
ಐಪಿಎಲ್ 2026 ರ ಮಿನಿ ಹರಾಜು ಮುಂದಿನ ತಿಂಗಳು ಡಿಸೆಂಬರ್ನಲ್ಲಿ ನಡೆಯಲಿದೆ. ಹರಾಜಿಗೆ ಮುನ್ನ, ಆಟಗಾರರ ಬಿಡುಗಡೆ, ಉಳಿಸಿಕೊಳ್ಳುವಿಕೆ ಮತ್ತು ವಿನಿಮಯದ ಬಗ್ಗೆ ಊಹಾಪೋಹಗಳು ಹರಡಿವೆ. ಏತನ್ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್ಮನ್ ಸುರೇಶ್ ರೈನಾ, ಸಿಎಸ್ಕೆ ಫ್ರಾಂಚೈಸಿ ತಂಡದಲ್ಲಿ ಉಳಿಸಿಕೊಳ್ಳಬೇಕಾದ ಮತ್ತು ಬಿಡುಗಡೆ ಮಾಡಬೇಕಾದ ಪ್ರಮುಖ ಆಟಗಾರರನ್ನು ಹೆಸರಿಸಿದ್ದಾರೆ.

ವಾಸ್ತವವಾಗಿ ಮಿನಿ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಸಂಜು ಸ್ಯಾಮ್ಸನ್ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಇರಾದೆಯೊಂದಿಗೆ ಸಿಎಸ್ಕೆ ಫ್ರಾಂಚೈಸಿ, ತಂಡದಲ್ಲಿರುವ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಬಿಟ್ಟುಕೊಡಲು ಮುಂದಾಗಿದೆ. ಆದರೆ ಈ ಒಪ್ಪಂದದ ಬಗ್ಗೆ ಅಪಸ್ವರ ಎತ್ತಿರುವ ರೈನಾ, ಜಡೇಜಾ ಸಿಎಸ್ಕೆ ತಂಡದಲ್ಲೇ ಇರಬೇಕು ಎಂದಿದ್ದಾರೆ.

ರವೀಂದ್ರ ಜಡೇಜಾ ಅವರೊಂದಿಗೆ ಅಫ್ಘಾನಿಸ್ತಾದ ಯುವ ಸ್ಪಿನ್ನರ್ ನೂರ್ ಅಹ್ಮದ್ ಅವರನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ. ಇವರ ಜೊತೆಗೆ ತಂಡದ ಹಾಲಿ ನಾಯಕ ಎಂಎಸ್ ಧೋನಿ ಮುಂಬರುವ ಸೀಸನ್ನಲ್ಲಿ ಆಡುವ ಕಾರಣದಿಂದಾಗಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು. ಹಾಗೆಯೇ ತಂಡದ ಮಾಜಿ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ರೈನಾ ಹೇಳಿದ್ದಾರೆ.

ಯಾರನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟಪಡಿಸಿರುವ ರೈನಾ, ಯಾರನ್ನು ತಂಡದಿಂದ ಹೊರಗಿಡಬೇಕು ಎಂಬುದನ್ನು ವಿವರಿಸಿದ್ದಾರೆ. ರೈನಾ ಪ್ರಕಾರ, ನ್ಯೂಜಿಲೆಂಡ್ ತಂಡದ ಆರಂಭಿಕ ಡೆವೊನ್ ಕಾನ್ವೇ ಅವರನ್ನು ತಂಡದಿಂದ ಬಿಡುಗಡೆ ಮಾಡಬೇಕು. ಏಕೆಂದರೆ ಸಿಎಸ್ಕೆಗೆ ಸ್ಥಳೀಯ ಆರಂಭಿಕ ಆಟಗಾರನ ಅಗತ್ಯವಿದೆ. ಹೀಗಾಗಿ ಕಾನ್ವೇ ಬದಲಿಗೆ ಮಿನಿ ಹರಾಜಿನಲ್ಲಿ ಸ್ಥಳೀಯ ಆಟಗಾರನನ್ನು ಸಿಎಸ್ಕೆ ಖರೀದಿಸಬೇಕು ಎಂದಿದ್ದಾರೆ.

ಕಾನ್ವೇ ಜೊತೆಗೆ ತಂಡದಲ್ಲಿ ಸಾಕಷ್ಟು ಅವಕಾಶ ಪಡೆದರೂ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಟೀಂ ಇಂಡಿಯಾದ ಆಲ್ರೌಂಡರ್ ವಿಜಯ್ ಶಂಕರ್ ಅವರನ್ನೂ ಬಿಡುಗಡೆ ಮಾಡಬೇಕು. ಇವರ ಜೊತೆಗೆ ದೀಪಕ್ ಹೂಡಾ ಅವರನ್ನು ಸಹ ಬಿಡುಗಡೆ ಮಾಡಬೇಕು. ಇವರನ್ನೆಲ್ಲ ತಂಡದಿಂದ ಹೊರಗಿಟ್ಟು ಮಿನಿ ಹರಾಜಿನಲ್ಲಿ ತಂಡಕ್ಕೆ ಬೇಕಾದ ಸಂಯೋಜನೆಯನ್ನು ಒದಗಿಸಬಲ್ಲ ಅನೇಕ ಆಟಗಾರರನ್ನು ಖರೀದಿಸಬೇಕು ಎಂದು ರೈನಾ ಹೇಳಿದ್ದಾರೆ.