- Kannada News Photo gallery Cricket photos KL Rahul opened up on the Shreyas Iyer and Ajinkya Rahane spot in Playing XI for IND vs SA 1st Test
KL Rahul: ರಹಾನೆ-ಅಯ್ಯರ್ ಪೈಕಿ ಯಾರಿಗೆ ಸ್ಥಾನ?: ಕಠಿಣ ಪ್ರಶ್ನೆಗೆ ಕೆಎಲ್ ರಾಹುಲ್ ಖಡಕ್ ಉತ್ತರ
Shreyas Iyer and Ajinkya Rahane: ಮೊದಲ ಟೆಸ್ಟ್ಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್ ನೇರ ಪ್ರಶ್ನೆಗೆ ನೇರ ಉತ್ತರ ನೀಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅಜಿಂಕ್ಯಾ ರಹಾನೆ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಒತ್ತಡದ ಬಗ್ಗೆ ಉಪ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ.
Updated on: Dec 25, 2021 | 10:35 AM

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿಗೆ ಭಾನುವಾರ ಚಾಲನೆ ಸಿಗಲಿದೆ. ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಪಂದ್ಯದ ನಿಮಿತ್ತ ಭಾರತ ತಂಡ ಉಪ ನಾಯಕ ಕೆಎಲ್ ರಾಹುಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕೆಲವೊಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಪ್ರಮುಖವಾಗಿ ಮೊದಲ ಟೆಸ್ಟ್ಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಬಗ್ಗೆ ಮಾತನಾಡಿದ ರಾಹುಲ್ ನೇರ ಪ್ರಶ್ನೆಗೆ ನೇರ ಉತ್ತರ ನೀಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅಜಿಂಕ್ಯಾ ರಹಾನೆ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಒತ್ತಡದಲ್ಲಿ ತಂಡವಿದೆ. ಅನುಭವದ ಆಧಾರದ ಮೇಲೆ ರಹಾನೆಗೆ ಅವಕಾಶ ನೀಡಬೇಕೋ ಅಥವಾ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಭರ್ಜರಿ ಫಾರ್ಮ್ನಲ್ಲಿರುವ ಅಯ್ಯರ್ ಅವರನ್ನು ಆಡಿಸಬೇಕೋ ಎಂಬ ಗೊಂದಲದಲ್ಲಿ ಟೀಮ್ ಇಂಡಿಯಾವಿದೆ.

ರಾಹುಲ್ ಹೇಳಿರುವಂತೆ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 5 ಸ್ಪೆಷಲಿಸ್ಟ್ ಬೌಲರ್ಗಳ ಕಾಂಬಿನೇಶನ್ ಹೊಂದುವ ಸಾಧ್ಯತೆ ಇದೆಯಂತೆ. ಹೀಗಾದಾಗ ರಹಾನೆ ಮತ್ತು ಶ್ರೇಯಸ್ ಅಯ್ಯರ್ ನಡುವೆ ಆಯ್ಕೆ ಪೈಪೋಟಿಯೊಂದು ಕಂಡುಬರಲಿದೆ. ಈ ಬಗ್ಗೆ ಮಾತನಾಡಿದ ರಾಹುಲ್, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಐದನೇ ಬ್ಯಾಟಿಂಗ್ ಕ್ರಮಾಂಕದ ಆಯ್ಕೆ ಅತ್ಯಂತ ಕಠಿಣವಾಗಿದೆ ಎಂದು ಹೇಳಿದ್ದಾರೆ.

