ಐಪಿಎಲ್ ಸೀಸನ್ 14 ಆರಂಭದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದರು. ಅದರಂತೆ 14ನೇ ಆವೃತ್ತಿ ಮುಕ್ತಾಯದೊಂದಿಗೆ ಕೊಹ್ಲಿಯ ಆರ್ಸಿಬಿ ಕ್ಯಾಪ್ಟನ್ಸಿ ಕೂಡ ಅಂತ್ಯವಾಗಿತ್ತು.
ಇದಾಗ್ಯೂ ವಿರಾಟ್ ಕೊಹ್ಲಿ ಯಾಕಾಗಿ ದಿಢೀರ್ ರಾಜೀನಾಮೆ ನೀಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಕಾರಣಗಳನನ್ನು ನೀಡಿರಲಿಲ್ಲ. ಕೆಲಸದ ಹೊರೆ ಹೆಚ್ಚಾಗಿರುವ ಕಾರಣ ನಾಯಕತ್ವವನ್ನು ತ್ಯಜಿಸುವುದಾಗಿ ಕೊಹ್ಲಿ ತಿಳಿಸಿದ್ದರು. ಇದೀಗ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿರುವ ಬಗ್ಗೆ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ನನ್ನ ನಿರ್ಧಾರದಲ್ಲಿ ಆಘಾತಗೊಳ್ಳುವಂತದ್ದೇನು ಇಲ್ಲ. ಸಾಮಾನ್ಯವಾಗಿ ಜನರಿಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಆದರೆ ನನ್ನ ನಿರ್ಧಾರ ಸ್ಪಷ್ಟವಾಗಿತ್ತು. ನನಗೆ ನನ್ನದೆಯಾದ ಸ್ಪಲ್ಪ ಸಮಯವಕಾಶ ಬೇಕಿತ್ತು. ನನ್ನ ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಬಯಸಿದ್ದೆ. ಹೀಗಾಗಿ ಆ ಒಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು ಅಷ್ಟೇ ಎಂದು ಕೊಹ್ಲಿ ಹೇಳಿದ್ದಾರೆ.
ನಾನು ನನ್ನ ಜೀವನವನ್ನು ತುಂಬಾ ಸರಳ ಮತ್ತು ಮೂಲಭೂತವಾಗಿ ಇಟ್ಟುಕೊಳ್ಳುತ್ತೇನೆ. ನಾನು ಒಂದು ನಿರ್ಧಾರ ತೆಗೆದುಕೊಳ್ಳಲು ಬಯಸಿದಾಗ, ಅದನ್ನು ಯೋಚಿಸಿರುತ್ತೇನೆ. ಅದರಂತೆ ನಾನು ನಾಯಕತ್ವ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಂಡೆ. ಅಲ್ಲದೆ ಅದನ್ನು ಘೋಷಿಸಿದೆ ಎಂದು ಕೊಹ್ಲಿ ತಿಳಿಸಿದರು.
ನನಗೆ ನನ್ನ ನಿರ್ಧಾರ ಬಗ್ಗೆ ಸ್ಪಷ್ಟತೆಯಿತ್ತು. ಏಕೆಂದರೆ ನಾನು ನಾಯಕತ್ವ ತ್ಯಜಿಸುವ ಬಗ್ಗೆ ಯೋಚಿಸಲು ಮತ್ತು ಇನ್ನೊಂದು ವರ್ಷ ಯೋಚಿಸಲು ಬಯಸಲಿಲ್ಲ. ನನಗೆ ಕ್ರಿಕೆಟ್ನ ಗುಣಮಟ್ಟ ನನಗೆ ಬಹಳ ಮುಖ್ಯವಾದ ವಿಷಯ. ಹೀಗಾಗಿ ಕ್ಯಾಪ್ಟನ್ಸಿ ಕೈಬಿಡುವ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಂಡು ಕೂಡಲೇ ರಾಜೀನಾಮೆ ನೀಡಿದ್ದೆ ಅಷ್ಟೇ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
2008 ರಿಂದ ಆರ್ಸಿಬಿ ತಂಡದಲ್ಲಿರುವ ವಿರಾಟ್ ಕೊಹ್ಲಿ, 2013 ರಲ್ಲಿ ನಾಯಕರಾಗಿ ಆಯ್ಕೆಯಾಗಿದ್ದರು. ಆ ಬಳಿಕ ಒಟ್ಟು 140 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ ತಂಡಕ್ಕೆ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದರು. ಇದೀಗ ಆರ್ಸಿಬಿ ಐಪಿಎಲ್ ಸೀಸನ್ 15 ಗಾಗಿ ಹೊಸ ನಾಯಕನನ್ನು ಘೋಷಿಸಲಿದೆ.