- Kannada News Photo gallery Cricket photos Kannada News | IPL 2023 RCB vs GT: Bengaluru Weather Report
IPL 2023: RCB vs GT ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್ ರದ್ದಾದರೆ ಯಾರಿಗೆ ಲಾಭ?
IPL 2023 Kannada: ಆರ್ಸಿಬಿ 16 ಅಂಕಗಳನ್ನು ಕಲೆಹಾಕಿದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ಆರ್ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.
Updated on: May 20, 2023 | 10:53 PM

IPL 2023 RCB vs GT: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆಯಲಿರುವ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಆರ್ಸಿಬಿ ಪಾಲಿಗೆ ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಗೆದ್ದು 2 ಅಂಕಗಳನ್ನು ಗಳಿಸಲೇಬೇಕಿದೆ.

ಏಕೆಂದರೆ ಆರ್ಸಿಬಿ 16 ಅಂಕಗಳನ್ನು ಕಲೆಹಾಕಿದರೆ ಮಾತ್ರ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವು ಆರ್ಸಿಬಿ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಆದರೆ ಅಕ್ಯುವೆದರ್ ಮಾಹಿತಿ ಪ್ರಕಾರ, ಈ ಪಂದ್ಯಕ್ಕೆ ವರುಣ ಅಡಚಣೆಯನ್ನುಂಟು ಮಾಡಲಿದೆ. ಸಂಜೆ 4 ಗಂಟೆಯಿಂದ ಮೋಡ ಕವಿದ ವಾತಾವರಣ ಇರಲಿದೆ ಎಂದು ತಿಳಿಸಿದೆ.

ಅಲ್ಲದೆ ಸಂಜೆಯಿಂದ ಮಧ್ಯರಾತ್ರಿಯವರೆಗೂ ಮೋಡ ಕವಿದ ವಾತವರಣ ಇರಲಿದ್ದು, ಸಂಜೆ 5 ಗಂಟೆ, 7 ಗಂಟೆ ಹಾಗೂ 9 ಗಂಟೆಯ ವೇಳೆ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಹೀಗಾಗಿಯೇ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯ ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆ. ಇದರಿಂದ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವುದು ಅನುಮಾನ. ಏಕೆಂದರೆ ಮುಂಬೈ ಇಂಡಿಯನ್ಸ್ ನಾಳೆ ಗೆದ್ದರೆ 16 ಅಂಕಗಳನ್ನು ಸಂಪಾದಿಸಲಿದೆ. ಒಂದು ವೇಳೆ ಆರ್ಸಿಬಿ-ಗುಜರಾತ್ ಟೈಟಾನ್ಸ್ ಪಂದ್ಯ ರದ್ದಾದರೆ, ಆರ್ಸಿಬಿ 15 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಹಿಂದುಳಿಯಲಿದೆ. ಅತ್ತ ಮುಂಬೈ ಇಂಡಿಯನ್ಸ್ ಗೆದ್ದರೆ ಪ್ಲೇಆಫ್ ಪ್ರವೇಶಿಸಲಿದೆ. ಹೀಗಾಗಿ ಮ್ಯಾಚ್ ರದ್ದಾದರೆ ಆರ್ಸಿಬಿ ತಂಡದ ಪ್ಲೇಆಫ್ ಕನಸು ಕೂಡ ಕಮರಲಿದೆ.

ಇನ್ನು ಸಾಧಾರಣ ಮಳೆಯಾದರೆ ಪಂದ್ಯ ನಡೆಯುವುದು ಖಚಿತ. ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಮೈದಾನದಲ್ಲಿ ಸಬ್ ಏರ್ ಸಿಸ್ಟಮ್ ಇದ್ದು, ಈ ಯಂತ್ರವು ಮೈದಾನದಲ್ಲಿ ನೀರನ್ನು ವೇಗವಾಗಿ ಹೀರಿಕೊಳ್ಳಲಿದೆ. ಅದರಂತೆ 15 ನಿಮಿಷದೊಳಗೆ ಮೈದಾನವನ್ನು ಸಂಪೂರ್ಣವಾಗಿ ಒಣಗಿಸಿ ಪಂದ್ಯಕ್ಕಾಗಿ ಸಜ್ಜುಗೊಳಿಸಬಹುದು. ಹೀಗಾಗಿ ಸಾಧಾರಣ ಮಳೆ ಬಂದರೆ ಪಂದ್ಯ ನಡೆಯುವುದು ಖಚಿತ ಎಂದೇ ಹೇಳಬಹುದು.



















