IPL 2023: ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದ ಬಳಿಕ ನಡೆದ ಘಟನೆಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸೆಹ್ವಾಗ್, ಈ ಪಂದ್ಯ ಮುಗಿದ ಮೇಲೆ ನಾನು ಟಿವಿಯನ್ನು ಸ್ವಿಚ್ ಆಫ್ ಮಾಡಿ ಮಲಗಿದ್ದೆ. ಪಂದ್ಯದ ನಂತರ ಏನಾಯಿತು ಎಂಬುದು ಕೂಡ ನನಗೆ ತಿಳಿದಿರಲಿಲ್ಲ. ಮರುದಿನ ನಾನು ಎದ್ದಾಗ, ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಚರ್ಚೆ ನೋಡಿ ಆಶ್ಚರ್ಯಚಕಿತನಾದೆ.
ಏಕೆಂದರೆ ಅಲ್ಲಿ ಕಿತ್ತಾಡಿಕೊಂಡಿರುವುದು ದೇಶದ ಇಬ್ಬರು ಐಕಾನ್ಗಳು. ಸೋತವರು ಸದ್ದಿಲ್ಲದೆ ಸೋಲನ್ನು ಸ್ವೀಕರಿಸಿ ಹೊರನಡೆಯಬೇಕು. ಗೆದ್ದ ತಂಡ ಸಂಭ್ರಮಿಸಬೇಕು ಅಷ್ಟೇ. ಇಲ್ಲಿ ಇಬ್ಬರು ಪರಸ್ಪರ ಮಾತಿನ ಚಕಮಕಿಗೆ ಇಳಿಯುವ ಅವಶ್ಯಕತೆ ಏನಿತ್ತು?
ಈ ವ್ಯಕ್ತಿಗಳು ದೇಶದ ಐಕಾನ್ಗಳು. ಅವರು ಏನಾದರೂ ಮಾಡಿದರೆ ಅಥವಾ ಹೇಳಿದರೆ, ಲಕ್ಷಾಂತರ ಮಕ್ಕಳು ಅವರನ್ನು ಅನುಸರಿಸುತ್ತಾರೆ. ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇಂತಹ ಘಟನೆಗಳನ್ನು ಮಿತಿಗೊಳಿಸುತ್ತಾರೆ ಎಂದು ಸೆಹ್ವಾಗ್ ಹೇಳಿದರು.
ಇನ್ನು ಮಾತು ಮುಂದುವರೆಸಿದ ಸೆಹ್ವಾಗ್, ಇಂತಹ ಘಟನೆಗಳು ನಡೆದರೆ ಬಿಸಿಸಿಐ ಅಂತಹವರನ್ನು ನಿಷೇಧಿಸಬೇಕು. ಇದರಿಂದ ಇಂತಹ ಅಹಿತಕರ ಘಟನೆಗಳು ನಡೆಯುವುದಿಲ್ಲ ಅಥವಾ ಅಪರೂಪವಾಗುತ್ತದೆ. ಈ ಹಿಂದೆ ಇಂತಹ ಘಟನೆಗಳು ಹಲವಾರು ಬಾರಿ ನಡೆದಿವೆ. ಹೀಗಾಗಿ ಈ ಬಗ್ಗೆ ಬಿಸಿಸಿಐ ಕಠಿಣ ನಿಲುವು ತೆಗೆದುಕೊಳ್ಳುವುದು ಉತ್ತಮ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.
ಇನ್ನು ಮೈದಾನದಲ್ಲಿನ ಬೈಗುಳದ ಬಗ್ಗೆ ಮಾತನಾಡಿದ ಸೆಹ್ವಾಗ್, ನನ್ನ ಸ್ವಂತ ಮಕ್ಕಳು ಲಿಪ್-ರೀಡ್ ಮಾಡಬಲ್ಲರು. ಅವರು "ಬೆನ್ ಸ್ಟೋಕ್ಸ್" (ಹಿಂದಿ ಬೈಗುಳದ ಬದಲು ಹೆಸರು ಬಳಸಲಾಗಿದೆ) ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಇದೆಲ್ಲವನ್ನೂ ನಾಳೆ ಮಕ್ಕಳು ಕೂಡ ಮುಂದುವರೆಸಬಹುದು. ವಿರಾಟ್ ಕೊಹ್ಲಿ ಅಥವಾ ಗಂಭೀರ್ಗೆ ಮಾಡಬಹುದಾದರೆ, ನಾವು ಕೂಡ ಮಾಡಬಹುದು ಎಂಬ ಭಾವನೆ ಅವರಲ್ಲಿ ಮೂಡತ್ತದೆ ಎಂದು ಸೆಹ್ವಾಗ್ ತಿಳಿಸಿದರು.
ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿಯೊಂದಿಗೆ 5 ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಆಡಿದ್ದ ವೀರೇಂದ್ರ ಸೆಹ್ವಾಗ್, ಇಬ್ಬರ ನಡೆಯ ಬಗ್ಗೆ ಸಂತುಷ್ಟರಾಗಿಲ್ಲ. ಅಲ್ಲದೆ ಇಬ್ಬರೂ ಕೂಡ ಮೈದಾನದಲ್ಲಿ ಉತ್ತಮವಾಗಿ ನಡೆದುಕೊಳ್ಳಬೇಕೆಂದು ಇದೇ ವೇಳೆ ವೀರೇಂದ್ರ ಸೆಹ್ವಾಗ್ ವಿನಂತಿಸಿದ್ದಾರೆ.
Published On - 7:22 pm, Thu, 4 May 23