
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ಗೆ ನಾಯಕತ್ವ ಒಲಿದಿದೆ. ಅದು ಕೂಡ ದೇಶೀಯ ಟೂರ್ನಿಯಲ್ಲಿ. ಅಂದರೆ ಮುಂಬರುವ ರಣಜಿ ಟೂರ್ನಿಯ ಪಂದ್ಯಗಳಲ್ಲಿ ಸಿರಾಜ್ ಕ್ಯಾಪ್ಟನ್ ಆಗಿ ಕಣಕ್ಕಿಳಿಯಲಿದ್ದಾರೆ.

ರಣಜಿ ಟೂರ್ನಿಯ ದ್ವಿತೀಯ ಸುತ್ತಿನ ಪಂದ್ಯಗಳು ಜನವರಿ 22 ರಿಂದ ಶುರುವಾಗಲಿದೆ. ಈ ಪಂದ್ಯಗಳಿಗಾಗಿ ಹೈದರಾಬಾದ್ ತಂಡವನ್ನು ಘೋಷಿಸಲಾಗಿದ್ದು, 15 ಸದಸ್ಯರುಗಳ ಈ ತಂಡದ ನಾಯಕನಾಗಿ ಮೊಹಮ್ಮದ್ ಸಿರಾಜ್ ಆಯ್ಕೆಯಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿ ಕ್ಯಾಪ್ಟನ್ ಆಗಿ ಕಣಕ್ಕಿಳಿಯಲು ಸಿರಾಜ್ ಸಜ್ಜಾಗಿದ್ದಾರೆ.

ಇದಕ್ಕೂ ಮುನ್ನ ಹೈದರಾಬಾದ್ ತಂಡವನ್ನು ಗಹ್ಲಾಟ್ ರಾಹುಲ್ ಸಿಂಗ್ ಮುನ್ನಡೆಸಿದ್ದರು. ರಾಹುಲ್ ನಾಯಕತ್ವದಲ್ಲಿ ಹೈದರಾಬಾದ್ ತಂಡದ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಮೊಹಮ್ಮದ್ ಸಿರಾಜ್ಗೆ ಕಪ್ತಾನನ ಸ್ಥಾನ ನೀಡಲಾಗಿದೆ.

ಇನ್ನು ಈ ಪ್ರಸ್ತುತ ರಣಜಿ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿರುವ ಹೈದರಾಬಾದ್ ತಂಡವು 4 ರಲ್ಲಿ ಸೋಲನುಭವಿಸಿದೆ. ಅಂದರೆ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಈ ಮೂಲಕ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದೀಗ ಮೊಹಮ್ಮದ್ ಸಿರಾಜ್ ಮುಂದಾಳತ್ವದಲ್ಲಿ ಹೈದರಾಬಾದ್ ಪಡೆ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಹೈದರಾಬಾದ್ ತಂಡ: ಮೊಹಮ್ಮದ್ ಸಿರಾಜ್ (ನಾಯಕ), ರಾಹುಲ್ ಸಿಂಗ್ (ಉಪನಾಯಕ), ಸಿವಿ ಮಿಲಿಂದ್, ತನಯ್ ತ್ಯಾಗರಾಜನ್, ರಕ್ಷನ್ ರೆಡ್ಡಿ, ರೋಹಿತ್ ರಾಯುಡು, ಕೆ ಹಿಮತೇಜ, ವರುಣ್ ಗೌಡ್, ಅಭಿರತ್ ರೆಡ್ಡಿ, ರಾಹುಲ್ ರಾದೇಶ್ (ವಿಕೆಟ್ ಕೀಪರ್), ಅಮನ್ ರಾವ್ ಪೆರಾಲ, ನಿತಿನ್ ಸಾಯಿ ಯಾದವ್, ಕನಾಲ ನಿತೀಶ್ ರೆಡ್ಡಿ, ಸಾಯಿ ರೆಡ್ಡಿ (ವಿಕೆಟ್ ಕೀಪರ್), ಬಿ ಪುಣ್ಣಯ್ಯ.
Published On - 10:30 am, Thu, 15 January 26