
ಅಪಘಾತದಲ್ಲಿ ಗಾಯಗೊಂಡಿದ್ದ ಸ್ನೇಹಿತನ ಜೀವ ಉಳಿಸಿದ ಟ್ರಾಫಿಕ್ ಪೊಲೀಸರನ್ನು ಭೇಟಿಯಾಗಿ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ತಮ್ಮ ಮಾನವೀಯತೆ ಮೆರೆದಿದ್ದಾರೆ. ಕರ್ತವ್ಯ ಮೀರಿ ಕೆಲಸ ಮಾಡಿದ್ದಕ್ಕಾಗಿ ಅವರನ್ನು ಸಚಿನ್ ಶ್ಲಾಘಿಸಿದರು. ಕ್ರಿಕೆಟ್ ದೇವರು ಟ್ವಿಟರ್ನಲ್ಲಿ ಟ್ರಾಫಿಕ್ ಪೊಲೀಸರನ್ನು ಶ್ಲಾಘಿಸಿ ವಿವರವಾದ ಲೇಖನವನ್ನು ಹಂಚಿಕೊಂಡಿದ್ದಾರೆ. ಇಂತಹವರಿಂದಲೇ ಜಗತ್ತು ಸುಂದರವಾಗಿದೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಸಚಿನ್ ತಮ್ಮ ಪೋಸ್ಟ್ನಲ್ಲಿ, ಕೆಲವು ದಿನಗಳ ಹಿಂದೆ ನನ್ನ ಆಪ್ತ ಸ್ನೇಹಿತನಿಗೆ ಗಂಭೀರ ಅಪಘಾತ ಸಂಭವಿಸಿತು. ದೇವರ ದಯೆಯಿಂದ ಈಗ ಅವನು ಆರೋಗ್ಯವಾಗಿದ್ದಾನೆ. ಆದರೆ, ಸಂಚಾರಿ ಪೊಲೀಸ್ ಸಿಬ್ಬಂದಿಯ ಸಮಯೋಚಿತ ಸಹಾಯದಿಂದಾಗಿ ಇದು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟ್ರಾಫಿಕ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ ಭಾರತದ ಮಾಜಿ ಬ್ಯಾಟ್ಸ್ಮನ್, ಸಾಮಾನ್ಯ ಜನರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

ಸಚಿನ್ ಮುಂದುವರೆದು, ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದು, ತೀವ್ರವಾಗಿ ಗಾಯಗೊಂಡಿದ್ದ ನನ್ನ ಗೆಳೆಯನಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಗೆಳೆಯನ ಜೀವ ಉಳಿಸಿದ ಪೊಲೀಸರನ್ನು ಭೇಟಿಯಾದ ತೆಂಡೂಲ್ಕರ್, ಅವರ ಸಹಾಯಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು. ಜೊತೆಗೆ ನಾನು ಅವರನ್ನು ಭೇಟಿಯಾಗಿದ್ದೇನೆ ಮತ್ತು ಅವರ ಸಹಾಯಕ್ಕಾಗಿ ಅವರಿಗೆ ಧನ್ಯವಾದ ಹೇಳಿದ್ದೇನೆ. ಅವರಂತೆ ಕರ್ತವ್ಯ ಮೀರಿ ಸಹಾಯ ಮಾಡುವವರು ನಮ್ಮ ಸುತ್ತ ತುಂಬಾ ಜನ ಇದ್ದಾರೆ. ಇಂಥವರಿಂದಲೇ ಜಗತ್ತು ಸುಂದರವಾಗಿದೆ. ಇಂತಹ ಸೇವೆ ಮಾಡುವ ಜನರಿಗೆ ಧನ್ಯವಾದ ಹೇಳಲು ಸಾರ್ವಜನಿಕರು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.