- Kannada News Photo gallery Cricket photos Jitesh Sharma is a perfect replacement for Rishab Pant in india’s t20 squad
ಭಾರತ ಟಿ20 ತಂಡಕ್ಕೆ ಹೊಸ ವಿಕೆಟ್ಕೀಪರ್ ಬ್ಯಾಟರ್ ಆಗಮನ; ನಾಲ್ವರು ಆಟಗಾರರಿಗೆ ಟೆನ್ಷನ್ ಶುರು..!
Jitesh Sharma: ಕೆಳಕ್ರಮಾಂಕದಲ್ಲಿ ನಿರ್ಭೀತಿಯ ಬ್ಯಾಟಿಂಗ್ ಮಾಡಿದ್ದ ಜಿತೇಶ್ ಅವರ ಇನ್ನಿಂಗ್ಸ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿತು. ಹೀಗಾಗಿ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ನಲ್ಲಿ ಜಿತೇಶ್ಗೆ ತಂಡದಲ್ಲಿ ಅವಕಾಶ ನೀಡಬೇಕು ಎಂಬುದು ಅನುಭವಿಗಳ ಮಾತಾಗಿದೆ.
Updated on: Dec 04, 2023 | 12:36 PM

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡ ಟೀಂ ಇಂಡಿಯಾ ಇದೀಗ ಆಫ್ರಿಕಾ ಪ್ರವಾಸದತ್ತ ಗಮನ ಇರಿಸಿದೆ. ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ಬಲಿಷ್ಠ ಕಾಂಗರೂಗಳ ವಿರುದ್ಧ ಯುವ ಪಡೆಯನ್ನು ಕಣಕ್ಕಿಳಿಸಿದ್ದ ಬಿಸಿಸಿಐ ಒಂದು ಹಂತಕ್ಕೆ ಮೇಲುಗೈ ಸಾಧಿಸಿದೆ.

ಈ ಸರಣಿಯಲ್ಲಿ ಭಾರತ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಜಿತೇಶ್ ಶರ್ಮಾ, ತಿಲಕ್ ವರ್ಮಾ, ಮುಖೇಶ್ ಕುಮಾರ್ ಸೇರಿದಂತೆ ಹಲವು ಯುವ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಭಾಗಶಃ ಎಲ್ಲಾ ಆಟಗಾರರು ಯಶಸ್ವಿಯಾದರು.

ಇದರೊಂದಿಗೆ ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸೂಚನೆಯನ್ನು ನೀಡಿದರು. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಿತೇಶ್ ಶರ್ಮಾ, ತಮ್ಮ ಆಗಮನದಿಂದ ತಂಡದ ಉಳಿದ ನಾಲ್ವರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳ ಟೆನ್ಷನ್ ಹೆಚ್ಚಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಜಿತೇಶ್ ಶರ್ಮಾ, 4ನೇ ಟಿ20 ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 35 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ ಕೊನೆಯ ಟಿ20 ಪಂದ್ಯದಲ್ಲೂ 24 ರನ್ಗಳ ಕೊಡುಗೆ ನೀಡಿದ್ದರು.

ಕೆಳಕ್ರಮಾಂಕದಲ್ಲಿ ನಿರ್ಭೀತಿಯ ಬ್ಯಾಟಿಂಗ್ ಮಾಡಿದ್ದ ಜಿತೇಶ್ ಇನ್ನಿಂಗ್ಸ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿತು. ಹೀಗಾಗಿ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ನಲ್ಲಿ ಜಿತೇಶ್ಗೆ ತಂಡದಲ್ಲಿ ಅವಕಾಶ ನೀಡಬೇಕು ಎಂಬುದು ಅನುಭವಿಗಳ ಮಾತಾಗಿದೆ.

ವಾಸ್ತವವಾಗಿ ಮೊದಲು 3 ಟಿ20 ಪಂದ್ಯಗಳಲ್ಲಿ ವಿಕೆಟ್ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಕಿಶನ್ ಒಂದು ಪಂದ್ಯವನ್ನು ಬಿಟ್ಟರೆ ಉಳಿದೆರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರ ಬದಲು ಜಿತೇಶ್ಗೆ ಅವಕಾಶ ನೀಡಲಾಗಿತ್ತು.

