
ಆಸ್ಟ್ರೇಲಿಯಾವನ್ನು ಹೀನಾಯವಾಗಿ ಸೋಲಿಸಿ 2026 ರ ಟಿ20 ವಿಶ್ವಕಪ್ನ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿರುವ ಆತಿಥೇಯ ಶ್ರೀಲಂಕಾ ತಂಡಕ್ಕೆ ಮುಂದಿನ ಸುತ್ತು ಆರಂಭವಾಗುವ ಮುನ್ನವೇ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ಮಥಿಶಾ ಪತಿರಾನ ಗಾಯಗೊಂಡಿದ್ದು, ಟಿ20 ವಿಶ್ವಕಪ್ನಿಂದ ಹೊರಗುಳಿಯುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪತಿರಾನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅವರಿಗೆ ತಮ್ಮ ಖೋಟಾದ ಮೊದಲ ಓವರ್ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ದ ಪತಿರಾನ ಈಗ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಪತಿರಾನ ಮೂರು ವಾರಗಳ ಕಾಲ ಆಟದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಶ್ರೀಲಂಕಾದ ಮಾಧ್ಯಮಗಳ ಪ್ರಕಾರ, ಮಥಿಶಾ ಪತಿರಾನ ಸ್ಕ್ಯಾನಿಂಗ್ಗೆ ಒಳಗಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಆದಾಗ್ಯೂ, ಪತಿರಾನ ಗಾಯವನ್ನು ಗಮನಿಸಿದರೆ, ಅವರು ಮೂರು ವಾರಗಳವರೆಗೆ ಆಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಮುಖ್ಯವಾದ ವಿಷಯವೆಂದರೆ ಅವರ ಗಾಯವು ಬೇಗನೆ ಗುಣವಾಗದಿದ್ದರೆ, ಅವರು 2026 ರ ಐಪಿಎಲ್ನಿಂದಲೂ ಹೊರಗುಳಿಯಬಹುದು.

ಪತಿರಾನ ಬದಲಿಗೆ ಶ್ರೀಲಂಕಾ ವಿಶ್ವಕಪ್ ತಂಡದಲ್ಲಿ ವೇಗದ ಬೌಲರ್ಗಳಾದ ಬಿನುರಾ ಫರ್ನಾಂಡೊ ಮತ್ತು ದಿಲ್ಶನ್ ಮಧುಶಂಕ ಸ್ಥಾನ ಪಡೆಯಬಹುದು ಎಂದು ವರದಿಯಾಗಿದೆ. ಶ್ರೀಲಂಕಾ ತಂಡವು ಬದಲಿ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಐಸಿಸಿ ತಾಂತ್ರಿಕ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಿದ್ದು, ಪತಿರಾನ ಬದಲಿಯಾಗಿ ನುವಾನ್ ತುಷಾರ ಅಥವಾ ಮಿಲನ್ ರತ್ನಾಯಕೆ ಅವರನ್ನು ಆಯ್ಕೆ ಮಾಡಬಹುದು ಎಂಬ ವರದಿಗಳೂ ಇವೆ.

ಮಥಿಷ ಪತಿರಾನ ಮೂರು ವಾರಗಳಲ್ಲಿ ಫಿಟ್ ಆಗದಿದ್ದರೆ, ಅವರು ಐಪಿಎಲ್ನಲ್ಲಿ ಆಡುವುದು ಕಷ್ಟಕರವಾಗಬಹುದು. ಕೋಲ್ಕತ್ತಾ ನೈಟ್ ರೈಡರ್ಸ್ ಈ ಬೌಲರ್ನನ್ನು ಭಾರಿ ಮೊತ್ತಕ್ಕೆ ಅಂದರೆ ಬರೋಬ್ಬರಿ 18 ಕೋಟಿಗೆ ಖರೀದಿಸಿದೆ. ಹೀಗಾಗಿ ಪತಿರಾನ ಫಿಟ್ ಆಗದಿದ್ದರೆ, ಅದು ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ಮುಖ್ಯವಾಗಿ, ಕೋಲ್ಕತ್ತಾ ಈಗಾಗಲೇ ಪ್ರಮುಖ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟಿದೆ ಮತ್ತು ಹರ್ಷಿತ್ ರಾಣಾ ಕೂಡ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಗಾಯದಿಂದಾಗಿ ರಾಣಾ ಕೂಡ ಟಿ20 ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಇದೀಗ ಪತಿರಾನ ಗಾಯಕ್ಕೆ ತುತ್ತಾಗಿರುವುದರಿಂದ ಕೆಕೆಆರ್ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.