ತಿರುವನಂತಪುರಂನ ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಸೂರ್ಯ ಹುಡುಗರು 235 ರನ್ ಕಲೆಹಾಕಿದರೆ, ಆಸೀಸ್ 191 ರನ್ ಗಳಿಸಲಷ್ಟೇ ಶಕ್ತವಾಯಿತು.
44 ರನ್ಗಳ ಅಮೋಘ ಜಯದೊಂದಿಗೆ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಭಾರತ ಪರ ಜೈಸ್ವಾಲ್, ರುತುರಾಜ್, ಕಿಶನ್ ಅರ್ಧಶತಕ ಸಿಡಿಸಿದರೆ, ರಿಂಕು ಸಿಂಗ್ ಕೇವಲ 9 ಎಸೆತಗಳಲ್ಲಿ ಅಜೇಯ 31 ರನ್ ಚಚ್ಚಿ ಮತ್ತೊಮ್ಮೆ ತಾನೋಬ್ಬ ಅತ್ಯುತ್ತಮ ಫಿನಿಶರ್ ಎಂಬುದನ್ನು ಸಾಭೀತು ಪಡಿಸಿದರು.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ. ಜೊತೆಗೆ ರಿಂಕು ಸಿಂಗ್ ಬಗ್ಗೆ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ನಮ್ಮ ಹುಡುಗರು ನನ್ನ ಮೇಲೆ ಹೆಚ್ಚು ಒತ್ತಡ ಹಾಕುತ್ತಿಲ್ಲ. ಅವರೇ ಜವಾಬ್ದಾರಿಯನ್ನು ತೆಗೆದುಕೊಂಡು ಉತ್ತಮ ಆಟವಾಡುತ್ತಿದ್ದಾರೆ. ನಾನು ನಮ್ಮ ಆಟಗಾರರಿಗೆ ಆರಂಭದಲ್ಲೇ, ''ಮೊದಲು ಬ್ಯಾಟ್ ಮಾಡಲು ಸಿದ್ಧರಾಗಿರಿ... ಸಾಕಷ್ಟು ಇಬ್ಬನಿ ಇದೆ, ನಾವು ಎದುರಾಳಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಬೇಕು,'' ಎಂದು ಹೇಳಿದ್ದೆ ಎಂದು ಸೂರ್ಯಕುಮಾರ್ ಹೇಳಿದರು.
ರಿಂಕು ಆಟದ ಬಗ್ಗೆ ಮಾತನಾಡಿದ ಸೂರ್ಯ, ಕಳೆದ ಪಂದ್ಯದಲ್ಲಿ ರಿಂಕು ಬ್ಯಾಟಿಂಗ್ಗೆ ಬಂದಿರುವುದನ್ನು ನೋಡಿದಾಗ ಅವರು ತೋರಿದ ಸಂಯಮ ಅದ್ಭುತವಾಗಿತ್ತು. ಇದು ನನಗೆ ಯಾರನ್ನೋ ನೆನಪು ಮಾಡಿತು ಮತ್ತು ಅದು ಯಾರು ಎಂಬುದು ಎಲ್ಲರಿಗೂ ಉತ್ತರ ತಿಳಿದಿದೆ ಎಂದು ನಗುತ್ತಾ ಹೇಳಿದ್ದಾರೆ.
ಇದೇವೇಳೆ ಮಾತನಾಡಿದ ರಿಂಕು ಸಿಂಗ್, ನಾನು ಸ್ವಲ್ಪ ಸಮಯದಿಂದ 5-6ನೇ ಕ್ರಮಾಂಕದಲ್ಲಿ ಆಡುತ್ತಿದ್ದೇನೆ, ಆಗ ನಾನು ಶಾಂತವಾಗಿ ಮತ್ತು ಏಕಾಗ್ರತೆಯಿಂದ ಇರಲು ಪ್ರಯತ್ನಿಸುತ್ತೇನೆ. ನಾನು ಚೆಂಡನ್ನು ಸೂಕ್ಷ್ಮವಾಗಿ ನೋಡುತ್ತೇನೆ ಮತ್ತು ಅದಕ್ಕೆ ತಕ್ಕಂತೆ ಆಡುತ್ತೇನೆ ಎಂದು ತಮ್ಮ ಗೇಮ್ ಪ್ಲಾನ್ ಅನ್ನು ವಿವರಿಸಿದರು.
ಸೂರ್ಯಕುಮಾರ್ ನಿಜವಾಗಿಯೂ ಒಳ್ಳೆಯವರು, ನಾವು ಅವರ ನಾಯಕತ್ವದಲ್ಲಿ ಆನಂದಿಸುತ್ತಿದ್ದೇವೆ. ಕೊನೆಯ 5 ಓವರ್ಗಳಲ್ಲಿ ಬ್ಯಾಟಿಂಗ್ ಮಾಡುವುದು ನನ್ನ ಕೆಲಸ, ಆದ್ದರಿಂದ ನಾನು ಅವರ ಫಿನಿಶಿಂಗ್ ಕೌಶಲ್ಯದ ಮೇಲೆ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ನೆಟ್ ಸೆಷನ್ಗಳನ್ನು ಅದೇ ಮನಸ್ಥಿತಿಯೊಂದಿಗೆ ಅಭ್ಯಾಸ ಮಾಡುತ್ತೇನೆ ಎಂಬುದು ರಿಂಕು ಮಾತು.