
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡುತ್ತಿರುವ ಟೀಂ ಇಂಡಿಯಾ ಸರಣಿಯ ಎರಡನೇ ಪಂದ್ಯದಲ್ಲಿ ಏಕಪಕ್ಷೀಯ ಸೋಲು ಅನುಭವಿಸಿತು. ಹೀಗಾಗಿ ಸರಣಿ ಪ್ರಸ್ತುತ 1-1 ರಿಂದ ಸಮಬಲಗೊಂಡಿದೆ. ಇದೀಗ ಸರಣಿ ಭಾರತದ ಪಾಲಾಗಬೇಕಾದರೆ, ಮೂರನೇ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇದೆಲ್ಲದರ ನಡುವೆ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದ್ದು, ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಟಿ20 ಸರಣಿಗೂ ಅಲಭ್ಯ ಎನ್ನಲಾಗುತ್ತಿದೆ.

ವಾಸ್ತವವಾಗಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮುಗಿದ ಬಳಿಕ ಇದೇ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯ ಬಳಿಕ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ಟಿ20 ವಿಶ್ವಕಪ್ಗೆ ತಯಾರಿಯ ದೃಷ್ಟಿಯಿಂದ ಕಿವೀಸ್ ವಿರುದ್ಧದ ಟಿ20 ಸರಣಿ ಟೀಂ ಇಂಡಿಯಾಗೆ ಬಹಳ ಮುಖ್ಯವಾಗಿದೆ. ಹೀಗಿರುವಾಗ ಸುಂದರ್ ಈ ಸರಣಿಗೆ ಅಲಭ್ಯರಾಗುತ್ತಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ.

ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ವಾಷಿಂಗ್ಟನ್ ಸುಂದರ್ ಬೆನ್ನು ನೋವಿಗೆ ತುತ್ತಾಗಿದ್ದರು. ಇದರಿಂದಾಗಿ ಅವರು ಅರ್ಧಕ್ಕೆ ಆಟ ನಿಲ್ಲಿಸಿ ಮೈದಾನವನ್ನು ತೊರೆದಿದ್ದರು. ಆ ಬಳಿಕ ಸುಂದರ್ಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಅವರಿಗೆ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ವರದಿಗಳ ಪ್ರಕಾರ, ವೈದ್ಯಕೀಯ ತಂಡವು ಸುಂದರ್ಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದೆ. ಹೀಗಾಗಿ ಅವರು ಮುಂದಿನ ವಾರ ಚೇತರಿಸಿಕೊಳ್ಳಲು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ತೆರಳಲಿದ್ದಾರೆ.

ವಾಷಿಂಗ್ಟನ್ ಸುಂದರ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿರುವ ಕಾರಣ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರನ್ನು ಅಪಾಯಕ್ಕೆ ಸಿಲುಕಿಸಲು ತಂಡದ ಆಡಳಿತ ಮಂಡಳಿ ಬಯಸಲಿಲ್ಲ ಎಂದು ವರದಿಯಾಗಿದೆ. ಆರಂಭದಲ್ಲಿ, ಅವರು ಸರಣಿಯ ನಂತರದ ಪಂದ್ಯಗಳಲ್ಲಿ ಆಡಬಹುದು ಎಂದು ಆಶಿಸಲಾಗಿತ್ತು, ಆದರೆ ಈಗ ಅವರು ಈ ಸರಣಿಯಲ್ಲಿ ಭಾಗವಹಿಸುವುದಿಲ್ಲ. ಆದಾಗ್ಯೂ, ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಅವರು ನಂತರದ ಹಂತಗಳಲ್ಲಿ ತಂಡವನ್ನು ಸೇರುವ ಸಾಧ್ಯತೆಯಿದೆ.

ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಐದು ಓವರ್ ಬೌಲಿಂಗ್ ಮಾಡಿ ಗಾಯದಿಂದ ಮೈದಾನ ತೊರೆದರು. ಆದಾಗ್ಯೂ, ಮಧ್ಯಮ ಕ್ರಮಾಂಕದ ವೈಫಲ್ಯದ ನಂತರ ಅವರು ಬ್ಯಾಟಿಂಗ್ಗೆ ಮರಳಿದರು. ಭಾರತದ ಚೇಸಿಂಗ್ನಲ್ಲಿ ಅವರು 7 ಎಸೆತಗಳಲ್ಲಿ 7 ರನ್ ಗಳಿಸಿ, ರಾಹುಲ್ ಅವರೊಂದಿಗೆ ಕ್ರೀಸ್ನಲ್ಲಿ ನೆಲೆ ನಿಂತು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.