IPL 2023 RCB: ದಿಗ್ಗಜರ ಸಮಾಗಮ: ಈ ಸಲ ಕಪ್ ನಮ್ದೇ ಎಂದ RCB ಫ್ಯಾನ್ಸ್
IPL 2023 RCB Kannada: ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್ಸಿಬಿ ತಂಡವು ಐಪಿಎಲ್ ಅಭಿಯಾನ ಆರಂಭಿಸಲಿದೆ.
Updated on: Apr 01, 2023 | 3:30 PM

IPL 2023 RCB: ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ತಯಾರಿಯಲ್ಲಿದೆ. ಕಳೆದೆರಡು ದಿನಗಳಿಂದ ಬೆವರಿಳಿಸುತ್ತಿರುವ ಆರ್ಸಿಬಿ ಆಟಗಾರರನ್ನು ಶುಕ್ರವಾರ ವಿಶೇಷ ಅತಿಥಿಯೊಬ್ಬರು ಭೇಟಿಯಾಗಿದ್ದರು. ಅದು ಕೂಡ ಕಿಂಗ್ ಕೊಹ್ಲಿಯ ಜೊತೆಗೆ ಆಗಮಿಸುವ ಮೂಲಕ ಎಂಬುದು ವಿಶೇಷ.

ಹೌದು, ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನ ಕಿಂಗ್ ಆದರೆ, ಭಾರತದ ಫುಟ್ಬಾಲ್ ಅಂಗಳದ ಕಿಂಗ್ ಸುನಿಲ್ ಛೆಟ್ರಿ. ಇದೀಗ ಭಾರತೀಯ ಫುಟ್ಬಾಲ್ ತಂಡದ ನಾಯಕ ಆರ್ಸಿಬಿ ಕ್ಯಾಂಪ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಶುಕ್ರವಾರ ಆರ್ಸಿಬಿ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಯೊಂದಿಗೆ ತಂಡ ಜೆರ್ಸಿ ಧರಿಸಿ ಆಗಮಿಸಿದ ಸುನಿಲ್ ಛೆಟ್ರಿ ಆಟಗಾರರೊಂದಿಗೆ ಸಮಾಲೋಚಿಸಿದರು. ಅಲ್ಲದೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ಆರ್ಸಿಬಿ ಪ್ಲೇಯರ್ಗಳನ್ನು ಹುರಿದುಂಬಿಸಿದರು.

ಅಷ್ಟೇ ಅಲ್ಲದೆ ಅದ್ಭುತವಾಗಿ ಫೀಲ್ಡಿಂಗ್ ಮಾಡುವ ಮೂಲಕ ಆರ್ಸಿಬಿ ಆಟಗಾರರೇ ನಿಬ್ಬೆರಗಾಗುವಂತೆ ಮಾಡಿದರು. ಇದೇ ವೇಳೆ ಮಾತನಾಡಿದ ಸುನಿಲ್ ಛೆಟ್ರಿ, ನಾನು ಕೂಡ ಬೆಂಗಳೂರಿಗ, ಆರ್ಸಿಬಿ ನಮ್ಮ ತಂಡ ಎಂದರು.

ನಾನು ಸಹ ಬೆಂಗಳೂರು ಫುಟ್ಬಾಲ್ ಕ್ಲಬ್ನ ಆಟಗಾರ. ಬಿಎಫ್ಸಿ ಜೊತೆ ಆಡಲಾರಂಭಿಸಿದಾಗಿನಿಂದ ನಾನು ಆರ್ಸಿಬಿಯನ್ನು ಬೆಂಬಲಿಸುತ್ತಾ ಬಂದಿದ್ದೇನೆ. ಬೆಂಗಳೂರು ನಮ್ಮ ನಗರ, ಅಂದ್ರೆ ಬೆಂಗಳೂರಿನ ತಂಡ ನಮ್ಮದಲ್ಲವೇ ಎಂದರು.

ಇದೀಗ ಆರ್ಸಿಬಿ ಹಂಚಿಕೊಂಡಿರುವ ಸುನಿಲ್ ಛೆಟ್ರಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಆರ್ಸಿಬಿ ತಂಡದ ಮೇಲಿನ ಅವರ ಅಭಿಮಾನಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಆರ್ಸಿಬಿ ತಂಡವು ಐಪಿಎಲ್ ಅಭಿಯಾನ ಆರಂಭಿಸಲಿದೆ. ಈ ಬಾರಿ ಹೊಸ ಉತ್ಸಾಹದಲ್ಲಿರುವ ಆರ್ಸಿಬಿ ಹೋಮ್ ಗ್ರೌಂಡ್ ಮೂಲಕ ಐಪಿಎಲ್ ಅಭಿಯಾನ ಆರಂಭಿಸುತ್ತಿರುವುದರಿಂದ ಈ ಸಲ ಕಪ್ ನಮ್ದೇ ಎನ್ನುವ ವಿಶ್ವಾಸದಲ್ಲಿದ್ದಾರೆ ಆರ್ಸಿಬಿ ಫ್ಯಾನ್ಸ್.



















