- Kannada News Photo gallery Cricket photos Sourav Ganguly reveals Reason Behind Appointing Rohit Sharma as Captain
Sourav Ganguly: ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸಿದ್ಯಾಕೆ? ಕಾರಣ ಬಿಚ್ಚಿಟ್ಟ ಗಂಗೂಲಿ
Sourav Ganguly: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ನಾಯಕ ರೋಹಿತ್ ಶರ್ಮಾ ಬಗ್ಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಅದರಂತೆ ಕೊಹ್ಲಿ ನಂತರ ರೋಹಿತ್ಗೆ ನಾಯಕತ್ವ ಪಟ್ಟ ಏಕೆ ಕಟ್ಟಲಾಯಿತು ಎಂಬುದನ್ನು ಗಂಗೂಲಿ ಬಹಿರಂಗಪಡಿಸಿದ್ದಾರೆ.
Updated on: Mar 01, 2024 | 3:10 PM

ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ. ಅಲ್ಲದೆ ತವರಿನಲ್ಲಿ ತನ್ನ ಅಜೇಯ ಗೆಲುವಿನ ಓಟವನ್ನು ಮುಂದುವರೆಸಿರುವ ಭಾರತಕ್ಕೆ ಇದು 17ನೇ ಟೆಸ್ಟ್ ಸರಣಿ ಗೆಲುವಾಗಿದೆ. ಈ ಮೂಲಕ ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಸರಣಿಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಟೀಂ ಇಂಡಿಯಾಗೆ 2ನೇ ಸ್ಥಾನ ಲಭಿಸಿದೆ.

ಈ ನಡುವೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ನಾಯಕ ರೋಹಿತ್ ಶರ್ಮಾ ಬಗ್ಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಅದರಂತೆ ಕೊಹ್ಲಿ ನಂತರ ರೋಹಿತ್ಗೆ ನಾಯಕತ್ವ ಪಟ್ಟ ಏಕೆ ಕಟ್ಟಲಾಯಿತು ಎಂಬುದನ್ನು ಗಂಗೂಲಿ ಬಹಿರಂಗಪಡಿಸಿದ್ದಾರೆ.

ವಾಸ್ತವವಾಗಿ 2021 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾಗೆ ನಾಯಕತ್ವದ ಪಟ್ಟಕಟ್ಟಲು ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತೀರ್ಮಾನ ಮಾಡಿದ್ದರು. ಆದರೆ ಆರಂಭದಲ್ಲಿ ಮಂಡಳಿ ತೀರ್ಮಾನ ರೋಹಿತ್ಗೆ ಇಷ್ಟವಿರಲಿಲ್ಲ. ಅದಾಗ್ಯೂ ಗಂಗೂಲಿ, ರೋಹಿತ್ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದರು. ಆ ನಂತರ ರೋಹಿತ್ ಟೀಂ ಇಂಡಿಯಾದ ನಾಯಕತ್ವವಹಿಸಿಕೊಂಡಿದ್ದರು.

ಈ ವಿಚಾರವನ್ನು ಸ್ವತಃ ಗಂಗೂಲಿ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬಳಿಕ ರೋಹಿತ್ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿದ್ದು ಏಕೆ ಎಂಬುದನ್ನು ವಿವರಿಸಿದ ಗಂಗೂಲಿ, ರೋಹಿತ್ ಶರ್ಮಾ ಅವರಲ್ಲಿರುವ ಪ್ರತಿಭೆಯನ್ನು ನೋಡಿ ನಾನು ಅವರನ್ನು ನಾಯಕನನ್ನಾಗಿ ಮಾಡಿದ್ದೇನೆ. ಅವರು ಪ್ರದರ್ಶನ ನೀಡುತ್ತಿರುವ ರೀತಿ ನನಗೇನು ಆಶ್ಚರ್ಯ ತಂದಿಲ್ಲ.

ವಿಶ್ವಕಪ್ನಲ್ಲಿ ಅವರು ತಂಡವನ್ನು ಮುನ್ನಡೆಸಿದ ರೀತಿ ಅದ್ಭುತವಾಗಿತ್ತು. ಅವರ ನಾಯಕತ್ವದಲ್ಲಿ ತಂಡ ಫೈನಲ್ಗೇರಿತ್ತು. ಫೈನಲ್ನಲ್ಲಿ ಸೋತರೂ ವಿಶ್ವಕಪ್ನಲ್ಲಿ ಭಾರತ ಅತ್ಯುತ್ತಮ ತಂಡ ಎಂದು ನಾನು ಭಾವಿಸುತ್ತೇನೆ. ರೋಹಿತ್ ನಿಜಕ್ಕೂ ಶ್ರೇಷ್ಠ ನಾಯಕ. ಅಲ್ಲದೆ ನಾಯಕನಾಗಿ ಅವರು ಹಲವು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ ಎಂದಿದ್ದಾರೆ.

ಮುಂದುವರೆದು, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರ ಒಪ್ಪಂದದಿಂದ ಹೊರಗಿಡುವ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿರುವ ಗಂಗೂಲಿ, ಬಿಸಿಸಿಐ ಕೇಂದ್ರ ಒಪ್ಪಂದಕ್ಕೆ ಒಳಪಡುವ ಪ್ರತಿಯೊಬ್ಬ ಆಟಗಾರರು ಪ್ರಥಮ ದರ್ಜೆ ಕ್ರಿಕೆಟ್ ಆಡಬೇಕು. ಇದು ಭಾರತದಲ್ಲಿ ಕ್ರಿಕೆಟ್ನ ಮೂಲ ರಚನೆಯಾಗಿದೆ. ಇಶಾನ್ ರಣಜಿ ಆಡದಿರುವುದು ನನಗೆ ಅಚ್ಚರಿ ತಂದಿದೆ ಎಂದು ಕಿಶನ್ ಬಗ್ಗೆ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಯ್ಯರ್ ಬಗ್ಗೆಯೂ ಇದೇ ಮಾತನಾಡಿದ ಗಂಗೂಲಿ, ‘ಶ್ರೇಯಸ್ ಅಯ್ಯರ್ ರಣಜಿ ಟ್ರೋಫಿಯನ್ನು ಆಡುತ್ತಿಲ್ಲ ಎಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ಇದು ಪ್ರಮುಖ ಪಂದ್ಯಾವಳಿಯಾಗಿದೆ ಮತ್ತು ನೀವು ಅದರಲ್ಲಿ ಆಡಬೇಕು. ಇದು ಬಿಸಿಸಿಐ ನಿರ್ಧಾರವಾಗಿದ್ದು, ಅವರು ತಮಗೆ ಸರಿ ಎನಿಸಿದ್ದನ್ನು ಮಾಡಿದ್ದಾರೆ. ಒಪ್ಪಂದಕ್ಕೆ ಒಳಪಟ್ಟ ಪ್ರತಿಯೊಬ್ಬ ಆಟಗಾರನೂ ಪ್ರಥಮ ದರ್ಜೆ ಕ್ರಿಕೆಟ್ ಅನ್ನು ಆಡಬೇಕು ಎಂದಿದ್ದಾರೆ.



