ಇದೊಂದು ಕಠಿನ ನಿರ್ಧಾರ. ರಹಾನೆ ಟೆಸ್ಟ್ ತಂಡದ ಪ್ರಮುಖ ಆಟಗಾರ. ವಿದೇಶಗಳಲ್ಲಿ ಅನೇಕ ಉಪಯುಕ್ತ ಇನ್ನಿಂಗ್ಸ್ ಆಡಿದ್ದಾರೆ. ಅಯ್ಯರ್ ಕಾನ್ಪುರದಲ್ಲಿ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಹಾರಿ ಕೂಡ ಉತ್ತಮ ಬ್ಯಾಟ್ಸ್ಮನ್. ಇಂದು ಅಥವಾ ನಾಳೆಯೊಳಗೆ ಸುದೀರ್ಘವಾಗಿ ಚರ್ಚಿಸಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ – ಕೆಎಲ್ ರಾಹುಲ್.

ಕಳೆದ ಹಲವು ವರ್ಷಗಳಿಂದ ರಹಾನೆ ಬ್ಯಾಟಿಂಗ್ ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಫಾರ್ಮ್ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಅದರಂತೆ ನ್ಯೂಜಿಲೆಂಡ್ ವಿರುದ್ಧ ರು ಟೆಸ್ಟ್ ಸರಣಿಯ ಪದಾರ್ಪಣೆ ಪಂದ್ಯದಲ್ಲೇ ಅಯ್ಯರ್ ಎರಡೂ ಇನಿಂಗ್ಸ್ಗಳಲ್ಲಿ ಕ್ರಮವಾಗಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದರು. ಹೀಗಾಗಿ ಈ ಆಯ್ಕೆ ಭಾರತಕ್ಕೆ ಕಬ್ಬಿಣದ ಕಡಲೆಯಂತಾಗಿದೆ.

ಮತ್ತೊಂದೆಡೆ ಹನುಮ ವಿಹಾರಿ ಇತ್ತೀಚೆಗೆ ಭಾರತ 'ಎ' ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಐದನೇ ಬ್ಯಾಟಿಂಗ್ ಕ್ರಮಾಂಕಕ್ಕೆ ರಹಾನೆ, ಅಯ್ಯರ್ ಹಾಗೂ ವಿಹಾರಿ ಅವರಿಂದ ತೀವ್ರ ಪೈಪೋಟಿ ಇದೆ. ಟೀಮ್ ಮ್ಯಾನೇಜ್ಮೆಂಟ್ ಇವರಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಪ್ರತಿಯೊಂದು ತಂಡವೂ ಟೆಸ್ಟ್ ಗೆಲುವಿಗಾಗಿ 20 ವಿಕೆಟ್ ಉರುಳಿಸುವುದು ಅಗತ್ಯ. ವಿದೇಶಿ ಸರಣಿಗಳಲ್ಲಿ ನಾವು 5 ಬೌಲರ್ಗಳ ಸೂತ್ರವನ್ನು ಅನುಸರಿಸುತ್ತ ಬಂದಿದ್ದೇವೆ. ಇದರಿಂದ ನಮಗೆ ಲಾಭವೇ ಆಗಿದೆ. ಇದರಿಂದ ವರ್ಕ್ಲೋಡ್ ಕೂಡ ಕಡಿಮೆ ಆಗುತ್ತದೆ. ಹೀಗಾಗಿ ಇಲ್ಲಿಯೂ 5 ಬೌಲರ್ಗಳನ್ನು ಆಡಿಸುವ ಸಾಧ್ಯತೆ ಇದೆ – ರಾಹುಲ್.

ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಡಿ. 26 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಅನೇಕ ಕಾರಣಗಳಿಂದ ಈ ಟೆಸ್ಟ್ ಸರಣಿ ಭಾರತಕ್ಕೆ ಮುಖ್ಯವಾಗಿದೆ. ಪ್ರಮುಖವಾಗಿ ಹರಿಣಗಳ ನಾಡಿನಲ್ಲಿ ಟೀಮ್ ಇಂಡಿಯಾ (Team India) ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಐತಿಹಾಸಿಕ ಸಾಧನೆ ಮಾಡುವತ್ತ ಕೊಹ್ಲಿ (Virat Kohli) ಪಡೆ ಚಿತ್ತ ನೆಟ್ಟಿದೆ.









