆಟ್ನಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಚುಟುಕು ವಿಶ್ವಕಪ್ಗಾಗಿ ಕಳೆದ ಒಂದು ವರ್ಷದಿಂದ ಮಾಡಿದ ಅನೇಕ ಪ್ರಯೋಜನ ಸೆಮೀಸ್ ವರೆಗೆ ತಲುಪಲು ಮಾತ್ರ ಸೀಮಿತವಾಯಿತು. ಇದರಿಂದ ಕೋಪಗೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಬಿಸಿಸಿಐ ಈಗಾಗಲೇ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಪ್ರತಿ ಬಾರಿ ತಂಡ ಸೋತಾಗಲೂ ಆಯ್ಕೆ ಪ್ರಕ್ರಿಯೆಗಳ ಕುರಿತು ಟೀಕೆಗಳು ಕೇಳಿಬಂದಿದ್ದವು. ಹೀಗಾಗಿ ಚೇತನ್ ಸೇರಿದಂತೆ ನಾಲ್ವರು ಇದ್ದ ಸಮಿತಿಯನ್ನು ಕಿತ್ತೆಸೆದಿದೆ.
ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಬಿಸಿಸಿಐ ಮುಂದಾಗಿದೆ. ಟಿ20, ಏಕದಿನ ಮತ್ತು ಟೆಸ್ಟ್ ಹೀಗೆ ಮೂರು ಮಾದರಿಯ ಕ್ರಿಕೆಟ್ಗೆ ಮೂವರು ನಾಯಕರನ್ನು ನೇಮಿಸಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ.
ಸದ್ಯದಲ್ಲೇ ಬಿಸಿಸಿಐ ಹೊಸ ಆಯ್ಕೆ ಸಮಿತಿಯನ್ನು ರಚಿಸಿ ನೂತನ ನಾಯಕತ್ವದ ಜವಾಬ್ದಾರಿ ಯಾರಿಗೆ ವಹಿಸಬೇಕೆಂದು ಚರ್ಚೆ ನಡೆಸಲಿದೆ. ಪ್ರಸ್ತುತ, ರೋಹಿತ್ ಶರ್ಮಾ ಎಲ್ಲಾ ಫಾರ್ಮಾಟ್ ಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಸೀನಿಯರ್ ಪುರುಷರ ತಂಡದ ಆಯ್ಕೆ ಸಮಿತಿಯ ಸದಸ್ಯರ ನೇಮಕಕ್ಕಾಗಿ ಶುಕ್ರವಾರ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನವೆಂಬರ್ 28 ಕೊನೆಯ ದಿನವಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ನೂತನ ನಾಯಕನ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.
ಹಾರ್ದಿಕ್ ಪಾಂಡ್ಯ ಸದ್ಯ ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್ ಪ್ರವಾಸಕ್ಕೆ ಭಾರತ ತಂಡದ ನಾಯಕರಾಗಿದ್ದಾರೆ. ಮುಂದಿನ ಟಿ20 ತಂಡದ ನಾಯಕತ್ವ ಪಾಂಡ್ಯ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಿ ಚಾಂಪಿಯನ್ ಮಾಡಿದ ಅನುಭವ ಹಾರ್ದಿಕ್ಗಿದೆ.
ಪಾಂಡ್ಯ ಜೊತೆಗೆ ಕೆಎಲ್ ರಾಹುಲ್ ಹೆಸರು ಕೂಡ ಕೇಳಿಬರುತ್ತಿದೆ. ರಾಹುಲ್ ಸದ್ಯ ಭಾರತ ವೈಟ್-ಬಾಲ್ ಕ್ರಿಕೆಟ್ನ ಉಪ ನಾಯಕರಾಗಿದ್ದಾರೆ. ಈ ಜವಾಬ್ದಾರಿ ಹೊತ್ತು ಸುಮಾರು ಒಂದು ವರ್ಷ ಅಗಿದೆ. ಹೀಗಾಗಿ ರೋಹಿತ್ ಜಾಗಕ್ಕೆ ನಾಯಕನಾಗಲು ರಾಹುಲ್ ಕೂಡ ಸಾಲಿನಲ್ಲಿದ್ದಾರೆ.
ಟೀಮ್ ಇಂಡಿಯಾ ಮಾಜಿ ಕೊಚ್ ರವಿ ಶಾಸ್ತ್ರಿ ಕೂಡ ಹಾರ್ದಿಕ್ ಅವರನ್ನು ಭಾರತ ಟಿ20 ಮಾದರಿಯ ಕ್ರಿಕೆಟ್ಗೆ ನಾಯಕನನ್ನಾಗಿ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಅವರನ್ನು ಭಾರತದ ಮುಂದಿನ ನಾಯಕ ಎಂದು ಆಯ್ಕೆ ಮಾಡಿಟ್ಟುಕೊಂಡರೆ ತಪ್ಪೇನಿಲ್ಲ ಎಂಬುದು ಶಾಸ್ತ್ರಿ ಮಾತು.