
ಎಂತಹ ವಿಪರ್ಯಾಸ, ಕಳೆದ ಒಂದು ತಿಂಗಳಿಂದ ನಿರಂತರವಾಗಿ ಎಡಬಿಡದೆ ಮಳೆ ಸುರಿಯುತ್ತಿದ್ದರೂ ಹಾವೇರಿ ಜಿಲ್ಲೆಯಲ್ಲಿ ಇರುವ ಬಹುತೇಕ ಕೆರೆಗಳು ಖಾಲಿ ಖಾಲಿಯಾಗಿ ಇವೆ. ಮಳೆಗಾಲದಲ್ಲಿ ಈ ಪರಿಸ್ಥಿತಿಯಾದರೆ ಮುಂದೆ ಬೇಸಿಗೆಯಲ್ಲಿ ಏನು ಎಂದು ರೈತರು ಆತಂಕ ಪಡುತ್ತಿದ್ದಾರೆ.

ಹೀಗಾಗಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಕೋಡ ಗ್ರಾಮದ ರೈತರು ಖಾಲಿಯಾದ ಕೆರೆಯಲ್ಲಿಯೇ ಪ್ರತಿಭಟನೆಗೆ ಕುಳಿತಿದ್ದಾರೆ. ಗ್ರಾಮದ 100 ಎಕರೆ ಬೃಹತ್ ಕೆರೆಯಲ್ಲಿ ಹನಿ ನೀರಿಲ್ಲ, ನೂರಾರು ಕೋಟಿ ಖರ್ಚು ಮಾಡಿ ಅಸುಂಡಿ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವ ಕಾಮಗಾರಿ ಪೂರ್ಣಗೊಂಡರು ಪ್ರಯೋಜನವಾಗಿಲ್ಲ.

ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ರೈತರು ಹೇಳುತ್ತಿದ್ದಾರೆ. ಕಾಮಗಾರಿ ಮುಗಿದು ಮೂರು ವರ್ಷ ಕಳೆದರೂ ಕೆರೆಗೆ ಹನಿ ನೀರು ಬಂದಿಲ್ಲ, ಕೇಳಿದರೆ ಪೈಪ್ ಲೈನ್ ಒಡೆದಿದೆ. ಕರೆಂಟ್ ಇಲ್ಲ, ಹೀಗೆ ಸಾಲು ಸಾಲು ಸಮಸ್ಯೆ ಹೇಳುತ್ತಿದ್ದಾರೆ.

ಕೆರೆಗೆ ನೀರು ಹರಿಸಲು ಶಾಸಕರಿಗೆ ಮನವಿ ಮಾಡಿಕೊಂಡರು ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಹೀಗಾಗಿ ಬೇಸತ್ತ ರೈತರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಗ್ರಾಮಕ್ಕೆ ಅಂಟಿಕೊಂಡು ಇರುವ ಈ ಕೆರೆ ನಂಬಿಕೊಂಡು ತೋಟಗಾರಿಕೆ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.

ಕೆರೆ ಮತ್ತು ಅಂತರ್ಜಲ ನಂಬಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳದು ಕಣ್ಣೀರು ಇಡುತ್ತಿದ್ದಾರೆ. ಕಳೆದ ಬಾರಿ ಬರಗಾಲಕ್ಕೆ ಬೋರ್ವೇಲ್ಗಳು ಬತ್ತಿಹೋಗಿವೆ. ಈ ಬಾರಿ ಮಳೆಯಾಗಿದೆ, ಕೆರೆ ತುಂಬಿದರೆ ಅಂತರ್ಜಲ ಹೆಚ್ಚಾಗುತ್ತೆ ಎಂದುಕೊಂಡಿದ್ದ ರೈತರಿಗೆ ನಿರಾಸೆ ಮೂಡಿದೆ.

ಈ ಭಾರಿ ಕೆರೆ ತುಂಬದೆ ಹೋದರೆ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಹಾವೇರಿ ಜಿಲ್ಲೆಯ ಅನ್ನದಾತರ ಪಾಡು ದೇವರು ವರ ಕೊಟ್ಟರೂ, ಪುಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾದರೆ. ರೈತರಿಗೆ ಅನುಕೂಲವಾಗಲಿದೆ.
Published On - 6:11 pm, Sat, 10 August 24