ಇದೀಗ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿರುವ ಜಿತೇಶ್, ತಮ್ಮ ಸ್ಫೋಟಕ ಆಟದೊಂದಿಗೆ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಅಲ್ಲದೆ ಟಿ20 ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಪ್ರಬಲ ಸ್ಪರ್ಧಿಗಳಾಗಿದ್ದ ಇಶಾನ್ ಕಿಶನ್,ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಸಂಜು ಸ್ಯಾಮ್ಸನ್ಯನ್ನು ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಕಾರು ಆಪಘಾತಕ್ಕೀಡಾಗಿದ್ದ ರಿಷಭ್ ಪಂತ್ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ನೊಂದಿಗೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದ್ದರು. ಒಂದು ವೇಳೆ ಪಂತ್ ಟಿ20 ವಿಶ್ವಕಪ್ಗೂ ಮುನ್ನ ತಂಡಕ್ಕೆ ಮರಳಿ ತಮ್ಮ ಫಾರ್ಮ್ ಕಂಡುಕೊಳ್ಳದಿದ್ದರೆ, ಅವರ ಸ್ಥಾನಕ್ಕೆ ಜಿತೇಶ್ ಬರುವ ಸಾಧ್ಯತೆಗಳಿವೆ.

ಇನ್ನು ಭಾರತ ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ವಿಕೆಟ್ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿರುವ ಕನ್ನಡಿಗ ಕೆಎಲ್ ರಾಹುಲ್ಗೂ ಜಿತೇಶ್ ಆಗಮನ ಸಂಕಷ್ಟ ತಂದೊಡ್ಡಿದೆ. ಚುಟುಕು ಮಾದರಿಯಲ್ಲಿ ಹೆಚ್ಚಾಗಿ ಆರಂಭಿಕನಾಗಿ ಕಾಣಿಸಿಕೊಂಡಿರುವ ರಾಹುಲ್, ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವುದು ಕಡಿಮೆ. ಇದು ಕೂಡ ಜಿತೇಶ್ಗೆ ನೆರವಾಗಲಿದೆ.

ಸದ್ಯ ಜಿತೇಶ್ ಜೊತೆಗೆ ಟಿ20 ತಂಡದಲ್ಲಿ ವಿಕೆಟ್ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಳ್ಳುತ್ತಿರುವ ಇಶಾನ್ ಕಿಶನ್ ಕೂಡ ಕೆಳಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಅಷ್ಟು ಯಶಸ್ವಿಯಾಗಿಲ್ಲ. ಹೀಗಾಗಿ ಅವರನ್ನು ಟಾಪ್ 3 ಅಥವಾ ಆರಂಭಿಕನಾಗಿ ಕಣಕ್ಕಿಳಿಸಲಾಗುತ್ತಿದೆ. ಆದರೆ ಭಾರತದ ಟಾಪ್ ಆರ್ಡರ್ ಸ್ಥಾನಕ್ಕೆ ಸಾಕಷ್ಟು ಆಟಗಾರರು ಪೈಪೋಟಿಯಲ್ಲಿದ್ದಾರೆ. ಇದು ಕೂಡ ಕಿಶನ್ಗೆ ಸಂಕಷ್ಟ ತಂದ್ದೊಡಿದೆ.

ಇನ್ನು ಸಾಕಷ್ಟು ಪ್ರತಿಭೆಯಿದ್ದರೂ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿರುವ ಸಂಜು ಸ್ಯಾಮ್ಸನ್ಗೂ ಜಿತೇಶ್ ಆಗಮನ ಭಾರತ ಟಿ20 ತಂಡದ ಬಾಗಿಲು ಖಾಯಂ ಆಗಿ ಮುಚ್ಚುವ ಸುಳಿವು ನೀಡಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಜಿತೇಶ್, ಈ ಸರಣಿಯಲ್ಲೂ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರೆ ಉಳಿದ ನಾಲ್ವರು ಆಟಗಾರರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.









