
ಖಾಲಿ ಎತ್ತಿನ ಬಂಡಿಗೆ ಹೆಗಲು ಕೊಟ್ಟು ಜಿದ್ದಿಗೆ ಬಿದ್ದಿರುವ ಕುದುರೆಗಳು. ನಾವೇನೂ ಕಮ್ಮಿ ಎಂದು ಎತ್ತುಗಳು ಕೂಡ ಓಟಕ್ಕಿಳಿದಿದ್ದವು. ಎತ್ತುಗಳಿಗೆ ಸಿಂಗಾರಗೊಳಿಸಿ ಸ್ಪರ್ಧೆಗಿಳಿಸಿದ್ರೆ, ಇತ್ತ ರನ್ನಿಂಗ್ ರೇಸ್ಗೆ ಶಿಳ್ಳಿ, ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸುತ್ತಾ ಪ್ರೋತ್ಸಾಹ ನೀಡಿದರು. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ.

ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮದಲ್ಲಿ ಅದ್ದೂರಿಯಾಗಿ ಬಿರೇಶ್ವರ ದೇವರ ಜಾತ್ರೆಯನ್ನ ಆಚರಣೆ ಮಾಡಲಾಗುತ್ತಿದೆ. ಇನ್ನು ಜಾತ್ರೆಯ ಕೊನೆಯ ದಿನದಂದು ಎತ್ತುಗಳು ಮತ್ತು ಕುದುರೆಗಳ ಖಾಲಿ ಗಾಡಿ ಓಡಿಸುವ ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತೆ.

ಗೆದ್ದ ಎತ್ತುಗಳಿಗೆ ಹನ್ನೊಂದು ಲಕ್ಷ ರೂಪಾಯಿ ಬಹುಮಾನ ನೀಡಿದ್ರೇ, ಇತ್ತ ಗೆದ್ದ ಕುದುರೆಗೂ ಹತ್ತು ಲಕ್ಷ ಬಹುಮಾನ ನೀಡುತ್ತಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ಮೊದಲು ಎತ್ತುಗಳು ಓಟ ಶುರು ಮಾಡಲಾಗುತ್ತೆ. ಸುಮಾರು ಇಪ್ಪತ್ತೈದು ಜೋಡಿಗಳು ಏಕಕಾಲಕ್ಕೆ ಓಟ ಆರಂಭಿಸುತ್ತವೆ. ಯಕ್ಸಂಬಾ ಗ್ರಾಮದ ಹೊರ ವಲಯದ ಮಲ್ಲಿಕವಾಡ ರಸ್ತೆ ಮಾರ್ಗವಾಗಿ ನನದಿ ಕ್ರಾಸ್ ವರೆಗೂ ನಾಲ್ಕು ಕಿಮೀ ಓಟ ಆಯೋಜನೆ ಮಾಡಲಾಗಿತ್ತು.

ಈ ಓಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ, ಮಿರಜ್ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಎತ್ತುಗಳ ಸಮೇತ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಎತ್ತಿನ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಮೂಲದ ಛಬ್ಬಿ ಎಂಬುವವರು ಮೊದಲ ಸ್ಥಾನ ಪಡೆದು ಹನ್ನೊಂದು ಲಕ್ಷ ಬಹುಮಾನ ಗೆದ್ದು ಸಂಭ್ರಮಿಸಿದರು.

ಇನ್ನು ಎತ್ತುಗಳ ಓಟ ಮುಗಿಯುತ್ತಿದ್ದಂತೆ ಶುರುವಾಗಿದ್ದು, ಕುದುರೆಗಳ ಖಾಲಿ ಗಾಡಿ ಓಡಿಸುವ ಸ್ಪರ್ಧೆ. ಮೂವತ್ತಕ್ಕೂ ಅಧಿಕ ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿ, ಮುದೋಳ, ಬಾಗಲಕೋಟೆ, ವಿಜಯಪುರ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ಇತ್ತ ಬಿರೇಶ್ವರ ದೇವರ ಜಾತ್ರೆಗೆ ಬಂದ ಸಾವಿರಾರು ಜನರು ಈ ಎರಡು ಓಟದ ಸ್ಪರ್ಧೆಯನ್ನ ಕಣ್ಣು ತುಂಬಿಕೊಂಡು ಎಂಜಾಯ್ ಮಾಡಿದರು. ನಾಲ್ಕು ಕಿಮೀ ರಸ್ತೆಯೂದ್ದಕ್ಕೂ ಜನ ನಿಂತು ಶಿಳ್ಳೆ, ಚಪ್ಪಾಳೆ, ಕೇಕೆ ಹೊಡೆಯುವುದರ ಮೂಲಕ ಹುರಿದುಂಬಿಸುವ ಕೆಲಸ ಮಾಡಿದರು.

ಕೊವಿಡ್ ನಿಂದ ದೇಸಿ ಕ್ರೀಡೆಗೆ ಬ್ರೇಕ್ ಬಿತ್ತು ಆದ್ರೇ ಇದೀಗ ಸ್ಥಳೀಯ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಆಸಕ್ತಿ ಮೆರೆಗೆ ಇಂದು ಕುದುರೆ ಮತ್ತು ಎತ್ತುಗಳು ಓಟದ ಸ್ಪರ್ಧೆಯನ್ನ ಜನ ಕಣ್ತುಂಬಿಕೊಳ್ಳುವಂತೆ ಆಗಿದೆ. ಕ್ರೀಡಾಭಿಮಾಣಿಗಳು, ಗ್ರಾಮೀಣ ಭಾಗದ ಜನರು ಕೂಡ ಸ್ಪರ್ಧೆ ಕಂಡು ಹುಚ್ಚೆದ್ದು ಕುಣಿದಿದ್ದಾರೆ.

ಒಟ್ಟಿನಲ್ಲಿ ಈಗಾಗಲೇ ಅಳಿವಿನ ಅಂಚಿನಲ್ಲಿ ಎತ್ತುಗಳಿವೆ. ಟ್ರ್ಯಾಕ್ಟರ್ ಬಂದ ಮೇಲೆ ಉಳುಮೆ ಮಾಡಲು ಎತ್ತುಗಳನ್ನ ಬಿಟ್ಟಿದ್ದು ಇಂತಹ ಸ್ಪರ್ಧೆಗಳಿಂದ ಇದೀಗ ರೈತರಿಗೂ ಉತ್ತೇಜನ ಸಿಕ್ಕಂತಾಗುತ್ತಿದೆ. ಇತ್ತ ಜಾತ್ರೆ ಸಂದರ್ಭದಲ್ಲಿ ಈ ರೀತಿ ದೇಸಿ ಕ್ರೀಡೆಗಳನ್ನ ಆಯೋಜಿಸಿ ಸಾವಿರಾರು ಜನರನ್ನ ಸೆಳೆಯುವ ಕೆಲಸ ಮಾಡುತ್ತಿದ್ದು. ಇದಕ್ಕೆ ಸರ್ಕಾರವೂ ಉತ್ತೇಜನ ನೀಡಬೇಕು ಎನ್ನುವುದು ಕ್ರೀಡಾಭಿಮಾನಿಗಳ ಆಶಯ.
Published On - 6:22 pm, Sun, 11 February 24