
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ತಿರುವನಂತಪುರದ ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವು ಸಂಜು ಸ್ಯಾಮ್ಸನ್ಗೆ ವಿಶೇಷವಾಗಿತ್ತು, ಏಕೆಂದರೆ ಇದು ಅವರ ತವರು ನೆಲದಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಹೀಗಾಗಿ ಕೇರಳ ಅಭಿಮಾನಿಗಳು ಕೂಡ ಲೋಕಲ್ ಹುಡುಗನ ಆಟವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದರು. ಆದರೆ ಸಂಜು ಆ ಸಂದರ್ಭವನ್ನು ಸ್ಮರಣೀಯವಾಗಿಸಲು ಸಾಧ್ಯವಾಗಲಿಲ್ಲ.

ವಾಸ್ತವವಾಗಿ ಈ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಆರಂಭಿಕ ಮತ್ತು ವಿಕೆಟ್ ಕೀಪರ್ ಆಗಿ ಆಡಿದ ಸಂಜು ಐದು ಇನ್ನಿಂಗ್ಸ್ಗಳಲ್ಲಿ ಕೇವಲ 46 ರನ್ ಗಳಿಸಿದರು. ಈ ಸರಣಿಯಲ್ಲಿ ಅವರು ಕ್ರಮವಾಗಿ 10, 6, 0, 24, ಮತ್ತು 6 ರನ್ ಗಳಿಸಿದರು. ಸಂಜು ಅವರ ಈ ಪ್ರದರ್ಶನವು 2026 ರ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಟೀಂ ಇಂಡಿಯಾಕ್ಕೆ ಪ್ರಮುಖ ಕಳವಳಕ್ಕೆ ಕಾರಣವಾಗಿದೆ.

ತವರು ನೆಲದಲ್ಲಿ ಸಂಜು 10 ಎಸೆತಗಳನ್ನು ಎದುರಿಸಿ ಕೇವಲ ಆರು ರನ್ಗಳಿಗೆ ಔಟಾದರು. ಇದರ ಪರಿಣಾಮವಾಗಿ ತವರಿನಲ್ಲೂ ಫಾರ್ಮ್ ಕಂಡುಕೊಳ್ಳದ ಸಂಜುಗೆ ಆಡಳಿತ ಮಂಡಳಿ ಬಿಗ್ ಶಾಕ್ ನೀಡಿದೆ. ಈ ಸರಣಿಯ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಸಂಜು ವಿಕೆಟ್ ಕೀಪಿಂಗ್ ಮಾಡಿದರೆ, ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಸಂಜು ಬದಲಿಗೆ ಕಿಶನ್ ವಿಕೆಟ್ ಕೀಪಿಂಗ್ ಮಾಡಿದರು.

ಸರಣಿಯಲ್ಲಿ ಇಶಾನ್ ಕಿಶನ್ ಅವರ ಪ್ರದರ್ಶನ ಅದ್ಭುತವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿರುವ ಕಿಶನ್ ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 10 ಸಿಕ್ಸರ್ಗಳು ಸೇರಿದಂತೆ 103 ರನ್ ಗಳಿಸಿದರು. ಹೀಗಾಗಿ ಅದ್ಭುತ ಫಾರ್ಮ್ನಲ್ಲಿರುವ ಕಿಶನ್ಗೆ ಬರುವ ವಿಶ್ವಕಪ್ನಲ್ಲಿ ವಿಕೆಟ್ಕೀಪರ್ ಬ್ಯಾಟರ್ ಆಗಿ ಆಡುವ ಅವಕಾಶ ಸಿಗುವ ಮುನ್ಸೂಚನೆ ಈ ಪಂದ್ಯದಲ್ಲೇ ಸಿಕ್ಕಿದೆ.

ಇದಕ್ಕೆ ಪೂರಕವೆಂಬಂತೆ 2026 ರ ಟಿ20 ವಿಶ್ವಕಪ್ಗೆ ಇಶಾನ್ ಕಿಶನ್ ಅವರನ್ನು ಬ್ಯಾಕಪ್ ವಿಕೆಟ್ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಮೊದಲ ವಿಕೆಟ್ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಂಜು ಅವರ ಪ್ರಸ್ತುತ ಕಳಪೆ ಫಾರ್ಮ್ನಿಂದಾಗಿ ಕಿಶನ್ಗೆ ಅವಕಾಶ ಸಿಗುವುದು ಇಂದಿನ ಪಂದ್ಯದಲ್ಲೇ ಖಚಿತವಾಗಿದೆ.