
ಟಿ20 ವಿಶ್ವಕಪ್ನಲ್ಲಿನ ಸೋಲಿನ ಬಳಿಕ ಭಾರತೀಯ ಕ್ರಿಕೆಟ್ನಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಈಗಾಗಲೇ ಆಯ್ಕೆ ಸಮಿತಿಯನ್ನು ವಿಸರ್ಜಿಸಲಾಗಿದ್ದು, ನೂತನ ಆಯ್ಕೆದಾರರನ್ನು ಬಿಸಿಸಿಐ ಶೀಘ್ರದಲ್ಲೇ ಆಯ್ಕೆ ಮಾಡಲಿದೆ. ಇದರ ನಡುವೆ ಟೀಮ್ ಇಂಡಿಯಾದ ಹಿರಿಯ ಆಟಗಾರರನ್ನು ಬಿಸಿಸಿಐ ಸಭೆಗೆ ಕರೆಯಲಿದೆ ಎಂದು ವರದಿಯಾಗಿದೆ.

ಈ ಸಭೆಯ ಮುಖ್ಯ ಉದ್ದೇಶ ತಂಡದಲ್ಲಿ ಬದಲಾವಣೆ ತರುವುದು. ಅಂದರೆ 2024 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಹಿರಿಯ ಆಟಗಾರರನ್ನು ಟಿ20 ತಂಡದಿಂದ ಕೈ ಬಿಡುವ ಬಗ್ಗೆ ಚರ್ಚಿಸಲು ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ವಿಶೇಷ ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಅಂದರೆ ಮುಂದಿನ ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವಂತೆ ಹಿರಿಯ ಆಟಗಾರರಿಗೆ ಬಿಸಿಸಿಐ ಮನವಿ ಮಾಡಲಿದೆ. ಹೀಗಾಗಿ ಟಿ20 ತಂಡದಿಂದ ಹೊರಗುಳಿಯುವಂತೆ ಮನವೊಲಿಸುವ ಸಾಧ್ಯತೆಯಿದೆ.

ಇತ್ತ 35 ವರ್ಷದ ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್ ಆಡುವುದು ಅನುಮಾನ. ಹೀಗಾಗಿ ತಂಡದ ನಾಯಕತ್ವನ್ನು ತ್ಯಜಿಸುವಂತೆ ಮನವಿ ಮಾಡುವ ಸಾಧ್ಯತೆ ಹೆಚ್ಚು. ಇದಾಗ್ಯೂ ಹಿಟ್ಮ್ಯಾನ್ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.

ಈ ಸಭೆಯ ಬಳಿಕ ರೋಹಿತ್ ಶರ್ಮಾ ಟಿ20 ತಂಡದಿಂದ ಹೊರಗುಳಿಯುವ ಸಾಧ್ಯತೆಯಿದ್ದು, ಆ ಬಳಿಕ ಹಾರ್ದಿಕ್ ಪಾಂಡ್ಯರನ್ನು ಟಿ20 ತಂಡದ ನಾಯಕರಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಂತಹದೊಂದು ಬದಲಾವಣೆಯಾಗಲಿರುವುದನ್ನು ಬಿಸಿಸಿಐ ಮೂಲಗಳು ಕೂಡ ದೃಢಪಡಿಸಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ತಂಡದಲ್ಲಿರುವ ಹಿರಿಯ ಆಟಗಾರರು ಕೇವಲ ಟೆಸ್ಟ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಕೇಂದ್ರೀಕರಿಸಲಿದ್ದಾರೆ. ಹಾಗೆಯೇ ಮುಂದಿನ ವರ್ಷ ಭಾರತ ಆಡಲಿರುವ ಬೆರಳೆಣಿಕೆಯ ಟಿ20 ಪಂದ್ಯಗಳಲ್ಲಿ ಯುವ ಆಟಗಾರರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ನ್ಯೂಜಿಲೆಂಡ್ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ಟಿ20 ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಬಳಿಕ ಪಾಂಡ್ಯ ಅವರೇ ಭಾರತ ತಂಡದ ಕಪ್ತಾನನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಬಹುದು.

ಒಟ್ಟಿನಲ್ಲಿ ಮುಂಬುರುವ ಟಿ20 ವಿಶ್ವಕಪ್ಗಾಗಿ ಈಗಲೇ ತಂಡದಲ್ಲಿ ಮಹತ್ವದ ಬದಲಾವಣೆ ತರಲು ಬಿಸಿಸಿಐ ಮುಂದಾಗಿದ್ದು, ಅದರಂತೆ ಟ್ವೆಂಟಿ-20 ತಂಡದಿಂದ ಯಾರೆಲ್ಲಾ ಹೊರಬೀಳಲಿದ್ದಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.