
ಜೂನ್ 14 ರಂದು ಬುಧವಾರ ಕೊಯಮತ್ತೂರಿನಲ್ಲಿ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ದಿಂಡಿಗಲ್ ಡ್ರಾಗನ್ಸ್ ಮತ್ತು ತಿರುಚ್ಚಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ, ರವಿಚಂದ್ರನ್ ಅಶ್ವಿನ್ ನಾಯಕತ್ವದ ದಿಂಡಿಗಲ್ ತಂಡ ತಿರುಚಿ ತಂಡವನ್ನು ಇನ್ನು 31 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳಿಂದ ಮಣಿಸಿ ಟೂರ್ನಿಯಲ್ಲಿ ಮೊದಲು ಗೆಲುವು ದಾಖಲಿಸಿದೆ.

ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ದಿಂಡಿಗಲ್, ತಿರುಚಿ ತಂಡವನ್ನು ಕೇವಲ 120 ರನ್ಗಳ ಸಾಧಾರಣ ಸ್ಕೋರ್ಗೆ ನಿರ್ಬಂಧಿಸಿತು. ಇದರಲ್ಲಿ ಅಶ್ವಿನ್ ಕೂಡ ಪ್ರಮುಖ ಪಾತ್ರ ವಹಿಸಿದರು. ತಿರುಚಿ ತಂಡದ ಪರ ಆರಂಭಿಕ ಶ್ರೀಧರ್ ರಾಜು 41 ಎಸೆತಗಳಲ್ಲಿ 48 ರನ್ ಸಿಡಿಸಿದರು.

ದಿಂಡಿಗಲ್ ಪರ ಬೌಲಿಂಗ್ನಲ್ಲಿ ಮಿಂಚಿದ ವರುಣ್ ಚಕ್ರವರ್ತಿ ತಮ್ಮ ಕೋಟಾದ 4 ಓವರ್ ಬೌಲ್ ಮಾಡಿ 21 ರನ್ ನೀಡಿ 3 ವಿಕೆಟ್ ಪಡೆದರು. ಹಾಗೆಯೇ ನಾಯಕ ಅಶ್ವಿನ್, ಸರವಣ ಕುಮಾರ, ಸುಬೋತ್ ಭಾಟಿ ತಲಾ 2 ವಿಕೆಟ್ ಪಡೆದರು.

ತಿರುಚಿ ನೀಡಿದ 120 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ದಿಂಡಿಗಲ್ ಪರ ಆರಂಭಿಕ ಶಿವಂ ಸಿಂಗ್ 30 ಎಸೆತಗಳಲ್ಲಿ 46 ರನ್ ಸಿಡಿಸಿ ಮಿಂಚಿದರು. ಆದರೆ ಈ ಪಂದ್ಯದಲ್ಲಿ ದಿಂಡಿಗಲ್ ತಂಡದ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿದ್ದು, ಒಂದೇ ಎಸೆತಕ್ಕೆ ಎರಡೆರಡು ಡಿಆರ್ಆಸ್ ಬಳಸಿದ್ದು.

ಅಷ್ಟಕ್ಕೂ ನಡೆದಿದ್ದೇನೆಂದರೆ, ತಿರುಚ್ಚಿಯ ಇನಿಂಗ್ಸ್ನ 13ನೇ ಓವರ್ ಅನ್ನು ಅಶ್ವಿನ್ ಬೌಲಿಂಗ್ ಮಾಡಿದರು. ಈ ಓವರ್ನ ಕೊನೆಯ ಎಸೆತವನ್ನು ತಿರುಚ್ಚಿ ಬ್ಯಾಟ್ಸ್ಮನ್ ರಾಜ್ಕುಮಾರ್ ಬಿಗ್ ಶಾಟ್ ಆಡಲು ಯತ್ನಿಸಿ ವಿಫಲರಾದರು. ಆದರೆ ಅವರ ವಿರುದ್ಧ ಕೀಪರ್ ಕ್ಯಾಚ್ಗಾಗಿ ಅಶ್ವಿನ್ ಮನವಿ ಮಾಡಿದರು. ಅಂಪೈರ್ ಕೂಡ ಔಟೆಂದು ತೀರ್ಪು ನೀಡಿದರು.

ಅಂಪೈರ್ ತೀರ್ಪಿನ ವಿರುದ್ಧ ಬ್ಯಾಟ್ಸ್ಮನ್ ರಾಜ್ಕುಮಾರ್ ಡಿಆರ್ಎಸ್ ತೆಗೆದುಕೊಂಡರು. ಚೆಂಡು ಬ್ಯಾಟ್ಗೆ ತಾಗದಿರುವುದು ರೀಪ್ಲೇಗಳಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಹೀಗಾಗಿ ಮೂರನೇ ಅಂಪೈರ್ ನಿರ್ಧಾರ ಬದಲಿಸಿ ನಾಟೌಟ್ ನೀಡಿದರು. ಆನ್ ಫೀಲ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಿದ ತಕ್ಷಣ, ಅಶ್ವಿನ್ ಮತ್ತೊಮ್ಮೆ ಡಿಆರ್ಎಸ್ ತೆಗೆದುಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಬಳಿಕ ಫಿಲ್ಡ್ ಅಂಪೈರ್ ಮತ್ತೆ ಮೂರನೇ ಅಂಪೈರ್ಗೆ ಮನವಿ ಸಲ್ಲಿಸಿದರು. ಮತ್ತೊಮ್ಮೆ ಮೂರನೇ ಅಂಪೈರ್ ರೀಪ್ಲೆ ನೋಡಿ, ಮತ್ತೊಮ್ಮೆ ತಮ್ಮ ನಿರ್ಧಾರವನ್ನು ಎತ್ತಿಹಿಡಿದು ನಾಟೌಟ್ ನೀಡಿದರು. ಒಟ್ಟಿನಲ್ಲಿ ಅಶ್ವಿನ್ ಮತ್ತವರ ತಂಡಕ್ಕೆ ಯಶಸ್ಸು ಸಿಗಲಿಲ್ಲ.

ತಮಾಷೆಯೆಂದರೆ ರಾಜ್ಕುಮಾರ್, ಅಶ್ವಿನ್ ಎಸೆದ 20 ನೇ ಓವರ್ನಲ್ಲಿ ಸತತ ಮೂರು ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ಬಾರಿಸಿದರು. ಇದರ ಹೊರತಾಗಿಯೂ ತಿರುಚಿ ತಂಡ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಅಶ್ವಿನ್ ತಮ್ಮ 4 ಓವರ್ಗಳಲ್ಲಿ ಕೇವಲ 26 ರನ್ ನೀಡಿ 2 ವಿಕೆಟ್ ಪಡೆದರು.