ಸುಳ್ಳು ಹೇಳಿ ಇಶಾನ್ ಕಿಶನ್ರನ್ನು ತಂಡದಿಂದ ಹೊರಗಿಟ್ರಾ ಗೌತಮ್ ಗಂಭೀರ್
India vs New Zealand: ಭಾರತದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 215 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 165 ರನ್ಗಳಿಸಿ ಆಲೌಟ್ ಆಗಿ 50 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಶಾನ್ ಕಿಶನ್ ಕಣಕ್ಕಿಳಿದಿರಲಿಲ್ಲ.
Updated on: Jan 29, 2026 | 9:11 AM

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 4ನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಕಣಕ್ಕಿಳಿದಿರಲಿಲ್ಲ. ನಿಗಲ್ ಇಂಜುರಿಯ ಕಾರಣ ಇಶಾನ್ ಇಂದು ಆಡುತ್ತಿಲ್ಲ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ವೇಳೆ ತಿಳಿಸಿದ್ದರು.

ಆದರೆ ಇದೇ ವೇಳೆ ಇಶಾನ್ ಕಿಶನ್ ಮೈದಾನದಲ್ಲಿ ಬ್ಯಾಟ್ ಹಿಡಿದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಅಂದರೆ ಈ ಪಂದ್ಯಕ್ಕೂ ಮುನ್ನ ಇಶಾನ್ ಅಭ್ಯಾಸದಲ್ಲಿ ನಿರತರಾಗಿದ್ದದ್ದು ಇದರಿಂದ ಸ್ಪಷ್ಟವಾಗಿತ್ತು. ಇದಾದ ಬಳಿಕ ಹಲವು ಬಾರಿ ಮೈದಾನಕ್ಕೆ ಆಗಮಿಸಿದ್ದರು.

ಅಂದರೆ ಪಂದ್ಯದುದ್ದಕ್ಕೂ ವಾಟರ್ ಬಾಯ್ ಆಗಿ ಮೈದಾನಕ್ಕೆ ಆಗಮಿಸಿದ್ದ ಇಶಾನ್ ಕಿಶನ್ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲದಂತೆ ಕಂಡು ಬಂದರು. ಅದರಲ್ಲೂ ಅವರು ವೇಗದಲ್ಲಿ ಓಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿಯೇ ಇದೀಗ ಇಶಾನ್ ಕಿಶನ್ ಅವರ ಗಾಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ನಿಗಲ್ ಇಂಜುರಿ ಎಂಬುದು ಸಣ್ಣ ನೋವಿನ ಸಮಸ್ಯೆ. ಕೈ ಕಾಲು ಅಥವಾ ದೇಹದ ಭಾಗದಲ್ಲಿ ಕಾಣಿಸಿಕೊಳ್ಳುವ ಈ ನೋವಿನ ಸಮಸ್ಯೆಯಿದ್ದರೆ ಇಶಾನ್ ಕಿಶನ್ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಬೇಕಿತ್ತು. ಇದರ ಹೊರತಾಗಿ ಅವರನ್ನು ವಾಟರ್ ಬಾಯ್ ಆಗಿ ಬಳಸಿಕೊಂಡಿರುವುದೇಕೆ? ಎಂದು ಅನೇಕರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಟೀಮ್ ಇಂಡಿಯಾ ಕೋಚ್ನ ನಡೆಯು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಅದರಲ್ಲೂ ಗೌತಮ್ ಗಂಭೀರ್ ಸುಳ್ಳು ಹೇಳಿ ಅತ್ಯುತ್ತಮ ಫಾರ್ಮ್ನಲ್ಲಿರುವ ಇಶಾನ್ ಅವರನ್ನು ಆಡುವ ಬಳಗದಿಂದ ಹೊರಗಿಟ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
