- Kannada News Photo gallery Cricket photos Dinesh Karthik on virat kohli struggle vs Sri Lankan spinners kannada news
Dinesh Karthik: ‘ನಾನಿಲ್ಲಿ ಕೊಹ್ಲಿ ಪರ ಮಾತಾಡ್ತಿಲ್ಲ’; ಲಂಕಾ ಪ್ರವಾಸದಲ್ಲಿ ವಿರಾಟ್ ಫ್ಲಾಪ್ ಶೋ ಬಗ್ಗೆ ಡಿಕೆ ಮಾತು
Dinesh Karthik: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಪಿನ್ ಬೌಲರ್ಗಳ ವಿರುದ್ಧ ಆಡುವುದು ಕಷ್ಟಕರವಾಗಿತ್ತು. ಮೊದಲನೆಯದಾಗಿ ನಾವು ಇದನ್ನು ಒಪ್ಪಿಕೊಳ್ಳಬೇಕು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಬೇರೆ ಯಾರೇ ಆಗಿರಲಿ, ಬ್ಯಾಟ್ಸ್ಮನ್ಗಳು 8 ರಿಂದ 30 ಓವರ್ಗಳ ನಡುವೆ ರನ್ ಕಲೆಹಾಕಲು ಹಾಗೂ ಕ್ರೀಸ್ನಲ್ಲಿ ಉಳಿಯಲು ಸಾಕಷ್ಟು ಪರಿಶ್ರಮ ಪಡಬೇಕಾಗಿತ್ತು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
Updated on: Aug 11, 2024 | 8:27 PM

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಏಕದಿನ ಸರಣಿಯಲ್ಲಿ ಆಡಿದ ಮೂರು ಇನ್ನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ, 19.57 ರ ಸರಾಸರಿಯಲ್ಲಿ ಕೇವಲ 58 ರನ್ ಕಲೆಹಾಕಲಷ್ಟೇ ಶಕ್ತರಾದರು. ಕೊಹ್ಲಿಯ ಈ ಕಳಪೆ ಪ್ರದರ್ಶನದ ಬಳಿಕ ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ.

ವಾಸ್ತವವಾಗಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾರನ್ನು ಹೊರತುಪಡಿಸಿ, ಟೀಂ ಇಂಡಿಯಾದ ಉಳಿದ ಯಾವ ಬ್ಯಾಟ್ಸ್ಮನ್ಗೂ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ರೋಹಿತ್ ಮಾತ್ರ ಎರಡು ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು. ಉಳಿದಂತೆ ಇತರ ಭಾರತೀಯ ಬ್ಯಾಟ್ಸ್ಮನ್ಗಳು ರನ್ ಬರ ಎದುರಿಸಿದ್ದರು.

ಇದೀಗ ಕ್ರಿಕ್ಬಜ್ ಜೊತೆ ಮಾತನಾಡಿರುವ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿಯ ಪರ ಬ್ಯಾಟ್ ಬೀಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಪಿನ್ ಬೌಲರ್ಗಳ ವಿರುದ್ಧ ಆಡುವುದು ಕಷ್ಟಕರವಾಗಿತ್ತು. ಮೊದಲನೆಯದಾಗಿ ನಾವು ಇದನ್ನು ಒಪ್ಪಿಕೊಳ್ಳಬೇಕು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಬೇರೆ ಯಾರೇ ಆಗಿರಲಿ, ಬ್ಯಾಟ್ಸ್ಮನ್ಗಳು 8 ರಿಂದ 30 ಓವರ್ಗಳ ನಡುವೆ ರನ್ ಕಲೆಹಾಕಲು ಹಾಗೂ ಕ್ರೀಸ್ನಲ್ಲಿ ಉಳಿಯಲು ಸಾಕಷ್ಟು ಪರಿಶ್ರಮ ಪಡಬೇಕಾಗಿತ್ತು.

ಎಲ್ಲಾ ಪಿಚ್ಗಳು ಆ ರೀತಿಯಲ್ಲಿ ವರ್ತಿಸುವುದಿಲ್ಲ. ಆದರೆ ಸ್ಪಿನ್ನರ್ಗಳನ್ನು ಆಡಲು ಇದು ಕಷ್ಟಕರವಾದ ಪಿಚ್ ಆಗಿತ್ತು. ನಾನು ಇಲ್ಲಿ ವಿರಾಟ್ ಕೊಹ್ಲಿಯನ್ನು ರಕ್ಷಿಸಲು ಹೋಗುತ್ತಿಲ್ಲ. ಆದರೆ ಸ್ಪಿನ್ ಆಡುವುದು ತುಂಬಾ ಕಷ್ಟಕರವಾಗಿತ್ತು ಎಂಬುದನಷ್ಟೇ ನಾನು ನಿಮಗೆ ಹೇಳಬಲ್ಲೆ ಎಂದು ಕಾರ್ತಿಕ್ ಹೇಳಿದರು

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಮೂರು ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಇದರ ಫಲವಾಗಿ ಟೀಂ ಇಂಡಿಯಾ ಎಲ್ಲಾ ಮೂರು ಪಂದ್ಯಗಳಲ್ಲಿ ಸೋಲನು ಎದುರಿಸಿತು. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 0-2 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು.

ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಮೊದಲ ಪಂದ್ಯ ಟೈ ಆಗಿತ್ತು. ಎರಡನೇ ಪಂದ್ಯದಲ್ಲಿ ಶ್ರೀಲಂಕಾ 32 ರನ್ಗಳಿಂದ ಗೆದ್ದರೆ, ಮೂರನೇ ಪಂದ್ಯದಲ್ಲಿ ಭಾರತ ತಂಡ 249ರನ್ಗಳಿಗೆ ಉತ್ತರವಾಗಿ ಕೇವಲ 138 ರನ್ ಗಳಿಸಿ 110 ರನ್ಗಳಿಂದ ಸೋತಿತು.




