
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಹಾದಿ ದುರ್ಗಮವಾಗಿದೆ. ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ಪರಿಣಾಮ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ.

200 ರನ್ಗಳ ಟಾರ್ಗೆಟ್ ನೀಡಿದ್ದರೂ ಆರ್ಸಿಬಿ ಬೌಲರ್ಗಳಿಗೆ ಇದನ್ನು ತಡೆಹಿಡಿಯಲು ಸಾಧ್ಯವಾಗಲಿಲ್ಲ. ಐದು ಬೌಲರ್ಗಳು ಕೂಡ ಹತ್ತಕ್ಕಿಂತ ಅಧಿಕ ಎಕಾನಮಿ ನೀಡಿದರು. ಮುಂಬೈ ಬ್ಯಾಟರ್ಗಳು ಮನಬಂದಂತೆ ಬ್ಯಾಟ್ ಬೀಸಿ ಆರ್ಸಿಬಿ ಬೌಲರ್ಗಳ ಬೆವರಿಳಿಸಿದರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ವಿಭಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಮೊದಲಾರ್ಧದಲ್ಲಿ ಪರ್ಪಲ್ ಕ್ಯಾಪ್ ತೊಟ್ಟು ಮಾರಕವಾಗಿದ್ದ ಮೊಹಮ್ಮದ್ ಸಿರಾಜ್ ಈಗ ರನ್ ಬಿಟ್ಟುಕೊಡುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ಮೊಹಮ್ಮದ್ ಸಿರಾಜ್ ಐಪಿಎಲ್ 2023ರ ಮೊದಲ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ, ಈಗ ಅದೇ ಲಯ ಕಳೆದುಕೊಂಡಿದ್ದಾರೆ. ನಮ್ಮ ಬೌಲರ್ಗಳು ಬೇಗನೆ ಫಾರ್ಮ್ಗೆ ಬಂದು ಸಕಾರಾತ್ಮಕವಾಗಿ ಆಡಬೇಕು ಎಂದು ಡುಪ್ಲೆಸಿಸ್ ಹೇಳಿದ್ದಾರೆ.

ಈಗ ಟೂರ್ನಿಯ ಅಂತಿಮ ಹಂತ. ಈ ಸಂದರ್ಭದಲ್ಲಿ ವಿಕೆಟ್ ನಿಧಾನಗತಿಯಿಂದ ಕೂಡಿರುತ್ತದೆ. ಹಾಗಾಗಿ ಆರಂಭಿಕ 6 ಓವರ್ಗಳಲ್ಲಿ ಸಾಧ್ಯವಾದಷ್ಟು 60 ರನ್ಗಳನ್ನು ಕಲೆ ಹಾಕುವತ್ತ ಗಮನ ಹರಿಸಬೇಕು. ಮುಂಬೈ ಪವರ್ ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿತು ಎಂಬುದು ಫಾಫ್ ಮಾತು.

ವಾಂಖೆಡೆ ವಿಕೆಟ್ಗೆ ಹೋಲಿಸಿದರೆ ನಾವು ಸುಮಾರು 20 ರನ್ಗಳನ್ನು ಕಡಿಮೆ ಕಲೆಹಾಕಿದೆವು. ಮುಖ್ಯವಾಗಿ ಅಂತಿಮ ಐದು ಓವರ್ಗಳಲ್ಲಿ ಹೆಚ್ಚು ರನ್ ಕಲೆಹಾಕಲು ಎಡವಿದ್ದೇವೆ. ಬ್ಯಾಕೆಂಡ್ನಲ್ಲಿ ನಿರೀಕ್ಷಿತ ರನ್ ಬಾರದ ಕಾರಣ ನನಗೆ ತುಂಬಾ ಬೇಸರವಾಗಿದೆ - ಫಾಫ್ ಡುಪ್ಲೆಸಿಸ್.

ಮುಂಬೈ ಇಂಡಿಯನ್ಸ್ ಅತ್ಯಂತ ಬಲಿಷ್ಠ ಚೇಸಿಂಗ್ ತಂಡವಾಗಿದೆ. ಅಲ್ಲದೆ ಅವರ ಬ್ಯಾಟಿಂಗ್ ಕೊನೆಯ ಹಂತದ ವರೆಗೂ ಇದೆ. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅದ್ಭುತವಾಗಿತ್ತು. ಅವರಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದೆ. ಅವರು ಸೆಟಲ್ ಆಗಿ ಸ್ಫೋಟಕ ಆಟಕ್ಕೆ ಮುಂದಾದರೆ ತಡೆಯಲು ಅಸಾಧ್ಯ ಎಂದು ಫಾಫ್ ಸೂರ್ಯನನ್ನು ಹಾಡಿಹೊಗಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು. ಗ್ಲೆನ್ ಮ್ಯಾಕ್ಸ್ವೆಲ್ 33 ಎಸೆತಗಳಲ್ಲಿ 68 ಹಾಗೂ ಫಾಫ್ ಡುಪ್ಲೆಸಿಸ್ 41 ಎಸೆತಗಳಲ್ಲಿ 65 ರನ್ ಸಿಡಿಸಿದರು. ಮುಂಬೈ ಪರ ಜೇಸನ್ ಬೆಹನ್ಡ್ರಾಫ್ 3 ವಿಕೆಟ್ ಕಿತ್ತರು.

ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪರ ಸೂರ್ಯಕುಮಾರ್ ಯಾದವ್ ಕೇವಲ 35 ಎಸೆತಗಳಲ್ಲಿ 83 ರನ್ ಚಚ್ಚಿದರೆ, ನೆಹಾಲ್ ವಧೀರ ಅಜೇಯ 52, ಇಶಾನ್ ಕಿಶನ್ 42 ರನ್ ಬಾರಿಸಿದರು. ಮುಂಬೈ 16.3 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಗೆಲುವು ಸಾಧಿಸಿತು. ಆರ್ಸಿಬಿ ಪರ ಹಸರಂಗ ಹಾಗೂ ವಿಜಯ್ಕುಮಾರ್ ತಲಾ 2 ವಿಕೆಟ್ ಪಡೆದರು.