ಭಾನುವಾರ ನ್ಯೂಯಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 120 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ ಏಳು ವಿಕೆಟ್ಗೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯದುದ್ದಕ್ಕೂ ಗೆಲುವಿನ ಫೆವರೇಟ್ ಎನಿಸಿಕೊಂಡಿದ್ದ ಪಾಕ್ ತಂಡ ಕೊನೆಯಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಸೋಲನುಭವಿಸಿತು.
ಪಾಕ್ ತಂಡದ ಸೋಲಿಗೆ ತಂಡದ ಬ್ಯಾಟಿಂಗ್ ವಿಭಾಗ ಪ್ರಮುಖ ಕಾರಣ ಎಂಬುದು ಎಲ್ಲರ ಅಭಿಪ್ರಾಯ. ಅದಕ್ಕೆ ಪೂರಕವೆಂಬಂತೆ ಇಡೀ ಪಾಕ್ ಬ್ಯಾಟರ್ಸ್ ಸುಮಾರು 10 ಓವರ್ಗಳಲ್ಲಿ ಅಂದರೆ 59 ಎಸೆತಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಹೀಗೆ ಪಾಕಿಸ್ತಾನ ತಂಡದ ಸೋಲಿಗೆ ನಾನಾ ಕಾರಣಗಳನ್ನು ನೀಡಲಾಗುತ್ತಿದೆ. ಇದೀಗ ತಂಡದ ಸೋಲಿಗೆ ಕಾರಣ ಏನು ಎಂಬುದುಕ್ಕೆ ಪಾಕ್ ಮಾಜಿ ನಾಯಕರು ತಮ್ಮದೇಯಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಾಜಿ ನಾಯಕ ಸಲೀಂ ಮಲಿಕ್ ನೀಡಿರುವ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತಂಡದ ಸೋಲಿಗೆ ಬೇಸರ ವ್ಯಕ್ತಪಡಿಸಿರುವ ಸಲೀಂ ಮಲಿಕ್, ಭಾರತ ವಿರುದ್ಧದ ಈ ಪಂದ್ಯದಲ್ಲಿ ತಂಡದ ಆಲ್ರೌಂಡರ್ ಇಮಾದ್ ವಾಸಿಂ (23 ಎಸೆತಗಳಲ್ಲಿ 15 ರನ್) ಉದ್ದೇಶಪೂರ್ವಕವಾಗಿ ಚೆಂಡುಗಳನ್ನು ವ್ಯರ್ಥ ಮಾಡಿದ್ದಾರೆ. ರನ್ ಗಳಿಸುವ ಬದಲು ಅವರು ಚೆಂಡುಗಳನ್ನು ವ್ಯರ್ಥ ಮಾಡುತ್ತಾ ಸುಲಭವಾಗಿ ಗುರಿ ಬೆನ್ನಟ್ಟುವುದನ್ನು ಕಷ್ಟಕರವಾಗಿಸಿದರು ಎಂದು ಆರೋಪಿಸಿದ್ದಾರೆ.
ಮತ್ತೊಬ್ಬ ಮಾಜಿ ನಾಯಕ ಶಾಹಿದ್ ಅಫ್ರಿದಿ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಆಟಗಾರರು ನಾಯಕ ಬಾಬರ್ ಆಝಂ ವಿರುದ್ಧ ದೂರುಗಳನ್ನು ಹೊಂದಿದ್ದಾರೆ. ಒಬ್ಬ ನಾಯಕ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ಒಬ್ಬ ನಾಯಕ ತಂಡವನ್ನು ಹಾಳುಮಾಡಬಹುದು ಅಥವಾ ತಂಡವನ್ನು ಉತ್ತಮಗೊಳಿಸಬಹುದು. ವಿಶ್ವಕಪ್ ಮುಗಿಯಲಿ, ನಂತರ ನಾನು ಮುಕ್ತವಾಗಿ ಮಾತನಾಡುತ್ತೇನೆ ಎಂದಿದ್ದಾರೆ.
ಶೋಯೇಬ್ ಅಖ್ತರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ನಿಮಗೆ ನಿರಾಶೆ ಮತ್ತು ನೋವಾದಾಗ ಪೋಸ್ಟ್ ಮಾಡುವುದು ಸಹಜ. ಇಡೀ ದೇಶಕ್ಕೆ ಈ ಸೋಲಿನಿಂದ ನಿರಾಶೆಯಾಗಿದೆ. ನೈತಿಕತೆ ಕಡಿಮೆಯಾಗಿದೆ. ಹೇಗಾದರೂ ಮಾಡಿ ಗೆಲ್ಲುವ ಇಂಗಿತವನ್ನು ತೋರಿಸಬೇಕು. ಪಾಕಿಸ್ತಾನಕ್ಕೆ ಸೂಪರ್ ಎಂಟಕ್ಕೆ ಬರದ ಅರ್ಹತೆ ಇದೆಯೇ? ಆ ದೇವರೇ ಬಲ್ಲ. ಎಂದಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಪಾಕಿಸ್ತಾನ ತಂಡದಲ್ಲಿ ಆತ್ಮವಿಶ್ವಾಸದ ಕೊರತೆ ಇದೆ ಎಂದು ಹೇಳಿದ್ದಾರೆ. ಪಾಕ್ ತಂಡ ಕೆಲವೊಮ್ಮೆ ಕೆಟ್ಟ ಪಿಚ್ನಲ್ಲಿ ಉತ್ತಮವಾಗಿ ಆಡುವುದನ್ನು ನಾವು ನೋಡಿದ್ದೇವೆ. ಆ ಪಂದ್ಯಗಳಲ್ಲಿ ಇದೂ ಒಂದಾಗಿತ್ತು. ಇದು ತುಂಬಾ ಸರಳವಾದ ವಿಷಯ, ಪಾಕಿಸ್ತಾನ ಸೋಲುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.