
ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾದ ಟಿ20 ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಸಹೋದರನೊಂದಿಗೆ ಇತ್ತೀಚೆಗೆ ದೇಶದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

ಪಾಂಡ್ಯ ತಮ್ಮ ಟ್ವಿಟ್ಟರ್ನಲ್ಲಿ ಅಮಿತ್ ಶಾ ಭೇಟಿಯ ಫೋಟೋವನ್ನು ಹಾಕಿದ್ದು, ಇದರಲ್ಲಿ ಅವರೊಂದಿಗೆ ತಮ್ಮ ಸಹೋದರನಿರುವುದನ್ನು ಕಾಣಬಹುದಾಗಿದೆ.

ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿರುವ ಪಾಂಡ್ಯ, ‘ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗಾಗಿ ಸಮಯ ಮೀಸಲಿಟ್ಟಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು, ನನ್ನ ಸೌಭಾಗ್ಯ’ ಎಂದು ಬರೆದುಕೊಂಡಿದ್ದಾರೆ.

2022 ರಲ್ಲಿ ಐಪಿಎಲ್ನ ನೂತನ ತಂಡವಾದ ಗುಜರಾತ್ ಟೈಟಾನ್ಸ್ನ ನಾಯಕತ್ವ ವಹಿಸಿಕೊಂಡಿದ್ದ ಪಾಂಡ್ಯ, ತನ್ನ ಚೊಚ್ಚಲ ನಾಯಕತ್ವದಲ್ಲಿಯೇ ತಂಡವನ್ನು ಚಾಂಪಿಯನ್ ಮಾಡಿದ್ದರು. ಅಂದಿನಿಂದ ಹಾರ್ದಿಕ್ ಟೀಮ್ ಇಂಡಿಯಾದ ನಾಯಕತ್ವಕ್ಕೆ ಪ್ರಬಲ ಸ್ಪರ್ಧಿಯಾಗಿದ್ದರು. ಇದೀಗ ಹಾರ್ದಿಕ್ಗೆ ಆ ಅದೃಷ್ಟ ಖುಲಾಯಿಸಿದೆ.

ಇನ್ನು ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ ಕೂಡ ಭಾರತ ಪರ ಆಡಿದ್ದಾರೆ. ಆದರೆ, ಒಂದೂವರೆ ವರ್ಷಗಳಿಂದ ಅವರು ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. 2021 ರ ಜುಲೈ 20 ರಂದು ಶ್ರೀಲಂಕಾ ವಿರುದ್ಧ ಭಾರತದ ಪರ ಕೃನಾಲ್ ತನ್ನ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಬಳಿಕ ಅವರಿಗೆ ಟೀಂ ಇಂಡಿಯಾದಿಂದ ಕರೆ ಬಂದಿಲ್ಲ.