Ravindra Jadeja: ಜಡೇಜಾಗೆ ಶಸ್ತ್ರಚಿಕಿತ್ಸೆ: ಟಿ20 ವಿಶ್ವಕಪ್ಗೆ ಡೌಟ್..?
Ravindra Jadeja: ಏಷ್ಯಾಕಪ್ನಲ್ಲಿನ ಹಾಂಗ್ ಕಾಂಗ್ ವಿರುದ್ದದ ಪಂದ್ಯದ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದರು. ಹೀಗಾಗಿ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಗಾಯವು ಗಂಭೀರವಾಗಿದ್ದ ಕಾರಣ ವೈದ್ಯರ ಸೂಚನೆಯಂತೆ ಇದೀಗ ಸರ್ಜರಿಗೆ ಒಳಗಾಗಿದ್ದಾರೆ.
Updated on: Sep 06, 2022 | 11:27 PM

ಏಷ್ಯಾಕಪ್ ಆರಂಭಕ್ಕೂ ಮುನ್ನ ಶುರುವಾದ ಟೀಮ್ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಮುಂದುವರೆದಿದೆ. ಈ ಹಿಂದೆ ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಏಷ್ಯಾಕಪ್ನಿಂದ ಹೊರಗುಳಿದಿದ್ದರು. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ ರವೀಂದ್ರ ಜಡೇಜಾ. ಹಾಂಗ್ ಕಾಂಗ್ ವಿರುದ್ದದ ಪಂದ್ಯದ ವೇಳೆ ಗಾಯಗೊಂಡಿದ್ದ ಜಡೇಜಾ ಏಷ್ಯಾಕಪ್ನಿಂದ ಹೊರಗುಳಿದಿದ್ದರು.

ಅಲ್ಲದೆ ಯುಎಇಯಿಂದ ಭಾರತಕ್ಕೆ ಮರಳಿದ ನಂತರ ಜಡೇಜಾ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ ತಮ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರವೀಂದ್ರ ಜಡೇಜಾ ಬರೆದುಕೊಂಡಿದ್ದಾರೆ.

ಸದ್ಯ ವಿಶ್ರಾಂತಿಯಲ್ಲಿರುವ ಜಡೇಜಾ ಶೀಘ್ರದಲ್ಲೇ ಕಂಬ್ಯಾಕ್ಗಾಗಿ ಸಿದ್ಧತೆಗಳನ್ನು ಆರಂಭಿಸುವುದಾಗಿ ಹೇಳಿದ್ದಾರೆ. ನಾನು ಶೀಘ್ರದಲ್ಲೇ ನನ್ನ ಪುನರ್ಭ್ಯಾಸವನ್ನು ಪ್ರಾರಂಭಿಸುತ್ತೇನೆ ಮತ್ತು ಸಾಧ್ಯವಾದಷ್ಟು ಬೇಗ ಕ್ರಿಕೆಟ್ಗೆ ಮರಳುತ್ತೇನೆ. ಪ್ರಾರ್ಥನೆಗಾಗಿ ಎಲ್ಲರಿಗೂ ಧನ್ಯವಾದಗಳು." ಎಂದು ಜಡೇಜಾ ತಿಳಿಸಿದ್ದಾರೆ.

ಈ ಬಾರಿಯ ಏಷ್ಯಾಕಪ್ನ ಮೊದಲೆರಡು ಪಂದ್ಯಗಳಲ್ಲಿ ಜಡೇಜಾ ಕಾಣಿಸಿಕೊಂಡಿದ್ದರು. ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ 35 ರನ್ಗಳ ಕಾಣಿಕೆ ನೀಡುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಹಾಂಗ್ ಕಾಂಗ್ ವಿರುದ್ದ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆದ ಜಡ್ಡು, ಆ ಬಳಿಕ ಗಾಯಗೊಂಡಿದ್ದರು.

ಇದೀಗ ವಿಶ್ರಾಂತಿಯಲ್ಲಿರುವ ಜಡೇಜಾ ಮುಂಬರುವ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಇದೇ ತಿಂಗಳು ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ಜಡೇಜಾ ಅವರ ಗಾಯದ ಚೇತರಿಕೆ ಬಗ್ಗೆ ಅಪ್ಡೇಟ್ ಪಡೆಯಲಿದ್ದು, ಗಾಯ ವಾಸಿಯಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿದ್ದರೆ ತಂಡದಿಂದ ಕೈ ಬಿಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

TV9 Kannada
Read More



