ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು 17ನೇ ಪಂದ್ಯ ನಡೆಯಲಿದ್ದು ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಶಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾದೇಶ (India vs Bangladesh) ಮುಖಾಮುಖಿ ಆಗಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಹ್ಯಾಟ್ರಿಕ್ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಗೆಲುವಿನ ಓಟ ಮುಂದುವರೆಸುವ ತವಕದಲ್ಲಿದೆ. ಇದಕ್ಕಾಗಿ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಭ್ಯಾಸಕ್ಕೆ ಬಂದಿರಲಿಲ್ಲ. ಇವರಿಬ್ಬರು ಪ್ರ್ಯಾಕ್ಟೀಸ್ ಸೆಷನ್ನಿಂದ ಹೊರಗುಳಿದಿದ್ದರು. ಇದಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಅಂತಿಮ ಅಭ್ಯಾಸದ ಅವಧಿಯಲ್ಲಿ, ಇಶಾನ್ ಕಿಶನ್, ಶುಭ್ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಮಾತ್ರ ನೆಟ್ಸ್ ಇದ್ದರು. ಮಂಗಳವಾರ ಪೂರ್ಣ ತಂಡ ಅಭ್ಯಾಸ ನಡೆಸಿದರೆ, ಬುಧವಾರದ ಗಿಲ್ ಹೆಚ್ಚು ಹೊತ್ತು ಪ್ರ್ಯಾಕ್ಟೀಸ್ನಲ್ಲಿ ಭಾಗಿಯಾಗಿದ್ದರು. ಆರ್ ಅಶ್ವಿನ್ ಮತ್ತು ಮೊಹಮ್ಮದ್ ಶಮಿ ಕೂಡ ಬೌಲಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು.
ಮೇಲ್ನೋಟಕ್ಕೆ ಬಾಂಗ್ಲಾದೇಶ ತಂಡ ಭಾರತಕ್ಕೆ ದೊಡ್ಡ ಸವಾಲು ಅಲ್ಲ. ಹೀಗಾಗಿ ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ. ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಬಹುದು. ಮುಖ್ಯವಾಗಿ ಈ ಬಾರಿಯ ವಿಶ್ವಕಪ್ನಲ್ಲಿ ಎದುರಾಳಿಗೆ ದೊಡ್ಡ ಸವಾಲು ನೀಡದ ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಂಭವವಿದೆ.
ಹಾಗೆಯೆ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು. ಇವರು ವಿರಾಟ್ ಕೊಹ್ಲಿ ಅಥವಾ ಶ್ರೇಯಸ್ ಅಯ್ಯರ್ ಜಾಗಕ್ಕೆ ಬರಬಹುದು. ಉಳಿದಂತೆ ಭಾರತ ತಂಡದಲ್ಲಿ ಬದಲಾವಣೆ ಅನುಮಾನ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ವರ್ಗ ಎಂದು ಹೇಳಬಹುದು. ಪಂದ್ಯದುದ್ದಕ್ಕೂ ಬ್ಯಾಟರ್ಗಳಿಗೆ ಈ ಪಿಚ್ ಸಹಕಾರ ನೀಡುತ್ತದೆ. ಬೌಲರ್ಗಳಿಗೆ ಇಲ್ಲಿ ದೊಡ್ಡ ಸವಾಲು ಎನ್ನಬಹುದು. ಮೈದಾನದ ಗಾತ್ರ ಚಿಕ್ಕದಾಗಿದ್ದು, ಇಲ್ಲಿ ಕೇವಲ 7 ಏಕದಿನ ಪಂದ್ಯಗಳನ್ನು ಆಡಲಾಗಿದೆಯಷ್ಟೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.