- Kannada News Photo gallery Cricket photos Sunil Gavaskar confident that the world could witness the version of Virat Kohli from two years ago
Virat Kohli: ನಾವಿನ್ನು ಎರಡು ವರ್ಷಗಳ ಹಿಂದಿನ ವಿರಾಟ್ ಕೊಹ್ಲಿಯನ್ನು ನೋಡಬಹುದು ಎಂದ ಸುನೀಲ್ ಗವಾಸ್ಕರ್
Sunil Gavaskar: ಏಕದಿನ ಮತ್ತು ಟಿ20 ನಾಯಕತ್ವದ ಹೊರೆ ಇಲ್ಲದ ಕಾರಣ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಕೊಹ್ಲಿ ಅವರನ್ನು ನಾವು ಎರಡು ವರ್ಷಗಳ ಹಿಂದಿನ ರೀತಿಯಲ್ಲಿ ನೋಡಬಹುದು, ಶತಕದ ಬೆನ್ನಲ್ಲೇ ಮತ್ತೊಂದು ಶತಕ ಸಿಡಿಸುವ ರೀತಿ ಎಂದು ಗವಾಸ್ಕರ್ ಹೇಳಿದ್ದಾರೆ.
Updated on:Dec 18, 2021 | 8:33 AM

ಕಳೆದ ಕೆಲವು ದಿನಗಳಿಂದ ಭಾರೀ ವಿವಾದಗಳಿಂದ ಸುದ್ದಿಯಾಗುತ್ತಿರುವ ವಿರಾಟ್ ಕೊಹ್ಲಿ ಸದ್ಯ ದಕ್ಷಿಣ ಆಫ್ರಿಕಾ ತಲುಪಿದ್ದು ಬಯೋಬಬಲ್ಗೆ ಪ್ರವೇಶ ಪಡೆದಿದ್ದಾರೆ. ಕೆಲವೇ ದಿನಗಳಲ್ಲಿ ಅಭ್ಯಾಸ ಕೂಡ ಆರಂಭಿಸಲಿದ್ದಾರೆ. ಏಕದಿನ ನಾಯಕತ್ವ ಕೈತಪ್ಪಿದ ಬೇಸರದ ನಡುವೆ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಿರುವಾಗ ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಸುನೀಲ್ ಗವಾಸ್ಕರ್, ಕೊಹ್ಲಿಯನ್ನು ವೈಟ್ ಬಾಲ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಿದ್ದು ಒಳ್ಳೆಯದೇ ಆಯಿತು. ಈ ಮೂಲಕ ಅವರು ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಹರಿಸಬಹುದು ಎಂದಿದ್ದಾರೆ.

ಹಲವು ಸಮಯಗಳಿಂದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಕೂಡ ಕಳೆದುಕೊಂಡಿದ್ದಾರೆ. ಡಕ್ಗೆ ಔಟ್ ಆಗುತ್ತಿರುವ ಪ್ರಸಂಗ ಕೂಡ ನಡೆದಿದೆ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಕೊಹ್ಲಿ ಬ್ಯಾಟ್ನಿಂದ ಒಂದೇ ಒಂದು ಶತಕ ಬಂದಿಲ್ಲ.

ಈಗ ಏಕದಿನ ಮತ್ತು ಟಿ20 ನಾಯಕತ್ವದ ಹೊರೆ ಇಲ್ಲದ ಕಾರಣ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಕೊಹ್ಲಿ ಅವರನ್ನು ನಾವು ಎರಡು ವರ್ಷಗಳ ಹಿಂದಿನ ರೀತಿಯಲ್ಲಿ ನೋಡಬಹುದು, ಶತಕದ ಬೆನ್ನಲ್ಲೇ ಮತ್ತೊಂದು ಶತಕ ಸಿಡಿಸುವ ರೀತಿ ಎಂದು ಗವಾಸ್ಕರ್ ಹೇಳಿದ್ದಾರೆ.

ಇನ್ನು ವೈಟ್ ಬಾಲ್ ಕ್ರಿಕೆಟ್ಗೆ ರೋಹಿತ್ ಅವರನ್ನು ಕ್ಯಾಪ್ಟನ್ ಮಾಡಿದ್ದು ಅತ್ಯುತ್ತಮ ನಿರ್ಧಾರ ಎಂದಿರುವ ಗವಾಸ್ಕರ್, ನಾಯಕನ ಜವಾಬ್ದಾರಿಯಲ್ಲಿ ರೋಹಿತ್ ಆಟ ಅದ್ಭುತವಾಗಿರುತ್ತದೆ. ಇದಕ್ಕೆ ಮುಂಬೈ ಇಂಡಿಯನ್ಸ್ ತಂಡವೇ ಸಾಕ್ಷಿ ಎಂದಿದ್ದಾರೆ.

ನೀವು ನಾಯಕನಾದಾಗ ನಿಮ್ಮ ಶಾಟ್ ಸೆಲೆಕ್ಷನ್ನಲ್ಲಿ ಬದಲಾವಣೆ ಇರುತ್ತದೆ. ಒಂದು ಜವಾಬ್ದಾರಿ ಇರುತ್ತದೆ. ಇದೇ ಕಾರಣಕ್ಕೆ ಮುಂಬೈ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ರೋಹಿತ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ರನ್ ಗಳಿಸಲಿದ್ದಾರೆ – ಸುನೀಲ್ ಗವಾಸ್ಕರ್.

ಇದೇವೇಳೆ ಭಾರತೀಯ ಕ್ರಿಕೆಟ್ನಲ್ಲಿ ಸಾಗುತ್ತಿರುವ ವಿವಾದದ ಕುರಿತು ಮಾತನಾಡಿರುವ ಇವರು, ಈ ವರ್ಷದ ಸೆಪ್ಟೆಂಬರ್ ನಲ್ಲಿ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದಾಗ ಕೊಹ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ಕೊಹ್ಲಿ ತನ್ನ ವಿದಾಯ ಪತ್ರದಲ್ಲಿ ಬರೆದ ಸಾಲಿನಿಂದ ಬಿಸಿಸಿಐನ ಉನ್ನತ ಅಧಿಕಾರಿಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು. ವಿದಾಯ ಪತ್ರದಲ್ಲಿ ವಿರಾಟ್, "ಇನ್ನು ಮುಂದೆ ನಾನು ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆ" ಎಂದು ಬರೆದುಕೊಂಡಿದ್ದರು. ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಅವರು ನಾಯಕರಾಗುತ್ತಾರೆ ಎಂಬ ಸಾಲುಗಳು ಅವರ ವಿರುದ್ಧ ಈ ಸಣ್ಣ ವಿರೋಧಿ ಭಾವನೆ ಇರಲು ಒಂದು ಕಾರಣವಾಗಿರಬಹುದು ಎಂಬುದು ಗವಾಸ್ಕರ್ ಅಭಿಪ್ರಾಯ.
Published On - 8:32 am, Sat, 18 December 21
