IPL 2023: ಐಪಿಎಲ್ನ 41ನೇ ಪಂದ್ಯದಲ್ಲಿ ಸಿಎಸ್ಕೆ ಆಟಗಾರ ಹಿಡಿದ ಕ್ಯಾಚ್ವೊಂದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಭರ್ಜರಿ ಪ್ರದರ್ಶನ ನೀಡಿತ್ತು. ಅದರಂತೆ ಕೊನೆಯ 2 ಓವರ್ಗಳಲ್ಲಿ 22 ರನ್ಗಳ ಅವಶ್ಯಕತೆಯಿತ್ತು. ತುಷಾರ್ ದೇಶಪಾಂಡೆ ಎಸೆದ 19ನೇ ಓವರ್ನ 3ನೇ ಎಸೆತದಲ್ಲಿ ಜಿತೇಶ್ ಶರ್ಮಾ ಭರ್ಜರಿ ಹೊಡೆತ ಬಾರಿಸಿದ್ದರು.
ಮುಗಿಲೆತ್ತರಕ್ಕೆ ಹಾರಿದ ಚೆಂಡು ಇನ್ನೇನು ಸಿಕ್ಸ್ ಆಗಲಿದೆ ಅನ್ನುವಷ್ಟರಲ್ಲಿ ಬೌಂಡರಿ ಲೈನ್ನಲ್ಲಿದ್ದ ಫೀಲ್ಡರ್ ಶೇಕ್ ರಶೀದ್ ಅದ್ಭುತವಾಗಿ ಚೆಂಡನ್ನು ಹಿಡಿದರು. ಆದರೆ ನಿಯಂತ್ರಣ ತಪ್ಪಿದ ರಶೀದ್ ಹಿಂಬದಿಯತ್ತ ಸಾಗಿ ಬೌಂಡರಿ ಲೈನ್ ಬಳಿ ಕೂದಳೆಲೆಯ ಅಂತರದಲ್ಲಿ ಕ್ಯಾಚ್ ಪೂರ್ಣಗೊಳಿಸಿದ್ದರು.
ಆದರೆ ಬೌಂಡರಿ ಲೈನ್ಗೆ ತನ್ನ ಶೂಸ್ ತಾಗಿದೆಯಾ ಇಲ್ಲವಾ ಎಂಬುದರ ಬಗ್ಗೆ ಖಚಿತತೆ ಇಲ್ಲದ ಕಾರಣ ಫೀಲ್ಡ್ ಅಂಪೈರ್ ಮೂರನೇ ಅಂಪೈರ್ಗೆ ಮೊರೆ ಹೋದರು. ಈ ವೇಳೆ ಪರಿಶೀಲಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ಇದೀಗ ಮೂರನೇ ಅಂಪೈರ್ನ ತೀರ್ಪಿನ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಥರ್ಡ್ ಅಂಪೈರ್ ಸಂಪೂರ್ಣವಾಗಿ ಪರಿಶೀಸದೇ ತ್ವರಿತಗತಿಯಲ್ಲಿ ತೀರ್ಪಿಟ್ಟಿದ್ದಾರೆ. ಅದರಲ್ಲೂ ಬೌಂಡರಿ ಲೈನ್ನಲ್ಲಿ ಯಾವುದೇ ಅಲುಗಾಟ ಕಂಡು ಬಂದಿಲ್ಲ. ಹೀಗಾಗಿ ಔಟ್ ಎಂದು ತೀರ್ಪು ನೀಡಿದ್ದರು. ಇದನ್ನೇ ಈಗ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
ಬೌಂಡರಿ ಲೈನ್ಗೆ ಕಾಲು ತಾಗಿದರೆ ಅದನ್ನು ಸಿಕ್ಸ್ ಎಂದು ಘೋಷಿಸಬೇಕು. ಬದಲಾಗಿ ಬೌಂಡರಿ ಲೈನ್ನಲ್ಲಿ ಯಾವುದೇ ಸ್ಥಾನಪಲ್ಲಟವಾಗಿಲ್ಲ ಎಂದು ಔಟ್ ಎಂದು ಘೋಷಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲವೇ ಕ್ಷಣಗಳಲ್ಲಿ ಪರಿಶೀಲನೆ ನಡೆಸಿ ತ್ವರಿತಗತಿಯನ್ನು ತೀರ್ಪು ನೀಡಿರುವ ಬಗ್ಗೆ ಕೂಡ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
ಅಂಪೈರ್ಗೆ ಹಲವು ರೀತಿಯಲ್ಲಿ ಪರಿಶೀಲನೆ ನಡೆಸಲು ಅವಕಾಶ ಹೊಂದಿದ್ದರೂ, ನಿರ್ಣಾಯಕ ಹಂತದಲ್ಲಿ ಕೇವಲ 2 ಆ್ಯಂಗಲ್ನಲ್ಲಿ ಮಾತ್ರ ಪರಿಶೀಲಿಸಿ ತೀರ್ಪು ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸಿಎಸ್ಕೆ ಫೀಲ್ಡರ್ ಶೂಸ್ ತಾಗಿದೆ, ಅದು ಸಿಕ್ಸ್ ಎಂಬ ವಾದವನ್ನು ಸಹ ಮುಂದಿಡುತ್ತಿದ್ದಾರೆ.
ಒಟ್ಟಿನಲ್ಲಿ ಅತ್ಯದ್ಭುತ ಎನ್ನಬಹುದಾದ ಒಂದು ಕ್ಯಾಚ್ ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಕೆಲವರು ಅದು ಕ್ಯಾಚ್ ಎಂಬ ವಾದವನ್ನು ಮುಂದಿಟ್ಟರೆ, ಮತ್ತೆ ಕೆಲವರು ಅದು ಸಿಕ್ಸ್ ಎಂಬ ಪ್ರತಿವಾದ ಮುಂದಿಡುತ್ತಿದ್ದಾರೆ.
ಇನ್ನು ಈ ಕ್ಯಾಚ್ ಔಟ್ನ ಹೊರತಾಗಿಯೂ ಈ ಪಂದ್ಯದ ಕೊನೆಯ ಎಸೆತದಲ್ಲಿ ಸಿಕಂದರ್ ರಾಝ 3 ರನ್ ಕಲೆಹಾಕುವ ಮೂಲಕ ಪಂಜಾಬ್ ಕಿಂಗ್ಸ್ ತಂಡವು 4 ವಿಕೆಟ್ಗಳ ರೋಚಕ ಜಯ ಸಾಧಿಸಿರುವುದು ವಿಶೇಷ.